ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಆರ್‌ಡಿಓ ಮುಖ್ಯಸ್ಥ ಡಾ. ಅವಿನಾಶ್‌ ವಜಾ ಎಷ್ಟು ಸರಿ?

By ಡಾ. ಅನಂತ ಕೃಷ್ಣನ್ ಎಮ್
|
Google Oneindia Kannada News

ಬೆಂಗಳೂರು, ಜ. 15: "ನಿಮ್ಮ ಕೆಲಸವನ್ನು ಪ್ರೀತಿಸಿ, ಕಂಪನಿಯನ್ನಲ್ಲ. ಏಕೆಂದರೆ ಕಂಪನಿ ನಿಮ್ಮನ್ನು ಯಾವಾಗ ಪ್ರೀತಿಸುವುದು ನಿಲ್ಲಿಸುತ್ತದೆ ಎಂಬುದು ಗೊತ್ತಿರುವುದಿಲ್ಲ" ಎಂದು ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಹೇಳಿದ್ದರು. ಅವರ ಮಾತು ಡಿಆರ್‌ಡಿಓ ಅಧ್ಯಕ್ಷ ಡಾ. ಅವಿನಾಶ್‌ಗೆ ಸರಿಯಾಗಿ ಹೋಲುತ್ತದೆ.

ಏಕೆಂದರೆ, ಡಾ. ಅವಿನಾಶ್ ಅವರನ್ನು ಡಿಆರ್‌ಡಿಓ ಮುಖ್ಯಸ್ಥ ಸ್ಥಾನದಿಂದ ಕೇಂದ್ರ ಸರ್ಕಾರ ವಜಾಗೊಳಿಸಿ ಆದೇಶ ಹೊರಡಿಸಿದೆ. ಜ. 31ಕ್ಕೆ ಅವರ ಅಧಿಕಾರ ಅವಧಿ ಮುಗಿಯಲಿದೆ. ಇನ್ನು ಮುಂದೆ ಅವರು ಕಚೇರಿ ಕೆಲಸ ಮರೆತು ಇಷ್ಟಬಂದಂತೆ ಜೀವನ ಆನಂದಿಸಬಹುದು.

ಸುಮಾರು 18 ಗಂಟೆಗಳ ಕಾಲ ಚರ್ಚೆ ನಡೆಸಿದ ನೂತನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಡಿಆರ್‌ಡಿಓ ಮುಖ್ಯಸ್ಥನನ್ನು ಬದಲಾಯಿಸುವ ನಿರ್ಧಾರ ಕೈಗೊಂಡರು. "ಒಪ್ಪಂದದ ಮೇಲೆ ಬಂದಿರುವ ವ್ಯಕ್ತಿಯೋರ್ವ ಡಿಆರ್‌ಡಿಓ ಸಂಸ್ಥೆಯ ಮುಖ್ಯಸ್ಥನ ಸ್ಥಾನದಲ್ಲಿರಬಾರದು" ಎಂದು ಹೇಳಿದರು.

ಆದರೆ, ದೇಶಕ್ಕೆ ಪ್ರಥಮ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ (ಐಸಿಬಿಎಂ) ಕೊಡುಗೆ ನೀಡಿದ ವ್ಯಕ್ತಿಗೆ ಇದಕ್ಕಿಂತ ಉತ್ತಮ ಬೀಳ್ಕೊಡುಗೆ ನೀಡಬೇಕಿತ್ತು ಎಂಬುದು ದೇಶದ ಹಲವು ಹಿರಿಯ ವಿಜ್ಞಾನಿಗಳ ಅಭಿಪ್ರಾಯವಾಗಿದೆ. [ಮೋದಿ ಸಲಹೆಗೆ ಡಿಆರ್ ಡಿಓ ನಡೆಯೇನು?]

avinash

ಯೋಗ್ಯತೆಯ ಮೇಲೇ ಆಯ್ಕೆಯಾಗಿದ್ದರು : ಯುಪಿಎ-2 ಸರ್ಕಾರ ಡಾ. ಅವಿನಾಶ್ ಅವರನ್ನು ಡಿಆರ್‌ಡಿಓ ಮುಖ್ಯಸ್ಥನ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಪಕ್ಕಾ ಯೋಗ್ಯತೆಯ ಆಧಾರದ ಮೇಲೆಯೇ. ಅವರಿಗೆ ಮೂರು ವರ್ಷಗಳ ಅಧಿಕಾರಾವಧಿ ನೀಡಲಾಗಿತ್ತು. ಇದು ಮುಗಿಯಲು ಇನ್ನೂ 15 ತಿಂಗಳು ಬಾಕಿಯಿದ್ದವು. ಆದರೆ, ರಕ್ಷಣಾ ಸಚಿವರ ನಿರ್ಧಾರದಿಂದ ಈಗಲೇ ಹೊರಹೋಗಬೇಕಾಗಿದೆ. ಇತಿಹಾಸ ಅವರನ್ನು ಓರ್ವ ಡಿಆರ್‌ಡಿಓ ಸಂಸ್ಥೆಯಿಂದ ವಜಾಗೊಂಡ ಮುಖ್ಯಸ್ಥ ಎಂದು ನೆನಪಿಟ್ಟುಕೊಳ್ಳುತ್ತದೆ.

"ಡಾ. ಅವಿನಾಶ್ ಮೇಲೆ ಯಾವುದೇ ಆರೋಪ ಪಟ್ಟಿ ಇರಲಿಲ್ಲ. ಯಾವುದೇ ಹಗರಣದಲ್ಲಿ ಭಾಗಿಯಾಗಿರಲಿಲ್ಲ. ಅವರೊಬ್ಬ ಅಪರಾಧಿಯೂ ಅಲ್ಲ." ಹೀಗೆಂದು ಡಿಆರ್‌ಡಿಓ ಹಿರಿಯ ನಿರ್ದೇಶಕರೊಬ್ಬರು ಒನ್ಇಂಡಿಯಾ ಕನ್ನಡಕ್ಕೆ ಹೇಳಿದ್ದಾರೆ.

ನಿರ್ಭಯ ಮಿಸೈಲ್ ಕಾರಣವೇ? : ಡಾ. ಅವಿನಾಶ್ ಯಾವತ್ತೂ ಜನಪ್ರಿಯತೆ ಪಡೆಯಲು ಹೋರಾಡಲಿಲ್ಲ. ಸರಿಯಾದ ಕಾರಣವಿದ್ದರೆ ತಮ್ಮ ಜನರ ಪರವಾಗಿ ನಿಲ್ಲುತ್ತಿದ್ದರು. "ನಿರ್ಭಯ ಮಿಸೈಲ್ ಭಾಗಶಃ ಯಶಸ್ಸು ಗಳಿಸಿದ ನಂತರ ನಮ್ಮ ತಂಡದ ಮೇಲೆ ಒತ್ತಡವಿತ್ತು. ಅನೇಕರು ನಮ್ಮ ಸಾಮರ್ಥ್ಯವನ್ನೇ ಪ್ರಶ್ನಿಸಿದರು. ಅಲ್ಲದೆ, ಬೆಂಗಳೂರು ಮೂಲದ ಪ್ರಯೋಗಶಾಲೆಯೊಂದು ಏಕೆ ಮಿಸೈಲ್ ತಯಾರಿಸುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು. ಮಾಧ್ಯಮಗಳೂ ವಿವಿಧ ವರದಿಗಳೊಂದಿಗೆ ಆಟವಾಡಿದವು. ಆದರೆ, ಡಾ. ಅವಿನಾಶ್ ಎಲ್ಲ ಆರೋಪಗಳನ್ನು ತಮ್ಮ ಮೇಲೆ ಎಳೆದುಕೊಂಡರು. ನಮಗೆ ಗುರಿಯತ್ತ ಮುನ್ನಡೆಯಲು ಸೂಚಿಸಿದರು" ಎಂದು ಮತ್ತೋರ್ವ ಹಿರಿಯ ವಿಜ್ಞಾನಿ ಹೇಳಿದ್ದಾರೆ.

"ಆದರೆ, ಎರಡನೇ ಬಾರಿ ಮಿಸೈಲ್ ಗುರಿ ಮುಟ್ಟಿದಾಗ ಎಲ್ಲ ಕ್ರೆಡಿಟ್ ನಮಗೇ ಸಿಗುವ ಭರವಸೆ ನೀಡಿದ್ದರು" ಎಂದು ವಿಜ್ಞಾನಿಯೋರ್ವ ಹೇಳಿದ್ದರು.

ಡಿಆರ್‌ಡಿಓ ಹೊಂದಿದ್ದ ಎಲ್ಲ ಲೋಪದೋಷಗಳಿಗೂ ಡಾ. ಅವಿನಾಶ್ ಅವರನ್ನೇ ಗುರಿ ಮಾಡಲಾಯಿತು. ಹಲವು ಯೋಜನೆಗಳು ನಿಧಾನಗೊಂಡವು. ಹಲವು ಹಿರಿಯ ಅಧಿಕಾರಿಗಳು ತಮಗೆ ನೌಕರಿ ಭಡ್ತಿ ಸಿಗದಿರುವುದಕ್ಕೆ ಅವಿನಾಶ್ ಅವರನ್ನೇ ಹಳಿದರು. ಮಾಧ್ಯಮಗಳು ನಿರಂತರವಾಗಿ ಡಿಆರ್‌ಡಿಓ ವಿರುದ್ಧ ವರದಿ ಮಾಡುತ್ತಿದ್ದವು. ಹಲವು ಯುವ ವಿಜ್ಞಾನಿಗಳು ಇಂದಿಗೂ ಡಾ. ಅವಿನಾಶ್ ಪರವಾಗಿಯೇ ಇದ್ದಾರೆ.

ಮೋದಿ ಎಚ್ಚರಿಕೆಯನ್ನು ಡಿಆರ್‌ಡಿಓ ನಿರ್ಲಕ್ಷಿಸಿತ್ತೇ? : ಪ್ರಧಾನಿಯಾದ ಕೆಲವೇ ದಿನಗಳಲ್ಲಿ ನರೇಂದ್ರ ಮೋದಿ ಅವರು ಡಿಆರ್‌ಡಿಓ ಸಂಸ್ಥೆಗೆ ಯುವ ನೇತಾರನನ್ನು ನೇಮಿಸುವ ಯೋಚನೆ ವ್ಯಕ್ತಪಡಿಸಿದ್ದರು. ಯುವ ವಿಜ್ಞಾನಿಗಳನ್ನು ಗುರುತಿಸುವ ಕಾರ್ಯವೂ ಪ್ರಗತಿಯಲ್ಲಿತ್ತು. ಆದರೆ, ಈ ಬೆಳವಣಿಗೆಯನ್ನು ನಿರೀಕ್ಷಿಸಿರಲಿಲ್ಲ. [ಇಡೀ ಚೀನಾ ಕ್ರಮಿಸಬಲ್ಲದು ಅಗ್ನಿ 5 ]

ಪರಿಕ್ಕರ್ ನೀಡಿರುವ ಹೇಳಿಕೆ ಕೂಡ ನರೇಂದ್ರ ಮೋದಿ ಅವರ ಹಿಂದಿನ ಹೇಳಿಕೆಯನ್ನೇ ಹೋಲುತ್ತದೆ. ಆದರೆ, ಈ ಕಾರಣ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೊಳಗಾಗಿದೆ. 64 ವರ್ಷ ವಯಸ್ಸಿನ ವ್ಯಕ್ತಿಗೆ ಡಿಆರ್‌ಡಿಓ ಸಂಸ್ಥೆ ನಡೆಸುವುದು ಸಾಧ್ಯವಾಗುವುದಿಲ್ಲ ಎಂದಾದರೆ ದೇಶ ಮುನ್ನಡೆಸಲು ಸಾಧ್ಯವೇ ಎಂದು ನರೇಂದ್ರ ಮೋದಿಯವರಿಗೇ ಟಾಂಗ್ ನೀಡಲಾಗಿದೆ.

ಅಗ್ನಿ -5 ಯಶಸ್ಸು ಮರೆಯಲಾಗದ್ದು : ಡಾ. ಅವಿನಾಶ್ ನಾಯಕತ್ವದಲ್ಲಿ ಡಿಆರ್‌ಡಿಓ 5,000 ಕಿ.ಮೀ. ವ್ಯಾಪ್ತಿಯ ಅಗ್ನಿ-5 ಮಿಸೈಲ್ ಪ್ರಯೋಗ ಯಶಸ್ಸು ಕಂಡಿತ್ತು. ಇದು ಐಸಿಬಿಎಂ ಸಾಮರ್ಥ್ಯ ಹೊಂದಿದ ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಭಾರತವೂ ಗುರುತಿಸಿಕೊಳ್ಳುವಂತೆ ಮಾಡಿತ್ತು. ಹಲವು ತಾಂತ್ರಿಕ ಕ್ರಾಂತಿಯನ್ನೂ ಬಳಕೆಗೆ ತಂದಿತ್ತು.

ಈ ಎಲ್ಲ ಸಾಧನೆಗಳ ಕಾರಣದಿಂದಾದರೂ ಮೋದಿ ಸರ್ಕಾರ ಅವರಿಗೆ ಇನ್ನಷ್ಟು ಉತ್ತಮ ಬೀಳ್ಕೊಡುಗೆ ನೀಡಬಹುದಿತ್ತು.

English summary
Many felt that Dr Avinash Chander the top scientist, who delivered the first Inter-Continental Ballistic Missile (ICBM) to the nation, deserved a better treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X