ಭಾರತದ ತಾಳ್ಮೆ ಪರೀಕ್ಷಿಸುವ ಯಾವುದೇ ತಪ್ಪನ್ನು ಮಾಡಬೇಡಿ; ಸೇನೆ ಎಚ್ಚರಿಕೆ
ನವದೆಹಲಿ, ಜನವರಿ 15: "ಉತ್ತರ ಗಡಿ ಸಮಸ್ಯೆಗಳನ್ನು ಮಾತುಕತೆ ಹಾಗೂ ರಾಜಕೀಯ ಪ್ರಯತ್ನಗಳ ಮೂಲಕ ಬಗೆಹರಿಸಲು ಭಾರತ ಬದ್ಧವಾಗಿದೆ. ಈ ಸಮಯದಲ್ಲಿ ಭಾರತದ ತಾಳ್ಮೆ ಪರೀಕ್ಷಿಸುವ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ" ಎಂದು ಚೀನಾಗೆ ಸ್ಪಷ್ಟ ಸಂದೇಶ ನೀಡಿದ್ದಾರೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ.
ಶುಕ್ರವಾರ ಸೇನಾ ದಿನಾಚರಣೆಯಲ್ಲಿ ಭಾಗವಹಿಸಿದ್ದ ಅವರು ಗಡಿ ಸಮಸ್ಯೆ ಕುರಿತು ಪ್ರಸ್ತಾಪ ಮಾಡಿದರು. "ಗಡಿ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ಮಾಡುವ ಪಿತೂರಿಗೆ ಭಾರತ ಸೂಕ್ತ ಪ್ರತಿಕ್ರಿಯೆ ನೀಡುತ್ತದೆ. ಪೂರ್ವ ಲಡಾಖ್ ನಲ್ಲಿ ಗಾಲ್ವಾನ್ ವೀರರ ತ್ಯಾಗ ವ್ಯರ್ಥವಾಗಲು ನಾವು ಬಿಡುವುದಿಲ್ಲ" ಎಂದು ಹೇಳಿದ್ದಾರೆ. "ಮಾತುಕತೆ ಮತ್ತು ರಾಜಕೀಯ ಪ್ರಯತ್ನಗಳ ಮೂಲಕ ಗಡಿ ವಿವಾದ ಬಗೆಹರಿಸಲು ನಾವು ಬದ್ಧವಾಗಿದ್ದೇವೆ. ಆದರೆ ನಮ್ಮ ತಾಳ್ಮೆ ಪರೀಕ್ಷಿಸುವ ತಪ್ಪನ್ನು ಯಾರೂ ಮಾಡಬೇಡಿ" ಎಂದು ಎಚ್ಚರಿಕೆ ನೀಡಿದ್ದಾರೆ.
"ಭಾರತದ ಸೇನೆ ದೇಶದ ಸಾರ್ವಭೌಮತ್ವ ಹಾಗೂ ಭದ್ರತೆಗೆ ಯಾವುದೇ ಹಾನಿ ಮಾಡಲು ಬಿಡುವುದಿಲ್ಲ. ಕಳೆದ ವರ್ಷ ಜೂನ್ ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ಭೀಕರ ಯುದ್ಧದಲ್ಲಿ ಇಪ್ಪತ್ತು ಭಾರತೀಯ ಸೇನಾ ಸಿಬ್ಬಂದಿ ತಮ್ಮ ಪ್ರಾಣ ಸಮರ್ಪಿಸಿದ್ದಾರೆ. ಈ ಘಟನೆ ದಶಕದಲ್ಲಿಯೇ ಉಭಯ ತಂಡಗಳ ನಡುವಿನ ಅತ್ಯಂತ ಗಂಭೀರ ಘರ್ಷಣೆ ಎನಿಸಿಕೊಂಡಿತ್ತು. ಯುದ್ಧದಲ್ಲಿ ಸಾವನ್ನಪ್ಪಿದ ಹಾಗೂ ಗಾಯಗೊಂಡ ಸೈನಿಕರ ಸಂಖ್ಯೆಯನ್ನು ಚೀನಾ ಇನ್ನೂ ಬಹಿರಂಗಪಡಿಸಿಲ್ಲ. ಅಮೆರಿಕದ ಗುಪ್ತಚರ ವರದಿ ಪ್ರಕಾರ ಚೀನಾದಲ್ಲಿ 35 ಮಂದಿ ಸಾವನ್ನಪ್ಪಿರುವ ಮಾಹಿತಿ ಇದೆ" ಎಂದು ತಿಳಿಸಿದರು.

ಪಾಕ್ ಭಯೋತ್ಪಾದನೆ ಕುರಿತು ಪ್ರಸ್ತಾಪಿಸಿದ ಅವರು, "ಪಾಕಿಸ್ತಾನ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ಮುಂದುವರೆಸಿದೆ. ಭಾರತದ ಒಳ ನುಗ್ಗಲು ಸುಮಾರು 300-400 ಭಯೋತ್ಪಾದಕರು ತರಬೇತಿ ಕ್ಯಾಂಪ್ ಗಳಲ್ಲಿ ಕಾಯುತ್ತಿದ್ದಾರೆ. ಕಳೆದ ವರ್ಷ ಗಡಿ ಉಲ್ಲಂಘನೆ ಮಾಡಿರುವ ಪ್ರಕರಣ 40% ಹೆಚ್ಚಾಗಿದೆ" ಎಂದು ಮಾಹಿತಿ ನೀಡಿದರು.












Click it and Unblock the Notifications