ಆರ್ಥಿಕತೆ ಕುಸಿಯುತ್ತಿದೆ, ಕಾಮಿಡಿ ಸರ್ಕಸ್ ನಿಲ್ಲಿಸಿ: ಪ್ರಿಯಾಂಕಾ ಗಾಂಧಿ
ನವದೆಹಲಿ, ಅಕ್ಟೋಬರ್ 19: ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರನ್ನು ಟೀಕಿಸಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಧ್ರಾ ವಾಗ್ದಾಳಿ ನಡೆಸಿದ್ದಾರೆ.
ಗೋಯಲ್ ಹೇಳಿಕೆಯನ್ನು ಖಂಡಿಸಿ ಶನಿವಾರ ಟ್ವೀಟ್ ಮಾಡಿರುವ ಪ್ರಿಯಾಂಕಾ, ಕುಸಿಯುತ್ತಿರುವ ಆರ್ಥಿಕತೆಯನ್ನು ಸುಧಾರಿಸುವುದು ಸರ್ಕಾರದ ಕೆಲಸವೇ ವಿನಾ 'ಕಾಮಿಡಿ ಸರ್ಕಸ್' ನಡೆಸುವುದಲ್ಲ ಎಂದು ಟೀಕಿಸಿದ್ದಾರೆ.
'ಆರ್ಥಿಕತೆಯು ಕುಸಿಯುತ್ತಿದೆ. ಆದರೆ ಅವರು ಕಾಮಿಡಿ ಸರ್ಕಸ್ ನಡೆಸುವುದರಲ್ಲಿ ಬಿಜಿಯಾಗಿದ್ದಾರೆ' ಎಂದು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ಪ್ರಿಯಾಂಕಾ ಹರಿಹಾಯ್ದಿದ್ದಾರೆ.

ಬಿಜೆಪಿ ಸಚಿವರು ಆರ್ಥಿಕತೆಯ ಬಗ್ಗೆ ತಲೆಕೆಡಿಸಿಕೊಳ್ಳುವುದರ ಬದಲು ಇತರರ ಸಾಧನೆಗಳಿಗೆ ಅಗೌರವ ತೋರಿಸುತ್ತಿದ್ದಾರೆ. ನೊಬೆಲ್ ಪುರಸ್ಕೃತರು ಪ್ರಾಮಾಣಿಕವಾಗಿ ಅವರ ಕೆಲಸ ಮಾಡಿದ್ದಾರೆ. ಅದಕ್ಕಾಗಿಯೇ ಅವರಿಗೆ ನೊಬೆಲ್ ದೊರೆತಿದೆ ಎಂದು ಹೇಳಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪಿಯೂಷ್ ಗೋಯಲ್, 'ಅಭಿಜಿತ್ ಬ್ಯಾನರ್ಜಿ ಅವರು ಕಾಂಗ್ರೆಸ್ನ ಚುನಾವಣೆಯ ಪ್ರಣಾಳಿಕೆಯಲ್ಲಿದ್ದ ಕನಿಷ್ಠ ಆದಾಯ ಯೋಜನೆಯಾದ 'ನ್ಯಾಯ್'ಅನ್ನು ಬೆಂಬಲಿಸಿದ್ದರು. ಅದನ್ನು ಭಾರತೀಯ ಮತದಾರರು ತಿರಸ್ಕರಿಸಿದ್ದರು. ಅವರು ಏನು ಯೋಚಿಸುತ್ತಾರೋ ಅದನ್ನು ಒಪ್ಪಿಕೊಳ್ಳಬೇಕಾದ ಅಗತ್ಯವಿಲ್ಲ' ಎಂದಿದ್ದರು.
'ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪಡೆದ ಅಭಿಜಿತ್ ಬ್ಯಾನರ್ಜಿ ಅವರನ್ನು ನಾನು ಮೊದಲು ಅಭಿನಂದಿಸುತ್ತೇನೆ. ಆದರೆ ನಿಮಗೆ ಅವರ ದೃಷ್ಟಿಕೋನ ಮತ್ತು ಸಿದ್ಧಾಂತಗಳ ಬಗ್ಗೆ ತಿಳಿದಿದೆಯೇ? ಅವರು ಭಾರತವು ತಿರಸ್ಕರಿಸಿರುವ ಎಡಪಂಥೀಯ ವಿಚಾರಧಾರೆಗೆ ಸೇರಿದವರು' ಎಂದು ಹೇಳಿದ್ದರು.












Click it and Unblock the Notifications