ಪಾನ್ ಬೀಡಾ ಮಾರುವವನ ಖಾತೆಯಲ್ಲಿ 5 ಕೋಟಿ!
ಬೆಂಗಳೂರು, ಜನವರಿ 22: ಅಪನಗದೀಕರಣದ ನಂತರ ಚಿತ್ರ ವಿಚಿತ್ರ ಹಗರಣಗಳು ಬೆಳಕಿಗೆ ಬರುತ್ತಿದ್ದು, ಅವುಗಳ ಸಾಲಿಗೆ ಹೊಸ ಸೇರ್ಪಡೆ ಈ ಘನಶ್ಯಾಮ್ ದಾಸ್ ಎಂಬ ಪಾನ್ ಬೀಡಾ ವ್ಯಾಪಾರಿಯ ಕತೆ.
ಘನಶ್ಯಾಮ್ ದಾಸ್ ಸಾಮಾನ್ಯ ಪಾನ್ ಬೀಡಾ ವ್ಯಾಪಾರಿ. ಇಷ್ಟೆ ಆಗಿದ್ದರೆ ಈತನ ಕತೆ ಹೇಳುವ ಅಗತ್ಯವೇ ಇರಲಿಲ್ಲ. ಆದರೆ ಈತ ಪಾನ್ ಬೀಡಾ ಮಾರುವವನಾದರೂ ಆಗರ್ಭ ಶ್ರೀಮಂತ. ಈತನ ಖಾತೆಯಲ್ಲೀಗ 5 ಕೋಟಿ ಹಣವಿದೆ. ಹಾಗಂಥ ಆತ ಪಾನ್ ಬೀಡಾ ವ್ಯಾಪಾರ ಮಾಡಿಯೇ ಇದನ್ನು ಸಾಧಿಸಿದ್ದೂ ಅಲ್ಲ.[ಅಪನಗದೀಕರಣ : ದರೋಡೆಗೆ ಇಳಿದಿದ್ದ ಪೊಲೀಸರ ವಜಾ]
ಗಾಜಿಯಾಬಾದಿನ ನವಯುಗ್ ಮಾರ್ಕೆಟ್ಟಿನಲ್ಲಿ ಪಾನ್ ಬೀಡಾ ಮಾರುವ ಈತ ಯಾವ ಕಾಲಕ್ಕೂ ಕೋಟಿ ಹಣ ಕಂಡವನಲ್ಲ. ಹಾಗಾದರೆ ಈತನ ಅಕೌಂಟಿಗೆ 5 ಕೋಟಿ ಹಣ ಬಂದಿದ್ದೇಗೆ? ಅದೇ ಇಂಟರೆಸ್ಟಿಂಗ್ ಕತೆ.

ಅಪನಗದೀಕರಣ ಘೋಷಣೆಯಾದ ನಂತರ ತನ್ನ ಅಕೌಂಟನ್ನು ತಿಂಗಳಿಗೆ 8,000 ರೂಪಾಯಿಯಂತೆ ಬಳಸಿಕೊಳ್ಳಲು ರಾಹುಲ್ ಚೌಧರಿ ಎಂಬಾತನಿಗೆ ಘನಶ್ಯಾಮ್ ಬಾಡಿಗೆಗೆ ನೀಡಿದ್ದಾನೆ. ಈ ಚೌಧರಿ ಒಬ್ಬ ರಿಯಲ್ ಎಸ್ಟೇಟ್ ದಲ್ಲಾಳಿ. ಈತ ಹಣ ಬಿಳಿ ಮಾಡಿಕೊಡುವುದಾಗಿ ದೆಹಲಿಯ ಹಲವು ಚಿನ್ನದ ವರ್ತಕರ ಮೂಲಕ ಹಣ ಪಡೆದು ಅದನ್ನು ಘನಶ್ಯಾಮ್ ದಾಸ್ ಅಕೌಂಟಿನಲ್ಲಿ ಹಾಕಿದ್ದಾನೆ.[ಕರ್ನಾಟಕದಲ್ಲಿ 17 ಸಾವಿರ ಕೋಟಿ ಬೇನಾಮಿ ಮೊತ್ತ ಜಮೆ!]
ದೆಹಲಿಯ ನೆಹರೂ ನಗರದ ಜಮ್ಮು ಆ್ಯಂಡ್ ಕಾಶ್ಮೀರ್ ಬ್ಯಾಂಕಿನಲ್ಲಿ ಘನಶ್ಯಾಮ್ ದಾಸ್ ಖಾತೆ ಇದೆ. ಇದೆ ಬ್ಯಾಂಕಿನಲ್ಲಿ ಮತ್ತೆರಡು ಖಾತೆಗಳ ಮೂಲಕವೂ ರಾಹುಲ್ ಚೌಧರಿ ಇದೇ ರೀತಿಯ ವ್ಯವಹಾರ ಮಾಡಿದ್ದಾನೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ. ಈ ಮೂರು ಖಾತೆಗಳಲ್ಲಿ ರಾಹುಲ್ ಚೌಧರಿಯ ಒಟ್ಟು 12 ಕೋಟಿ ಹಣ ಇರುವುದು ತಿಳಿದು ಬಂದಿದೆ.
ಚೌಧರಿ ಗಾಜಿಯಾಬಾದಿನ ನ್ಯೂ ಪಂಚವಟಿ ಕಾಲೊನಿಯಲ್ಲಿ ವಾಸವಿದ್ದು, ಆತ ಹಳೆ 500, 1000 ಮುಖಬೆಲೆಯ ನೋಟುಗಳನ್ನೇ ಡೆಪಾಸಿಟ್ ಮಾಡಿದ್ದ. ಇದೇ ರೀತಿ ಒಂದಷ್ಟು ಮೊತ್ತವನ್ನು ಆರ್.ಟಿ.ಜಿ.ಎಸ್ ಮೂಲಕ ದೆಹಲಿ ಮತ್ತು ಮೀರತ್ ನಲ್ಲಿರುವ ಬೇರೆ ಬೇರೆ ಖಾತೆಗಳಿಗೂ ವರ್ಗಾವಣೆ ಮಾಡಿದ್ದಾನೆ. ಒಮ್ಮೆಗೆ ಸುಮಾರು 50 ಲಕ್ಷ ರೂಪಾಯಿಗಳನ್ನು ಈತ ವರ್ಗಾವಣೆ ಮಾಡಿದ್ದು ಇದೀಗ ಐಟಿ ಅಧಿಕಾರಗಳ ಅತಿಥಿಯಾಗಿದ್ದಾನೆ.












Click it and Unblock the Notifications