ಮಧ್ಯಪ್ರದೇಶದಲ್ಲಿ ರೈತರ ಮೇಲೆ ಗೋಲಿಬಾರ್, ಸಾವಿನ ಸಂಖ್ಯೆ 5ಕ್ಕೆ ಏರಿಕೆ
ಭೋಪಾಲ್, ಜೂನ್ 6: ಮಧ್ಯಪ್ರದೇಶದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಸಾವಿಗೀಡಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಹಲವು ರೈತರು ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಮಂಡಸೌರ್ ಪ್ರದೇಶದಲ್ಲಿ ರೈತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸುತ್ತಿದ್ದವು. ಈ ವೇಳೆ ಪೊಲೀಸರೊಂದಿಗೆ ಘರ್ಷಣೆ ಉಂಟಾಗಿದ್ದು ಪರಿಸ್ಥಿತಿ ಹತ್ತಿಕ್ಕಲು ಪೊಲೀಸರು ಗೋಲಿಬಾರ್ ನಡೆಸಿದ್ದಾರೆ. ಪರಿಣಾಮ ಐದು ರೈತರು ಸಾವನ್ನಪ್ಪಿ ಕನಿಷ್ಠ ನಾಲ್ಕು ಜನ ಗಾಯಗೊಂಡಿದ್ದಾರೆ.
ಇನ್ನು ಹಲವು ಪ್ರದೇಶಗಳಲ್ಲಿ ಸರಕಾರ ಕರ್ಫ್ಯೂ ಹೇರಿದೆ. ಜತೆಗೆ ಪ್ರಕರಣದ ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆದೇಶ ನೀಡಿದ್ದಾರೆ. "ಸರಕಾರ ರೈತರ ಪರವಾಗಿದೆ. ಆದರೆ ಗಲಭೆಗೆ ರೈತರನ್ನು ಕಾಂಗ್ರೆಸ್ ಪ್ರಚೋದಿಸುತ್ತಿದೆ," ಎಂದು ಅವರು ದೂರಿದ್ದಾರೆ.
ಇನ್ನು ದಿನದ ಆರಂಭದಲ್ಲಿ ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಹೀಗಿದ್ದೂ ಪ್ರತಿಭಟನೆ ಜೋರಾದ ಹಿನ್ನಲೆಯಲ್ಲಿ ರೈತರ ಮೇಲೆ ಗುಂಡು ಹಾರಿಸಲಾಗಿದೆ.
ಈ ಹಿಂದೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭರವಸೆಯ ನಂತರ, ಸಂಸದ ಕಿರಣ್ ಸೇನಾ ಮತ್ತು ಬಾರತೀಯ ಕಿಸಾನ್ ಸಂಘ ತನ್ನ ಪ್ರತಿಭಟನೆ ಹಿಂತೆಗೆದುಕೊಂಡಿತ್ತು. ಆದರೆ ಉಳಿದ ರೈತ ಸಂಘಟನೆಗಳು ಇನ್ನೂ ಪ್ರತಿಭಟನೆ ಮುಂದುವರಿಸಿವೆ.
ಇದೇ ವೇಳೆ ರತ್ಲಾಮ್ ಮತ್ತು ನೀಮುಂಚ್ ನಲ್ಕೂ ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಈ ಹಿಂದೆ ಮಹಾರಾಷ್ಟ್ರದ ನಾಸಿಕ್ ನಲ್ಲೂ ರೈತರ ಪ್ರತಿಭಟನೆಯಿಂದ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಲಾಗಿತ್ತು.
ಅತ್ತ ಮಹಾರಾಷ್ಟ್ರ, ಮಧ್ಯಪ್ರದೇಶ ಮಾತ್ರವಲ್ಲದೆ ಕರ್ನಾಟಕ ಮತ್ತು ತಮಿಳುನಾಡಿನಲ್ಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಒಟ್ಟಾರೆ ದೇಶದೆಲ್ಲೆಡೆ ರೈತರ ಹಾಹಾಕಾರ ಜೋರಾಗಿದೆ. (ಒನ್ ಇಂಡಿಯಾ ಸುದ್ದಿ)