ನೀವು ಹೇಳುವುದು ಸತ್ಯಕ್ಕೆ ದೂರವಾಗಿದೆ; ಮೋದಿಗೆ ರೈತ ಪತ್ರ!
ನವದೆಹಲಿ, ಡಿಸೆಂಬರ್ 20: ಕೃಷಿ ನೀತಿಗಳನ್ನು ರದ್ದುಗೊಳಿಸಲು ರೈತರು ನಡೆಸುತ್ತಿರುವ ಹೋರಾಟ ದೆಹಲಿಯಲ್ಲಿ ಮುಂದುವರೆದಿದೆ. ಕೇಂದ್ರ ಕೃಷಿ ಸಚಿವರು ರೈತರಿಗೆ 8 ಪುಟಗಳ ಪತ್ರವನ್ನು ಬರೆದಿದ್ದರು. ಪ್ರತಿಭಟನೆ ವಾಪಸ್ ಪಡೆಯುವಂತೆ ಪತ್ರದಲ್ಲಿ ಮನವಿ ಮಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಸಹ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ ಬರೆದಿದ್ದ ಪತ್ರವನ್ನು ಟ್ವೀಟ್ ಮಾಡಿದ್ದರು. ರೈತರು ಪ್ರತಿಭಟನೆ ವಾಪಸ್ ಪಡೆಯಬೇಕು ಎಂದು ಅವರು ಸಹ ಮನವಿಯನ್ನು ಮಾಡಿಕೊಂಡಿದ್ದರು.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್ಸಿಸಿ) ಪ್ರಧಾನಿ ನರೇಂದ್ರ ಮೋದಿ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್ಗೆ ಪತ್ರವನ್ನು ಬರೆದಿದ್ದಾರೆ. "ನೀವು ಹೇಳುತ್ತಿರುವುದು ಸತ್ಯಕ್ಕೆ ದೂರವಾಗಿದೆ" ಎಂದು ಹೇಳಿದ್ದಾರೆ.

"ಪ್ರತಿಭಟನೆ ನಡೆಸುತ್ತಿರುವ ರೈತರ ಸಮಸ್ಯೆಯನ್ನು ಬಗೆಹರಿಸುವುದು ಬಿಟ್ಟು, ರೈತರ ಮೇಲೆ ನೀವು ಕಳೆದ ಎರಡು ದಿನಗಳಿಂದ ಮಾಡುತ್ತಿರುವ ಆರೋಪಗಳು ಅವರ ಮೇಲೆ ನಿಮಗೆ ಯಾವುದೇ ಕಾಳಜಿ ಇಲ್ಲ ಎಂಬುದನ್ನು ತೋರಿಸುತ್ತದೆ" ಎಂದು ಪತ್ರದಲ್ಲಿ ಎಐಕೆಎಸ್ಸಿಸಿ ಆರೋಪಿಸಿದೆ.
"ರೈತರು ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ತನ್ನ ಹೇಳಿಕೆಗಳ ಮೂಲಕ ರೈತರು ಮತ್ತು ಜನರ ನಡುವೆ ಗೊಂದಲವನ್ನು ಸೃಷ್ಟಿಸುವ ಕೆಲಸವನ್ನು ಮಾಡುತ್ತಿದೆ. ರೈತರ ಸಮಸ್ಯೆಯನ್ನು ಈ ಮೂಲಕ ಮರೆಮಾಚಲಾಗುತ್ತಿದೆ" ಎಂದು ದೂರಲಾಗಿದೆ.
"ಮುಂದಿನ ಎರಡು ಮೂರು ದಿನಗಳಲ್ಲಿ ನಮ್ಮ ಜೊತೆ ಮತ್ತೆ ಸಭೆ ನಡೆಸುವಿರಿ ಎಂಬ ನಂಬಿಕೆ ಇದೆ. ಮುಂದಿನ ಸಭೆ ಬಳಿಕ ನಮ್ಮ ಮುಂದಿನ ಹೋರಾಟದ ರೂಪುರೇಷೆಯನ್ನು ತಯಾರು ಮಾಡಲಿದ್ದೇವೆ" ಎಂದು ರೈತರು ಪತ್ರದಲ್ಲಿ ತಿಳಿಸಿದ್ದಾರೆ.
ರೈತ ಹೋರಾಟದಲ್ಲಿ ತೊಡಗಿರುವ ನಾಯಕ ಬಲ್ ಬೀರ್ ಸಿಂಗ್, "ನಮ್ಮ ಬೇಡಿಕೆ ಈಡೇರುವ ತನಕ ನಾವು ಪ್ರತಿಭಟನೆಯನ್ನು ವಾಪಸ್ ಪಡೆಯುವುದಿಲ್ಲ. ಹಲವು ದಿನಗಳ ಕಾಲ ಪ್ರತಿಭಟನೆ ಮುಂದುವರೆಸಲು ನಾವು ಸಿದ್ಧ. ನಮ್ಮ ಹಕ್ಕಿಗಾಗಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಕೃಷಿ ನೀತಿಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 23ನೇ ದಿನಕ್ಕೆ ತಲುಪಿದೆ. ದೆಹಲಿಯಲ್ಲಿ ಇಂದು 3.4 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ.












Click it and Unblock the Notifications