ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ನಿಯಮಗಳನ್ನು ಹೇಳಿಕೊಡಬೇಡಿ: ಟ್ವಿಟ್ಟರ್ಗೆ ಕೇಂದ್ರ ಸರ್ಕಾರ ತಿರುಗೇಟು
ನವದೆಹಲಿ, ಮೇ 27: ಭಾರತ ಸರ್ಕಾರದ ಹೊಸ ಐಟಿ ನಿಯಮಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ದಿಗ್ಗಜ ಟ್ವಿಟ್ಟರ್ ವಿರೋಧವನ್ನು ವ್ಯಕ್ತಪಡಿಸಿ ಹೇಳಿಕೆಯನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ ಹೊಸ ಕಾನೂನಿನಿಂದ ಭಾರತದಲ್ಲಿ ಅಭಿವ್ಯಕ್ತ ಸ್ವಾತಂತ್ರ್ಯಕ್ಕೆ ಅಪಾಯವಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದು ಭಾರತಕ್ಕೆ ಕಾನೂನಿನ ಪಾಠವನ್ನು ಕೇಳಿಕೊಡುವ ಅಗತ್ಯವಿಲ್ಲ ಎಂದು ಜರಿದಿದೆ.
"ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಕ್ಕೆ ಕಾನೂನನ್ನು ನಿರ್ದೇಶಿಸಲು ಪ್ರಯತ್ನಿಸುವ ಮೂಲಕ ಮುಖ್ಯ ವಿಚಾರಗಳನ್ನು ತೇಲಿಸುವ ಬದಲು ಈ ನೆಲದ ಕಾನೂನನ್ನು ಅನುಸರಿಸಬೇಕು" ಎಂದು ಸರ್ಕಾರ ತೀಕ್ಷ್ಣ ಶಬ್ದಗಳಲ್ಲಿ ಭಾರತ ತನ್ನ ಪ್ರತಿಕ್ರಿಯೆ ನೀಡಿದೆ.
ಟ್ವಿಟ್ಟರ್ ಕೇವಲ ಒಂದು ಸಾಮಾಜಿಕ ಮಾಧ್ಯಮ ವೇದಿಕೆ. ಭಾರತದ ಕಾನೂನು ಚೌಕಟ್ಟು ಹೇಗಿರಬೇಕು ಎಂದು ನಿರ್ದೇಶಿಸಲು ಇದಕ್ಕೆ ಯಾವುದೇ ಅವಕಾಶಗಳು ಕೂಡ ಇಲ್ಲ. ಕಾನೂನು ಮತ್ತು ನೀತಿಗಳ ರಚನೆ ಈ ದೇಶದ ಸಾರ್ವಭೌಮತ್ವದ ಹಕ್ಕಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ತನ್ನ ಹೇಳಿಕೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಟೂಲ್ಕಿಟ್ ವಿವಾದದ ಬಗ್ಗೆ ನಡೆಯುತ್ತಿರುವ ತನಿಖೆ ವಿಚಾರವಾಗಿ ದೆಹಲಿ ಪೊಲೀಸ್ ಅಧಿಕಾರಿಗಳು ದೆಹಲಿ ಮತ್ತು ಗುರುಗ್ರಾಮ್ನಲ್ಲಿರುವ ಟ್ವಿಟ್ಟರ್ ಕಚೇರಿಗೆ ಭೇಟಿ ನೀಡಿತ್ತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಟ್ವಿಟ್ಟರ್ ಗುರುವಾರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂಸ್ಥೆಯ ಉದ್ಯೋಗಿಗಳ ಸುರಕ್ಷತೆಯ ಕುರಿತು ಆತಂಕ ವ್ಯಕ್ತಪಡಿಸಿ ಹೇಳಿಕೆ ಬಿಡುಗಡೆಗೊಳಿಸಿತ್ತು.
ಆದರೆ ಟ್ವಿಟ್ಟರ್ನ ಹೇಳಿಕೆಯನ್ನು ಆಧಾರ ರಹಿತ ಎಂದು ತಳ್ಳಿ ಹಾಕಿರುವ ಸರ್ಕಾರ "ತಮ್ಮ ಮೂರ್ಖ ನಿರ್ಧಾರಗಳನ್ನು ಮರೆಮಾಚಲು ಟ್ವಿಟ್ಟರ್ ಭಾರತವನ್ನು ದೂಷಿಸುವ ಪ್ರಯತ್ನ ಮಾಡುತ್ತಿದೆ" ಎಂದು ಹೇಳಿದೆ. ಇನ್ನು ಇದೇ ಸಂದರ್ಭದಲ್ಲಿ ಟ್ವಿಟ್ಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಪ್ರತಿನಿಧಿಗಳು ಭಾರತದಲ್ಲಿ ಎಂದಿಗೂ ಸುರಕ್ಷಿತವಾಗಿಯೇ ಇರುತ್ತಾರೆ. ಭಾರತದಲ್ಲಿ ಅವರ ವೈಯಕ್ತಿಕ ಸುರಕ್ಷತೆ ಹಾಗೂ ಭದ್ರತೆಗೆ ಯಾವುದೇ ತೊಂದರೆಗಳು ಆಗದು ಎಂದು ಸ್ಪಷ್ಟಪಡಿಸಿದೆ.












Click it and Unblock the Notifications