ಭಾರತೀಯರ ಖಾತೆಗೆ 15 ಲಕ್ಷ: ಕೇಂದ್ರ ಸರ್ಕಾರವನ್ನು ಕುಟುಕಿದ ಚಿದಂಬರಂ!
ನವದೆಹಲಿ, ಸಪ್ಟೆಂಬರ್.20: ಮುಂಗಾರು ಅಧಿವೇಶನದ ಉಭಯ ಸದನಗಳಲ್ಲಿ ಕೃಷಿ ಸಂಬಂಧಿತ ಮಸೂದೆಗಳನ್ನು ಅಂಗೀಕರಿಸಿದ ಕೇಂದ್ರ ಸರ್ಕಾರವನ್ನು ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಪ್ರಶ್ನೆ ಮಾಡಿದ್ದಾರೆ.
ಕೇಂದ್ರ ಸರ್ಕಾರವು ನೀಡುವ ಸುಳ್ಳು ಭರವಸೆಗಳನ್ನು ರೈತರು ಯಾವ ಆಧಾರವನ್ನಿಟ್ಟುಕೊಂಡು ನಂಬುವುದಕ್ಕೆ ಸಾಧ್ಯ. ದತ್ತಾಂಶಗಳೇ ಇಲ್ಲದೇ ಕೃಷಿ ಸಚಿವರು ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೇಗೆ ತಾನೇ ನಿರ್ಧರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕೃಷಿ ಸಂಬಂಧಿತ ಮಸೂದೆ ಅಂಗೀಕಾರಕ್ಕೂ ಮೊದಲು 'ಮಹಾಭಾರತ'!
ಕೇಂದ್ರ ಸರ್ಕಾರವು ಈ ಹಿಂದೆ ತೆಗೆದುಕೊಂಡ ತೀರ್ಮಾನಗಳಂತೆ ಇದೂ ಕೂಡಾ ನಡೆಯಾಗಿದೆ. ದೇಶದ ಪ್ರಜೆಗಳನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದಿರುವ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಸರಣಿ ಟ್ವೀಟ್ ಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕುಟುಕಿದ್ದಾರೆ.


ಬೆಂಬಲ ಬೆಲೆ ನಿಗದಿಗೇನು ಮಾನದಂಡ?
"ದೇಶದ ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಒದಗಿಸುವ ಭರವಸೆಯನ್ನು ಕೇಂದ್ರ ಕೃಷಿ ಸಚಿವರು ಇದೀಗ ನೀಡುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ಇಂದಿಗೂ ಖಾಸಗಿಯವರ ವ್ಯಾಪಾರ ಪ್ರಕ್ರಿಯೆ ಇಂದಿಗೂ ಜಾರಿಯಲ್ಲಿದೆ. ರೈತರು ಬೆಳೆದ ಬೆಳೆಗೆ ನೀಡುತ್ತಿರುವ ಬೆಲೆಯು ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆಯಾಗಿದೆ. ಆದರೆ ಮಾಯ-ಮಂತ್ರದ ರೀತಿಯಲ್ಲಿ ಇದೀಗ ಕೃಷಿ ಸಚಿವರು ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ಹೇಳುತ್ತಿದ್ದಾರೆ. ಹಾಗಿದ್ದರೆ ಇಷ್ಟು ದಿನ ಈ ನಿಟ್ಟಿನಲ್ಲಿ ಏಕೆ ಕ್ರಮವನ್ನು ತೆಗೆದುಕೊಳ್ಳಲಿಲ್ಲ" ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಪ್ರಶ್ನಿಸಿ ಸರಣಿ ಟ್ವೀಟ್ ಮಾಡಿದ್ದಾರೆ.

ಪ್ರತಿ ವಹಿವಾಟಿನ ಅಂಕಿ-ಅಂಶಗಳ ಸಂಗ್ರಹ ಹೇಗೆ?
"ದೇಶದಲ್ಲಿ ಯಾವ ರೈತರು, ಯಾವ ವ್ಯಾಪಾರಿಗೆ ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡುತ್ತಾರೆ ಎಂಬುದು ಕೇಂದ್ರ ಸಚಿವರಿಗೆ ಹೇಗೆ ಗೊತ್ತಾಗುತ್ತದೆ. ದೇಶಾದ್ಯಂತ ಪ್ರತಿನಿತ್ಯ ನಡೆಯುವ ಲಕ್ಷಾಂತರ ವ್ಯಾಪಾರ ಪ್ರಕ್ರಿಯೆಗಳ ಬಗ್ಗೆ ಕೃಷಿ ಸಚಿವರು ಹೇಗೆ ತಾನೇ ಮಾಹಿತಿ ಪಡೆದುಕೊಳ್ಳುತ್ತಾರೆ. ಈ ಅಂಕಿ-ಅಂಶಗಳ ದಾಖಲೆಯೇ ಇಲ್ಲದಿದ್ದರೆ ಪ್ರತಿಯೊಬ್ಬರ ರೈತರು ನಡೆಸುವ ವ್ಯವಹಾರದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ನೀಡುವ ಭರವಸೆಯನ್ನು ಕೃಷಿ ಸಚಿವರು ಹೇಗೆ ತಾನೇ ನೀಡುವುದಕ್ಕೆ ಸಾಧ್ಯ" ಎಂದು ಪ್ರಶ್ನಿಸಿದ್ದಾರೆ.

ರೈತರು ಸುಳ್ಳು ಪ್ರಮಾಣಗಳನ್ನು ನಂಬುವಷ್ಟು ಮೂರ್ಖರಲ್ಲ
"ಕೇಂದ್ರ ಸರ್ಕಾರ ಮತ್ತು ಕೃಷಿ ಸಚಿವರು ದೇಶದ ರೈತರನ್ನು ಮೂರ್ಖರು ಎಂದು ಭಾವಿಸಿದಂತೆ ತೋರುತ್ತಿದೆ. ಖಾಲಿ ಭರವಸೆಗಳನ್ನು ನೆಚ್ಚಿಕೊಂಡು ಕೂರುವಷ್ಟು ದಡ್ಡರಲ್ಲ ನಮ್ಮ ದೇಶದ ರೈತರು. ಈ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಪ್ರತಿಯೊಬ್ಬ ಪ್ರಜೆಗಳ ಖಾತೆಗೆ 15 ಲಕ್ಷ ರೂಪಾಯಿ ಹಣವನ್ನು ಹಾಕಿದ್ದಾರೆಯೇ" ಎಂದು ಚಿದಂಬರಂ ಅವರು ಟ್ವೀಟ್ ಮಾಡಿದ್ದಾರೆ.

ರೈತರ ಆದಾಯವನ್ನು ದ್ವಿಗುಣಗೊಳಿಸಿದರಾ ಮೋದಿ?
"ಭಾರತದಲ್ಲಿ ಪ್ರತಿಯೊಬ್ಬರ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರು. ಅವರು ಈ ಹಿಂದೆ ನೀಡಿದ್ದ ಮಾತನ್ನು ಈಡೇರಿಸಿದ್ದಾರೆಯೇ. ದೇಶದ ರೈತರ ಆದಾಯ ಇಮ್ಮಡಿಯಾಗಿದೆಯೇ. ಅಥವಾ ದೇಶದಲ್ಲಿ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದ್ದರು. ಈ ಭರವಸೆಯನ್ನಾದರೂ ಈಡೇರಿಸಿದ್ದಾರೆಯೇ, ಉದ್ಯೋಗಗಳ ಸೃಷ್ಟಿಯಾಗಿದೆಯೇ" ಎಂದು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಟ್ವೀಟ್ ಮಾಡಿದ್ದಾರೆ.












Click it and Unblock the Notifications