ರೈತರಿಗೂ ಬೆಂಬಲ, ಬಿಜೆಪಿ ನಿಲುವಿಗೂ ಜೈ ಎಂದ ಸಂಸದ ಸನ್ನಿ
ಶಿಮ್ಲಾ, ಡಿ. 7: ಕೇಂದ್ರ ಸರ್ಕಾರದ ಕೃಷಿ ವಿಧೇಯಕಗಳನ್ನು ವಿರೋಧಿಸಿ 12 ದಿನಗಳಿಂದ ಪ್ರತಿಭಟನೆ ನಡೆಸಿರುವ ರೈತ ಸಮೂಹಕ್ಕೆ ಬಿಜೆಪಿ ಸಂಸದ ಸನ್ನಿ ಡಿಯೋಲ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ, ಇದೇ ವೇಳೆ ರೈತರ ಹಿತ ಕಾಪಾಡುವಲ್ಲಿ ಬಿಜೆಪಿ ಸರ್ಕಾರದ ನಿಲುವು ಸರಿಯಾಗಿದೆ ಎಂದಿದ್ದಾರೆ.
ಪಂಜಾಬ್ ಹಾಗೂ ಹರ್ಯಾಣ ಮೂಲದ ರೈತರು ದೆಹಲಿ ಗಡಿ ಭಾಗದಲ್ಲಿ ನವೆಂಬರ್ 26ರಿಂದ ಪ್ರತಿಭಟನಾ ನಿರತರಾಗಿದ್ದಾರೆ. ಸರ್ಕಾರದ ಜೊತೆಗೆ ಸತತ ಮಾತುಕತೆ ವಿಫಲವಾದ ಬಳಿಕ ಹೋರಾಟವನ್ನು ಮುಂದಿನ ಹಂತಕ್ಕೆ ಕರೆದೊಯ್ಯಲು ಡಿಸೆಂಬರ್ 8ರಂದು ಭಾರತ್ ಬಂದ್ ಆಚರಿಸಲು ಕರೆ ನೀಡಿದ್ದಾರೆ.
ಕೇಂದ್ರ ಸರಕಾರ ರೈತರ ಹಾಗೂ ದೇಶ ವಿರೋಧಿ ಮತ್ತು ಕಾರ್ಪೋರೇಟ್ ಕಂಪನಿ ಪರವಾದ ಕೃಷಿ ಕಾಯ್ದೆಗಳು ಮತ್ತು ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ- 2020 ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ - 2020 ಗಳನ್ನು ಬೇಷರತ್ತಾಗಿ ವಾಪಾಸು ಪಡೆಯುವಂತೆ ಒತ್ತಾಯಿಸಿ, ದೇಶದ 500 ಕ್ಕೂ ಹೆಚ್ಚು ರೈತ ಸಂಘಗಳು ಕಳೆದ ಹದಿನೈದು ದಿನಗಳಿಂದ ದೇಶದಾದ್ಯಂತ ರೈತರು ಹೋರಾಟ ನಡೆಸಿದ್ದಾರೆ.

ದೇಶದ ಆಹಾರದ ಭದ್ರತೆ, ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆ ಮತ್ತು ಸಾರ್ವಭೌಮತೆಗೆ ದಕ್ಕೆ ತರಲಿರುವ ಅವುಗಳನ್ನು ಕೂಡಲೇ ವಾಪಸ್ ಪಡೆಯುವಂತೆ ರೈತರು ಒತ್ತಾಯಿಸುತ್ತಿರುವ ಸಂದರ್ಭದಲ್ಲೇ ತಮ್ಮ ಆಪ್ತ ದೀಪ್ ಸಿಧು ನೀಡಿರುವ ಹೇಳಿಕೆಗೆ ಸಮ್ಮತವಿಲ್ಲ ಎಂದಿದ್ದಾರೆ.
64 ವರ್ಷ ವಯಸ್ಸಿನ ಸನ್ನಿ ಡಿಯೋಲ್ ಪ್ರತಿಕ್ರಿಯಿಸಿ, ಚುನಾವಣೆ ಸಂದರ್ಭದಲ್ಲಿ ನನ್ನ ಜೊತೆಗಿದ್ದ ದೀಪ್ ಸಿಧು ಈಗ ನನ್ನ ಜೊತೆಗಿಲ್ಲ, ಆತನ ಹೇಳಿಕೆಗೂ ನನಗೂ ಸಂಬಂಧವಿಲ್ಲ, ರೈತರ ಹಿತ ಕಾಯಲು ಬಿಜೆಪಿ ಸರ್ಕಾರ ಸದಾ ಬದ್ಧವಾಗಿದೆ. ನಾನು ನನ್ನ ಪಕ್ಷ ಹಾಗೂ ರೈತರ ಪರವೂ ಇದ್ದೇನೆ ಎಂದಿದ್ದಾರೆ.
ಕೊರೊನಾ ಸೋಂಕಿನಿಂದ ಬಳಲುತ್ತಿರುವ ಡಿಯೋಲ್ ಅವರು ಮನಾಲಿಯ ತೋಟದ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಚೇತರಿಕೆ ಹೊಂದುತ್ತಿದ್ದಾರೆ.












Click it and Unblock the Notifications