ಸಾಮಾಜಿಕ ಮಾಧ್ಯಮಗಳ ಮೂಲಕ ಚುನಾವಣೆಗಳ ಮೇಲೆ ಹಿಡಿತ ಸಾಧಿಸಬಹುದು: ರಾಹುಲ್ ಗಾಂಧಿ
ನವದೆಹಲಿ, ನವೆಂಬರ್ 16: ಸಾಮಾಜಿಕ ಮಾಧ್ಯಮಗಳನ್ನು ದುರಪಯೋಗ ಪಡಿಸಿಕೊಳ್ಳುವ ಮೂಲಕ ಚುನಾವಣೆಗಳ ಮೇಲೆ ನಿಯಂತ್ರಣ ಹೊಂದಬಹುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಮಹಾರಾಷ್ಟ್ರದಲ್ಲಿ ಸಾಗುತ್ತಿರುವ ಭಾರತ್ ಜೋಡೊ ಯಾತ್ರೆ ವೇಳೆ ಸಾಮಾಜಿಕ ಕಾರ್ಯಕರ್ತರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಿದರು.
ರಾಹುಲ್ ಗಾಂಧಿ 'ಭಾರತ್ ಜೋಡೊ ಯಾತ್ರೆ' ಯಶಸ್ಸು ಕೇವಲ ನನ್ನೊಬ್ಬನದಲ್ಲ: ಡಿಕೆ ಶಿವಕುಮಾರ್
ಸಾಮಾಜಿಕ ಮಾಧ್ಯಮಗಳ ಮೂಲಕ ಚುನಾವಣೆಗಳ ಮೇಲೆ ನಿಯಂತ್ರಣ ಹೊಂದಬಹುದು. ಸಾಮಾಜಿಕ ಮಾಧ್ಯಮ ಕಂಪನಿಗಳು ಬಯಸಿದರೆ, ಯಾವುದೇ ಪಕ್ಷವನ್ನು ಚುನಾವಣೆಗಳಲ್ಲಿ ಗೆಲ್ಲುವಂತೆ ಮಾಡಬಹುದು ಎಂದು ಅವರು ತಿಳಿಸಿದರು.
ಒಂದು ಸಿದ್ಧಾಂತವನ್ನು ಪ್ರತಿಪಾದಿಸುವ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಸಮಾಜದಲ್ಲಿ ದ್ವೇಷ ಹಬ್ಬಿಸುತ್ತಿದ್ದಾರೆ. ಕೋಮು ಸಂಘರ್ಷ, ಕೋಮು ದ್ವೇಷ ಹಾಗೂ ಕೋಮು ಗಲಭೆಗಳನ್ನು ಕಾರ್ಯತಂತ್ರದ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಅವರು ಪ್ರತಿಪಾದಿಸಿದರು.
ಸಾಮಾಜಿಕ ಕಾರ್ಯಕರ್ತರಾದ ಮೇಧಾ ಪಾಟ್ಕರ್ ಮತ್ತು ಜಿ.ಜಿ.ಪಾರಿಖ್ ನೇತೃತ್ವದ ನಾಗರಿಕ ಸಮಾಜದ ಸದಸ್ಯರೊಂದಿಗೆ ಸಂವಾದ ನಡೆಸುವಾಗ ರಾಹುಲ್ ಈ ಹೇಳಿಕೆಗಳನ್ನು ನೀಡಿದರು.
'ಇವಿಎಂ ಸುರಕ್ಷಿತವಾಗಿದ್ದರೂ ಸಹ, ಸಾಮಾಜಿಕ ಮಾಧ್ಯಮಗಳ ಮೂಲಕ ಭಾರತದ ಚುನಾವಣೆಗಳ ಮೇಲೆ ಹಿಡಿತ ಸಾಧಿಸಬಹುದು. ದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಗಳು ಬಯಸಿದರೆ, ಯಾವುದೇ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಬಹುದು. ಇಲ್ಲಿ ವ್ಯವಸ್ಥಿತ ಪಕ್ಷಪಾತವನ್ನು ಅನುಸರಿಸಲಾಗುತ್ತಿದೆ' ಎಂದು ರಾಹುಲ್ ತಿಳಿಸಿದರು.
ಪ್ರಜಾಪ್ರಭುತ್ವದ ಉಳಿವು ಹಾಗೂ ಕೋಮು ಸೌಹಾರ್ದದಂತಹ ಸಂಬಂಧಿತ ವಿಚಾರಗಳ ಬಗ್ಗೆ ಸಂವಾದದಲ್ಲಿ ಪ್ರಸ್ತಾಪಿಸಲಾಯಿತು.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ದಕ್ಷಿಣ ಭಾರತದ ಕೇರಳ, ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣಗಳಲ್ಲಿ ಯಾತ್ರೆ ಸಾಗಿದೆ. ಪ್ರಸ್ತುತ ಯಾತ್ರೆಯು ಮಹಾರಾಷ್ಟ್ರದಲ್ಲಿ ಸಾಗುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದ ಶ್ರೀನಗರದ ವರೆಗೂ ನಡೆಯುವ ಭಾರತ್ ಜೋಡೊ ಯಾತ್ರೆಯು ಸುಮಾರು 3500 ಕಿಮೀ ದೂರವನ್ನು ಕ್ರಮಿಸಲಿದೆ.