ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಭಾರೀ ದೇಣಿಗೆ ಸಂಗ್ರಹ: ಟಿಟಿಡಿಯಿಂದ ಹೊಸ ಲೆಕ್ಕಾಚಾರ!
ವಿಶ್ವದ ಅತಿ ಸಿರಿವಂತ ಹಿಂದೂ ದೇವಾಲಯ ಎಂಬ ಖ್ಯಾತಿ ತಿರುಪತಿ ತಿಮ್ಮಪ್ಪನಿಗಿದೆ. ಅದರಂತೆ ಕಳೆದ ನಾಲ್ಕು ವರ್ಷದಲ್ಲಿ ತಿಮ್ಮಪ್ಪನ ಹುಂಡಿಯಲ್ಲಿ ಸಾಕಷ್ಟು ಹಣ ಸಂಗ್ರಹವಾಗಿದೆ. ಈ ಬಗ್ಗೆ ಟಿಟಿಡಿ ಮಾಹಿತಿಯನ್ನು ಹಂಚಿಕೊಂಡಿದೆ.
ಭೂಮಿ, ಒಡವೆ ಇತ್ಯಾದಿ ರೂಪದಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಪತ್ತು ತಿಮ್ಮಪ್ಪನ ಹುಂಡಿಯಲ್ಲಿ ಸಂಗ್ರಹಗೊಂಡಿದೆ. ಜೂನ್ 2019 ರಿಂದ ಅಕ್ಟೋಬರ್ 2023 ರವರೆಗೆ ಸುಮಾರು 4800 ಕೋಟಿ ರೂಪಾಯಿಗಳ ಸ್ಥಿರ ಠೇವಣಿ ಮತ್ತು ಸುಮಾರು 3885 ಕೆಜಿ ಚಿನ್ನದ ಠೇವಣಿ ಸಂಗ್ರಹವಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್(ಟಿಟಿಡಿ) ಇಒ ಧರ್ಮಾ ರೆಡ್ಡಿ, ಕಳೆದ ನಾಲ್ಕೂವರೆ ವರ್ಷಗಳಿಂದ ತಿಮ್ಮಪ್ಪನ ಹುಂಡಿಯಲ್ಲಿ ಸಾಕಷ್ಟು ಹಣ ಸಂಗ್ರಹವಾಗಿದೆ. ಇದೇ ಸಂದರ್ಭದಲ್ಲಿ ಟಿಟಿಡಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ವಿಮ್ಸ್ ನಲ್ಲಿ ಹೊಸ ಕಾರ್ಡಿಯೋ ಮತ್ತು ನ್ಯೂರೋ ಬ್ಲಾಕ್ ಅನ್ನು 77 ಕೋಟಿ ರೂಪಾಯಿಯಲ್ಲಿ ನಿರ್ಮಿಸುತ್ತಿದ್ದೇವೆ. ಅದೇ ರೀತಿ ನಾಲ್ಕು ವರ್ಷಗಳಲ್ಲಿ 197 ಕೋಟಿಯಲ್ಲಿ ಸಂಪೂರ್ಣ ಕಟ್ಟಡವನ್ನು ಹಂತ ಹಂತವಾಗಿ ಆಧುನೀಕರಿಸುತ್ತೇವೆ ಎಂದು ಮಾಹಿತಿ ನೀಡಿದರು.
ಟಿಟಿಡಿಯಲ್ಲಿ ಅಧಿಕಾರ ವಹಿಸಿಕೊಂಡ ನಾಲ್ಕೂವರೆ ವರ್ಷಗಳಲ್ಲಿ ಸ್ಥಿರ ಠೇವಣಿ 13,025 ಕೋಟಿಗಳಿಂದ (2019ರಲ್ಲಿ) ರೂ.17,816 ಕೋಟಿಗೆ (ಅಕ್ಟೋಬರ್ 2023ರ ವೇಳೆಗೆ) ಏರಿಕೆಯಾಗಿದೆ ಎಂದು ಧರ್ಮಾ ರೆಡ್ಡಿ ವಿವರಿಸಿದರು. 2019 ರಲ್ಲಿ 7,339.74 ಕೆಜಿ ಚಿನ್ನದ ಠೇವಣಿ ಇತ್ತು, ಆದರೆ ಈ ವರ್ಷದ ಅಕ್ಟೋಬರ್ ವೇಳೆಗೆ ಅದು 11,225.06 ಕೆಜಿ ತಲುಪಿದೆ. ಜೊತೆಗೆ ಶ್ರೀವಾಣಿ ಟ್ರಸ್ಟ್ಗೆ 1,021 ಕೋಟಿ ದೇಣಿಗೆ ಬಂದಿದೆ ಎಂದು ಹೇಳಿದರು. ಇವುಗಳಿಂದ ದೇವಾಲಯಗಳನ್ನು ನಿರ್ಮಿಸಲಾಗಿದೆ. ದಾನಿಗಳ ನೆರವಿನಿಂದ ಶ್ರೀ ಪದ್ಮಾವತಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಎಸ್ ವಿ ಮ್ಯೂಸಿಯಂ ಅಭಿವೃದ್ಧಿ ಪಡಿಸಲಾಗಿದೆ ಎಂದರು.
ಇಲ್ಲಿಯವರೆಗೆ 550 ದೇವಾಲಯಗಳನ್ನು ನಿರ್ಮಿಸಲಾಗಿದೆ. ವಿವಿಧ ಹಂತಗಳಲ್ಲಿ 3 ಸಾವಿರಕ್ಕೂ ಹೆಚ್ಚು ದೇವಾಲಯಗಳಿವೆ. 176 ಪುರಾತನ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ ಎಂದು ವಿವರಿಸಿದರು. ವೈಜಾಗ್, ಭುವನೇಶ್ವರ್, ಜಮ್ಮು ಮತ್ತಿತರ ಪ್ರದೇಶಗಳಲ್ಲಿ ಶ್ರೀವಾರಿ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ ಎಂದರು. ಅದೇ ರೀತಿ ದಾನಿಗಳ ನೆರವಿನಿಂದ ತಿರುಮಲದಲ್ಲಿ 140 ಕೋಟಿ ರೂಪಾಯಿ ವೆಚ್ಚದಲ್ಲಿ ಮ್ಯೂಸಿಯಂ ಆಧುನೀಕರಣಗೊಳ್ಳುತ್ತಿದೆ.

ಅಲಿಪಿರಿ ವಾಕ್ವೇಗೆ ರೂ.25 ಕೋಟಿಯಲ್ಲಿ ಮೇಲ್ಛಾವಣಿ, 25 ಕೋಟಿ ರೂಪಾಯಿಯಲ್ಲಿ ನೂತನ ಪರಕಾಮಣಿ ಕಟ್ಟಡ ಹಾಗೂ ಬರ್ಡ್ ಆಸ್ಪತ್ರೆಯಲ್ಲಿ 15 ಕೋಟಿ ರೂಪಾಯಿಯಲ್ಲಿ ಹೊಸ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು. ಇವುಗಳ ಜೊತೆಗೆ ಶ್ರೀ ಪದ್ಮಾವತಿ ಮಕ್ಕಳ ಹೃದ್ರೋಗ ಆಸ್ಪತ್ರೆಯಲ್ಲಿ 2 ಸಾವಿರಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆ, 8 ಹೃದಯ ಕಸಿ ಮಾಡಲಾಗಿದೆ. ಇನ್ನೂ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 175 ಕೋಟಿ ರೂಪಾಯಿ ದೇಣಿಗೆ ಬಂದಿದೆ ಎಂದರು. ನವೆಂಬರ್ 17ರ ಶುಕ್ರವಾರ ಬೆಳಗ್ಗೆ 8:40ಕ್ಕೆ ಧನುರ್ ಲಗ್ನದಲ್ಲಿ ಸಿರುಳ ತಾಯಿಯ ರಥೋತ್ಸವ ಅದ್ಧೂರಿಯಾಗಿ ನಡೆಯಲಿದೆ.












Click it and Unblock the Notifications