'ಡೆಂಗ್ಯೂ ರೋಗಿಗೆ ನೀಡಿದ್ದು ಮೋಸಂಬಿ ಜ್ಯೂಸ್ ಅಲ್ಲ ಕಳಪೆ ಪ್ಲೇಟ್ಲೆಟ್' -ಪ್ರಯಾಗರಾಜ್ ಜಿಲ್ಲಾಧಿಕಾರಿ
ಲಕ್ನೋ ಅಕ್ಟೋಬರ್ 27: ಪ್ರಯಾಗ್ರಾಜ್ ಆಸ್ಪತ್ರೆಯೊಂದರಲ್ಲಿ ವೈದ್ಯರು ಪ್ಲಾಸ್ಮಾ ಬದಲಿಗೆ ಮೊಸಂಬಿ ಜ್ಯೂಸ್ ಅನ್ನು ಡೆಂಗ್ಯೂ ರೋಗಿಗೆ ಇಂಜೆಕ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳಕಿಗೆ ಬಂದ ನಂತರ, ಪ್ರಯಾಗರಾಜ್ ಜಿಲ್ಲಾಧಿಕಾರಿ ಆರೋಪವನ್ನು ನಿರಾಕರಿಸಿದ್ದಾರೆ. ಬದಲಿಗೆ ರೋಗಿಗೆ ಕಳಪೆಯಾಗಿ ಸಂರಕ್ಷಿಸಲ್ಪಟ್ಟ ಪ್ಲೇಟ್ಲೆಟ್ಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಗ್ಲೋಬಲ್ ಹಾಸ್ಪಿಟಲ್ ಮತ್ತು ಟ್ರಾಮಾ ಸೆಂಟರ್ ಹೆಸರಿನ ಖಾಸಗಿ ಆಸ್ಪತ್ರೆಯನ್ನು ಪ್ರಕ್ರಿಯೆ ಆರಂಭಿಸಿದ ನಂತರ ನೆಲಸಮಗೊಳಿಸಲಾಗುವುದು ಎಂದು ಅಧಿಕಾರಿ ಹೇಳಿದರು. ಘಟನೆಯ ನಂತರ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರ ಸೂಚನೆಯ ಮೇರೆಗೆ ಅದನ್ನು ಮೊಹರು ಮಾಡಲಾಗಿದೆ.
ರೋಗಿಗೆ ಪ್ಲೇಟ್ಲೆಟ್ ಬದಲು ನಿಂಬೆ ರಸ ನೀಡಲಾಗಿದೆ ಎಂದು ರೊಗಿಯ ಕುಟುಂಬದವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನೆಡೆಸಿದ ಜಿಲ್ಲಾಧಿಕಾರಿ ಇದನ್ನು ಅಲ್ಲಗಳೆದಿದ್ದಾರೆ. 32 ವರ್ಷದ ರೋಗಿಯಾದ ಪ್ರದೀಪ್ ಪಾಂಡೆ ಅವರು ಡೆಂಗ್ಯೂನಿಂದ ಬಳಲುತ್ತಿದ್ದರು ಮತ್ತು ವಾರದ ಹಿಂದೆ ಪ್ಲೇಟ್ಲೆಟ್ ನೀಡಲಾಯಿತು. ನಂತರ ಅವರ ಆರೋಗ್ಯ ಹದಗೆಟ್ಟಾಗ ಅವರನ್ನು ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಅಲ್ಲಿ ಅವರು ನಿಧನರಾದರು ಎಂದು ಘೋಷಿಸಲಾಯಿತು.
ಪ್ರಯಾಗರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಪಷ್ಟನೆ
ಬಳಿಕ ಪ್ಲಾಸ್ಮಾ ಪ್ಯಾಕ್ನಲ್ಲಿ ರಕ್ತದ ಪ್ಲೇಟ್ಲೆಟ್ಗಳ ಬದಲಿಗೆ ಸಿಹಿ ನಿಂಬೆ ರಸವಿದೆ ಎಂದು ಹೇಳುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಬಳಿಕ ಇದರ ತನಿಖೆ ನಡೆಸಲಾಗಿದ್ದು ರೋಗಿಗೆ ಕಳಪೆಯಾಗಿ ಸಂರಕ್ಷಿಸಲ್ಪಟ್ಟ ಪ್ಲೇಟ್ಲೆಟ್ಗಳನ್ನು ನೀಡಲಾಗಿದೆ ಎಂಬುದು ಬಹಿರಂಗಗೊಂಡಿದೆ.
ಆಸ್ಪತ್ರೆ ತೆರವುಗೊಳಿಸುವುದಾಗಿ ನೋಟಿಸ್
ಅಕ್ಟೋಬರ್ 20 ರಂದು ಘಟನೆ ಬೆಳಕಿಗೆ ಬಂದಿದೆ. ಇದಕ್ಕೂ ಮೊದಲು ಅಕ್ಟೋಬರ್ 19 ರಂದು ಆಸ್ಪತ್ರೆಯ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಆಸ್ಪತ್ರೆಯ ಆವರಣವು ಅನಧಿಕೃತವಾಗಿದೆ ಎಂದು ತಿಳಿಸಲಾಗಿದೆ. ಅಕ್ಟೋಬರ್ 28 ರೊಳಗೆ ಕಟ್ಟಡವನ್ನು ತೆರವು ಮಾಡಬೇಕು ಎಂದು ನೋಟಿಸ್ ಜಾರಿ ಮಾಡಲಾಗಿದೆ.
ಕೊನೆಗೂ ಬಯಲಾಯಿತು ಸತ್ಯ
ರೋಗಿಗಳ ಸಂಬಂಧಿಕರಿಂದಲೇ ಪ್ಲೇಟ್ಲೆಟ್ಗಳನ್ನು ಖರೀದಿಸಲಾಗಿದೆ ಎಂದು ಆಸ್ಪತ್ರೆಯು ಆರೋಪಗಳನ್ನು ತಳ್ಳಿಹಾಕಿದೆ. ಆಸ್ಪತ್ರೆಯ ಮಾಲೀಕರು, ರೋಗಿಯ ಪ್ಲೇಟ್ಲೆಟ್ ಮಟ್ಟವು 17,000 ಕ್ಕೆ ಇಳಿದಿತ್ತು, ನಂತರ ಅವರ ಸಂಬಂಧಿಕರಿಗೆ ರಕ್ತದ ಪ್ಲೇಟ್ಲೆಟ್ಗಳನ್ನು ವ್ಯವಸ್ಥೆ ಮಾಡಲು ಕೇಳಲಾಯಿತು. "ಅವರು ಸರ್ಕಾರಿ ಆಸ್ಪತ್ರೆಯಿಂದ ಐದು ಯೂನಿಟ್ ಪ್ಲೇಟ್ಲೆಟ್ಗಳನ್ನು ತಂದರು. ಮೂರು ಯುನಿಟ್ ಪ್ಲೇಟ್ಲೆಟ್ ನೀಡಿದ ನಂತರ ರೋಗಿಗೆ ರಿಯಾಕ್ಷನ್ ಆಗಿದೆ. ಆದ್ದರಿಂದ ನಾವು ಅದನ್ನು ನಿಲ್ಲಿಸಿದ್ದೇವೆ" ಎಂದು ಆಸ್ಪತ್ರೆಯ ಮಾಲೀಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೀಗ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಯಾಗ್ರಾಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಜಯ್ ಕುಮಾರ್ ಖತ್ರಿ ನೀಡಿದ್ದಾರೆ.
ಸೂಕ್ತ ಕ್ರಮಕ್ಕೆ ಕೇಂದ್ರ ಸೂಚನೆ
ಇತ್ತೀಚೆಗೆ ಯುಪಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಫಿರೋಜಾಬಾದ್, ಆಗ್ರಾ ಮತ್ತು ಇಟಾವಾ ಜಿಲ್ಲೆಗಳಲ್ಲಿ ಡೆಂಗ್ಯೂ ನಿರ್ವಹಣೆಗೆ ಸಂಬಂಧಿಸಿದಂತೆ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯದ ಉನ್ನತ ಮಟ್ಟದ ತಂಡವನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗಿತ್ತು. ಡೆಂಗ್ಯೂ ಪ್ರಕರಣಗಳನ್ನು ಪರಿಶೀಲಿಸಲು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಸ್ಥಾಪಿಸುವಲ್ಲಿ ಕೇಂದ್ರದ ತಂಡವು ರಾಜ್ಯ ಆರೋಗ್ಯ ಅಧಿಕಾರಿಗಳೊಂದಿಗೆ ಸಹಕರಿಸುತ್ತಿರುವುದು ತಿಳಿದು ಬಂದಿದೆ.