ಕೃಷಿ ಮಸೂದೆ ಅಂಗೀಕಾರ, ಸೆಪ್ಟೆಂಬರ್ 25ರಂದು ಬಂದ್ಗೆ ಕರೆ
ನವದೆಹಲಿ, ಸೆ. 21: ಸಂಸತ್ತಿನ ಮೇಲ್ಮನೆಯಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆ ಕೃಷಿ ಸಂಬಂಧಿತ ಎರಡು ಮಸೂದೆಗಳನ್ನು ಅಂಗೀಕರಿಸಲಾಗಿದೆ. 12 ಪಕ್ಷಗಳ ಸದಸ್ಯರು ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಡೆಯ ವಿರುದ್ಧ ಅವಿಶ್ವಾಸ ಮಂಡಿಸಿದ್ದಾರೆ.
ಕೃಷಿ ಸಂಬಂಧಿಸಿದ ಮಸೂದೆಗಳನ್ನು ತೀವ್ರವಾಗಿ ವಿರೋಧಿಸಿರುವ ಕಾಂಗ್ರೆಸ್ ಹಾಗೂ 12 ಪಕ್ಷಗಳು ಸೆಪ್ಟೆಂಬರ್ 25ರಂದು ಬಂದ್ ಹಾಗೂ ಪ್ರತಿಭಟನೆಗೆ ಕರೆ ನೀಡಿವೆ.
ಪ್ರತಿಪಕ್ಷಗಳ ತೀವ್ರ ವಿರೋಧ ಮತ್ತು ಗದ್ದಲದ ನಡುವೆ ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿತ ಮೂರು ಮಸೂದೆಗಳ ಪೈಕಿ ಎರಡು ಮಸೂದೆಗಳನ್ನು ಭಾನುವಾರ ಧ್ವನಿ ಮತದಾನ ಪ್ರಕ್ರಿಯೆ ಮೂಲಕ ಅಂಗೀಕರಿಸಲಾಯಿತು. ಆದರೆ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೆಲಂಗಾಣ ರಾಷ್ಟ್ರೀಯ ಸಮಿತಿ, ಸಿಪಿಐ, ಸಿಪಿಎಂ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ರಾಷ್ಟ್ರೀಯ ಜನತಾ ದಳ, ಡಿಎಂಕೆ ಮತ್ತು ಆಮ್ ಆದ್ಮಿ ಪಕ್ಷಗಳು ಅವಿಶ್ವಾಸವನ್ನು ಮಂಡಿಸಿವೆ.

ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಮೂರು ಮಸೂದೆಗಳನ್ನು ಹರಿಯಾಣ ಮತ್ತು ಪಂಜಾಬ್ ರೈತರಿಗೆ ಭಾರಿ ಹೊಡೆತ ಕೊಡಲಿದೆ. "ಈ ಮಸೂದೆಗಳನ್ನು ಹರಿಯಾಣ ಮತ್ತು ಪಂಜಾಬ್ ರೈತರ ಆತ್ಮದ ಮೇಲೆ ಕೇಂದ್ರ ಸರ್ಕಾರವು ನಡೆಸುತ್ತಿರುವ ದಾಳಿ" ಎಂದು ಕಾಂಗ್ರೆಸ್ ವಾಖ್ಯಾನಿಸಿದೆ. ಕೃಷಿ ಮತ್ತು ಮಾರುಕಟ್ಟೆ ನಡುವಿನ ಸಹಕಾರಿ ಮನೋಭಾವಕ್ಕೆ ಕೇಂದ್ರ ಸರ್ಕಾರದ ಹೊಸ ನೀತಿಯು ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ಕಳೆದ ಜೂನ್ ತಿಂಗಳಿನಲ್ಲೇ ಕೇಂದ್ರ ಸರ್ಕಾರವು ರೈತರ ಉತ್ಪಾದನೆಯ ವ್ಯಾಪಾರ ಮತ್ತು ವಾಣಿಜ್ಯ(ಪ್ರಚಾರ ಮತ್ತು ಸೌಲಭ್ಯ) ಮಸೂದೆ, ಕೃಷಿ ಸೇವೆ ಮತ್ತು ಬೆಲೆ ನಿಗದಿ ಬಗ್ಗೆ ಒಪ್ಪಂದ (ಸಬಲೀಕರಣ ಮತ್ತು ಸಂರಕ್ಷಣೆ) ಮಸೂದೆ, ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆಗಳನ್ನು ಮಂಡಿಸಿತ್ತು. ವಿಪಕ್ಷಗಳ ವಿರೋಧದ ಹಿನ್ನೆಲೆ ಮುಂದೂಡಿಕೆಯಾಗುತ್ತಿದ್ದ ಮಸೂದೆಗಳಿಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ದೇಶದ ಬಡವ ಮತ್ತು ಮಧ್ಯಮ ವರ್ಗದ ರೈತರಿಗೆ ಈ ಮಸೂದೆಗಳಿಂದ ಹೆಚ್ಚು ಸಹಾಯವಾಗಲಿದೆ ಎಂದು ಕೇಂದ್ರ ಸರ್ಕಾರವು ವಾದಿಸುತ್ತಿದೆ.
"ಮಣ್ಣಿನಿಂದ ಚಿನ್ನವನ್ನು ಬೆಳೆಯುವ ರೈತರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಕಣ್ಣೀರು ಹಾಕಿಸಲು ಹೊರಟಿದೆ. ಕೃಷಿ ಸಂಬಂಧಿತ ಮಸೂದೆ ಹೆಸರಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸುವಂತಾ ಕೆಲಸವನ್ನು ಕೇಂದ್ರ ಸರ್ಕಾರವು ಮಾಡಲು ಹೊರಟಿದೆ. ರಾಜ್ಯಸಭೆಯಲ್ಲಿ ಅಂಗೀಕರಿಸಿದ ಮಸೂದೆಯು ರೈತರ ಪಾಲಿನ ಮರಣ ಶಾಸನವಾಗಲಿದೆ" ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೆ ಮಸೂದೆ ವಿರೋಧಿಸಿ ಪ್ರತಿಭಟನೆ ಆಯೋಜಿಸಲು ಎಐಸಿಸಿ ಸೂಚಿಸಿದೆ. ಮುಖ್ಯವಾಗಿ ಪಂಜಾಬ್ ಹಾಗೂ ಹರ್ಯಾಣದಲ್ಲಿ ಬೃಹತ್ ಪ್ರತಿಭಟನೆ, ಬಂದ್ ಆಯೋಜನೆಗೆ ಸಿದ್ಧತೆ ನಡೆಸಲಾಗಿದ್ದು, ಹಲವು ರೈತ ಮುಖಂಡರು, ರೈತ ಸಂಘಟನೆಗಳು ಕೈಜೋಡಿಸಲು ಮುಂದಾಗಿವೆ.












Click it and Unblock the Notifications