ಎಕ್ಸಿಟ್ ಪೋಲ್ ತಿರುಚಲಾಗಿದೆ, ಇವೆಲ್ಲಾ ಸುಳ್ಳಿನ ಸಂತೆ : ವೀರಭದ್ರ ಸಿಂಗ್
ಶಿಮ್ಲಾ, ಡಿಸೆಂಬರ್ 17: ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿರುವ ಚುನಾವಣೋತ್ತರ ಸಮೀಕ್ಷೆಗಳನ್ನು ಮುಖ್ಯಮಂತ್ರಿ ವೀರಭದ್ರ ಸಿಂಗ್ ತಿರಸ್ಕರಿಸಿದ್ದಾರೆ.
ಎಕ್ಸಿಟ್ ಪೋಲ್ ಗಳು ವಸ್ತುನಿಷ್ಠವಾಗಿಲ್ಲ ಎಂದಿರುವ ಅವರು ಇವೆಲ್ಲಾ ಬೋಗಸ್, ತಿರುಚಿದ ಸಮೀಕ್ಷೆಗಳು ಎಂದು ಶನಿವಾರ ಕಿಡಿಕಾರಿದ್ದಾರೆ.

"ಎಕ್ಸಿಟ್ ಪೋಲ್ ಗಳು ಬೋಗಸ್. ಇವುಗಳನ್ನು ತಿರುಚಲಾಗಿದೆ; ವಸ್ತುನಿಷ್ಠ ವಿಷಯಗಳನ್ನು ಇವು ಒಳಗೊಂಡಿಲ್ಲ. ನಾನು ಹಿಮಾಚಲ ಪ್ರದೇಶದ ಮೂಲೆ ಮೂಲೆಗಳಿಗೆ ಭೇಟಿ ನೀಡಿದ್ದೇನೆ. ಜನರು ಕಾಂಗ್ರೆಸ್ ಪರವಾಗಿದ್ದಾರೆ. ಬಹುಮತ ಪಡೆದು ಕಾಂಗ್ರೆಸ್ ವಿಜಯಿಯಾಗುತ್ತದೆ ಎಂಬ ಭರವಸೆ ನನಗಿದೆ," ಎಂದು ಅವರು ಹೇಳಿದ್ದಾರೆ.
ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ 68 ಸ್ಥಾನಗಳಿದ್ದು ಬಿಜೆಪಿ ಭರ್ಜರಿ ಜಯ ದಾಖಲಿಸಲಿದೆ ಎಂದು ಹೆಚ್ಚಿನ ಎಲ್ಲಾ ಸಮೀಕ್ಷೆಗಳು ಹೇಳಿವೆ. ಇಲ್ಲಿ ಬಹುಮತಕ್ಕೆ 35 ಸ್ಥಾನಗಳು ಅಗತ್ಯವಾಗಿದ್ದು ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಇಲ್ಲಿ ಬಿಜೆಪಿ 47-55 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಕಾಂಗ್ರೆಸ್ 13-20 ಸ್ಥಾನಗಳನ್ನು ಹಾಗೂ ಇತರರು 0-2 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.
ಇನ್ನು ನ್ಯೂಸ್ 24 ಕೂಡ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ 55 ಕಾಂಗ್ರೆಸ್ 13 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಒಂದೊಮ್ಮೆ ಚುನಾವಣೋತ್ತರ ಸಮೀಕ್ಷೆಗಳು ನಿಜವಾದಲ್ಲಿ ಹಿಮಾಚಲ ಪ್ರದೇಶದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಆದರೆ ಬರುವುದಿಲ್ಲ ಎಂದು ಹಾಲಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಹೇಳಿದ್ದಾರೆ.












Click it and Unblock the Notifications