ಮೋದಿ ಭಾರತದಲ್ಲಿ ಪ್ರತಿದಿನ 115 ದಿನಗೂಲಿಗಳ ಆತ್ಮಹತ್ಯೆ: ಅಂಕಿಅಂಶ ನೀಡಿದ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ನವದೆಹಲಿ, ಜನೆವರಿ 16: ಪ್ರಧಾನಿ ನರೇಂದ್ರ ಮೋದಿ ಅವರ ಭಾರತದಲ್ಲಿ ಪ್ರತಿದಿನ 115 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, 'ಬಿಜೆಪಿಯ ಗುಜರಾತ್ ಮಾದರಿಯಲ್ಲಿ, ಗುಜರಾತ್ನಲ್ಲಿ ಪ್ರತಿದಿನ 9 ದಿನಗೂಲಿಗಳು ಆತ್ಮಹತ್ಯೆಯಿಂದ ಸಾಯುತ್ತಿದ್ದಾರೆ. ಭಾರತದಲ್ಲಿ ಪ್ರತಿದಿನ 115 ದಿನಗೂಲಿಗಳು ಆತ್ಮಹತ್ಯೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿಮ್ಮ 'ಡಬಲ್ ಇಂಜಿನ್' ಬಡವರ ಆಕಾಂಕ್ಷೆಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ' ಎಂದು ಆರೋಪಿಸಿದ್ದಾರೆ.
.@narendramodi ji,
— Mallikarjun Kharge (@kharge) January 16, 2023
In #GujaratModel of BJP,
▪️ 9 daily wagers die by suicide every day in Gujarat.
▪️ 115 daily wagers commit suicide every day in India.
Your 'Double Engine' has crushed the aspirations of the poor under its deadly wheels !
ಈ ಹಿಂದೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಖರ್ಗೆ, 'ಈ ಹಿಂದಿನ ಯಾವುದೇ ಪ್ರಧಾನಿ, ಯಾವ ಗೃಹ ಸಚಿವರೂ ಇಷ್ಟೊಂದು ಸುಳ್ಳು ಹೇಳಿಲ್ಲ. ಈಗಿರುವ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಷ್ಟೊಂದು ಸುಳ್ಳು ಹೇಳುತ್ತಿದ್ದಾರೆ. ಕೆಲವೊಮ್ಮೆ 2 ಕೋಟಿ ಉದ್ಯೋಗ ನೀಡುತ್ತೇವೆ ಎನ್ನುತ್ತಾರೆ. ಮತ್ಮೊಮ್ಮೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ನೀಡುವುದಾಗಿ ಹೇಳುತ್ತಾರೆ. ಆದರೆ ಅದೆಲ್ಲವೂ ಸುಳ್ಳು' ಎಂದು ಖರ್ಗೆ ಟೀಕಿಸಿದ್ದಾರೆ.
'ಕಾಂಗ್ರೆಸ್ ಪಕ್ಷವು ಹಲವು ಸರ್ಕಾರಗಳನ್ನು ರಚಿಸಿದೆ. ಅದರಲ್ಲಿ ಕೆಲಸ ಮಾಡಿದೆ. ಆದರೆ ಶಾಸಕರನ್ನು ಆಮಿಷಕ್ಕೆ ಒಳಪಡಿಸಿಲ್ಲ. ಬಿಜೆಪಿ ತನ್ನದೇ ಆದ ಸರ್ಕಾರವನ್ನು ರಚಿಸಿತು. ಅವರು ಶಾಸಕರಿಗೆ ಆಮಿಷ ಒಡ್ಡಿ, ಸರ್ಕಾರಗಳನ್ನು ಉರುಳಿಸಿದ್ದಾರೆ. ಈ ಬಿಜೆಪಿ ನಾಯಕರು ಪ್ರಜಾಪ್ರಭುತ್ವವನ್ನು ರಕ್ಷಿಸುವ ಬಗ್ಗೆ ಮಾತನಾಡುತ್ತಾರೆ' ಎಂದು ಹೇಳಿದ್ದಾರೆ.
ದ್ವೇಷ ಮತ್ತು ವಿಭಜನೆಯನ್ನು ಸೃಷ್ಟಿಸುವುದು ಬಿಜೆಪಿಯ ಮುಖ್ಯ ಗುರಿಯಾಗಿದೆ. ಆದರೆ ಭಾರತ್ ಜೋಡೋ ಯಾತ್ರೆ ಈ ಅಂಶಗಳ ವಿರುದ್ಧ ಹೋರಾಡುತ್ತಿದೆ ಮತ್ತು ವಿಜಯಶಾಲಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಹರಿಯಾಣದ ಪಾಣಿಪತ್ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಈಗ ಹರಿಯಾಣದಲ್ಲಿ ಯುವಕರಿಗೆ ಉದ್ಯೋಗವಿಲ್ಲ. ನಿರುದ್ಯೋಗದಲ್ಲಿ ಹರಿಯಾಣ ಚಾಂಪಿಯನ್ ಆಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಅಗ್ನಿಪಥ ಯೋಜನೆಯ ವಿರುದ್ಧ ಮಾತನಾಡಿದ್ದ ಖರ್ಗೆ, ಈ ಹಿಂದೆ ಯೋಧನೊಬ್ಬ 15 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದ. ಸೂಕ್ತ ತರಬೇತಿ ಮತ್ತು ನಿವೃತ್ತಿ ಸೌಲಭ್ಯಗಳನ್ನು ನೀಡಲಾಗುತ್ತಿತ್ತು. ಆದರೆ ಈಗ ಐದು ವರ್ಷಗಳ ನಂತರ ಅವರು ನಿರುದ್ಯೋಗಿಯಾಗುತ್ತಾರೆ ಎಂದು ಖರ್ಗೆ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಪ್ರಸ್ತುತ ಪಂಜಾಬ್ನಲ್ಲಿ ಸಾಗುತ್ತಿದೆ. ಈ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಯಾತ್ರೆ ಶುರುವಾಯಿತು. ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ, ಪಂಜಾಬ್ನಲ್ಲಿ ಯಾತ್ರೆ ಸಾಗಿದೆ. 3500 ಕಿಮೀಗಿಂತಲೂ ಅಧಿಕವಾಗಿ ಚಲಿಸುವ ಯಾತ್ರೆಯು ಜನೆವರಿ 31ರಂದು (ಗಾಂಧಿ ಮರಣ ಹೊಂದಿದ ದಿನ) ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳಲಿದೆ.