ಗುದ್ದಿದರು, ಹೊಡೆದರು, ನೆಲಕ್ಕೆ ನೂಕಿದರು: ದೆಹಲಿ ಪಾಲಿಕೆಯಲ್ಲಿ ಎಎಪಿ-ಬಿಜೆಪಿ ಮುಖಂಡರ ಬಡಿದಾಟ, ವಿಡಿಯೊ ನೋಡಿ
ನವದೆಹಲಿ, ಡಿಸೆಂಬರ್ 06: ದೆಹಲಿ ಮಹಾನಗರ ಪಾಲಿಕೆಯಲ್ಲಿ (MCD) ಆಮ್ ಆದ್ಮಿ ಪಕ್ಷ (AAP) ಹಾಗೂ ಬಿಜೆಪಿಯ ನೂತನ ಕೌನ್ಸಿಲರ್ಗಳ ನಡುವೆ ಬಡಿದಾಟ ನಡೆದಿರುವ ಬಗ್ಗೆ ವರದಿಯಾಗಿದೆ.
ಇಂದು ದೆಹಲಿ ಮೇಯರ್ ಆಯ್ಕೆಗಾಗಿ ನಡೆದ ಸಭೆಯಲ್ಲಿ ಘರ್ಷಣೆ ಏರ್ಪಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಕೂಗುತ್ತಾ ದೈಹಿಕವಾಗಿ ಘರ್ಷಣೆ ಮತ್ತು ತಳ್ಳಾಟದಲ್ಲಿ ಕೌನ್ಸಿಲರ್ಗಳು ತೊಡಗಿರುವುದು ಕಂಡುಬಂದಿದೆ.
ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಸಭೆಯ ಸಂದರ್ಭದಲ್ಲಿ ನೂಕಾಟ, ತಳ್ಳಾಟ ಹಾಗೂ ಉದ್ಧಟತನವನ್ನು ಜನಪ್ರತಿನಿಧಿಗಳು ಮೆರೆದಿದ್ದಾರೆ. ಕೆಲವರು ಗುದ್ದಾಡಿದ್ದಾರೆ. ಕೆಲವರ ಬಟ್ಟೆ ಹರಿದ್ದಾರೆ. ಇನ್ನು ಕೆಲವರು ನೆಲಕ್ಕೆ ಬಿದ್ದಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
#WATCH | Delhi: Ruckus at Civic Center as BJP, AAP councillors clash with each other amid ensuing sloganeering ahead of Delhi Mayor polls. pic.twitter.com/v1HXUxawSC
— ANI (@ANI) January 6, 2023
ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ನೇಮಿಸಿದ ಹಂಗಾಮಿ ಸ್ಪೀಕರ್ ಸತ್ಯ ಶರ್ಮಾ ಅವರು ಮೇಯರ್ ಚುನಾವಣೆಗೆ ಮುನ್ನ ನಾಮನಿರ್ದೇಶಿತ ಸದಸ್ಯರು ಅಥವಾ ಸದನದ ಹಿರಿಯರಿಗೆ ಪ್ರಮಾಣ ವಚನ ಸ್ವೀಕರ ಬೋಧನೆ ಮಾಡಿದರು. ಆ ನಂತರ ಪ್ರತಿಭಟನೆಗಳು ಭುಗಿಲೆದ್ದಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಶರ್ಮಾ ಅವರು ಆಲ್ಡರ್ಮನ್ ಮನೋಜ್ ಕುಮಾರ್ ಅವರನ್ನು ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸುತ್ತಿದ್ದಂತೆ, ಆಪ್ ಶಾಸಕರು ಮತ್ತು ಕೌನ್ಸಿಲರ್ಗಳು ಘೋಷಣೆಗಳನ್ನು ಕೂಗುತ್ತಾ ಸದನದ ಮಧ್ಯಭಾಗಕ್ಕೆ ಧಾವಿಸಿದರು.
ಚುನಾಯಿತ ಕೌನ್ಸಿಲರ್ಗಳು ಹಾಗೂ ನಾಮನಿರ್ದೇಶಿತ ಸದಸ್ಯರು ಮೊದಲು ಪ್ರಮಾಣ ವಚನ ಸ್ವೀಕರಿಸಬೇಕಿತ್ತು ಎಂಬುದು ಎಎಪಿ ಸದಸ್ಯರ ವಾದವಾಗಿತ್ತು. ದೆಹಲಿಯಲ್ಲಿ ತನ್ನ ಸರ್ಕಾರವನ್ನು ಸಂಪರ್ಕಿಸದೆ ಲೆಫ್ಟಿನೆಂಟ್ ಗವರ್ನರ್ 10 ನಾಮನಿರ್ದೇಶಿತ ಸದಸ್ಯರನ್ನು ಹೆಸರಿಸಿರುವುದನ್ನು ಎಎಪಿ ಈ ಹಿಂದೆ ಆಕ್ಷೇಪಿಸಿತ್ತು.

ಎಎಪಿ ಮತ್ತು ಲೆಫ್ಟಿನೆಂಟ್ ಗವರ್ನರ್(ಕೇಂದ್ರದಿಂದ ನೇಮಕವಾಗಿರುವವರು) ನಡುವಿನ ಘರ್ಷಣೆಯ ಈ ಹಿಂದಿನಿಂದಲೂ ಇದೆ.
ಮೂರು ಅವಧಿಯ ಅಧಿಕಾರದ ನಂತರ ಡಿಸೆಂಬರ್ನಲ್ಲಿ ನಡೆದ ನಾಗರಿಕ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಅವರಿಗೆ ಸಹಾಯ ಮಾಡಲು ಲೆಫ್ಟಿನೆಂಟ್ ಗವರ್ನರ್ ಮೇಯರ್ ಚುನಾವಣೆಯಲ್ಲಿ ಅಕ್ರಮ ಎಸಗಲು ಪ್ರಯತ್ನಿಸುತ್ತಿದ್ದಾರೆ ಎಂದು ಎಎಪಿ ಆರೋಪಿಸಿದೆ.
ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ನಿನ್ನೆ ಟ್ವಿಟರ್ನಲ್ಲಿ ಹಂಚಿಕೊಂಡ ಪತ್ರದಲ್ಲಿ ಲೆಫ್ಟಿನೆಂಟ್ ಗವರ್ನರ್ ಬಿಜೆಪಿಗೆ ಹತ್ತಿರವಿರುವ 10 ನಾಮನಿರ್ದೇಶಿತ ಸದಸ್ಯರನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಾಮನಿರ್ದೇಶಿತ ಸದಸ್ಯರನ್ನು ಹೆಸರಿಸಿದ ನಂತರ, ಸಕ್ಸೇನಾ ಅವರು ಇಂದಿನ ಚುನಾವಣೆಯ ಅಧ್ಯಕ್ಷತೆ ವಹಿಸಲು ಬಿಜೆಪಿ ಕೌನ್ಸಿಲರ್ ಸತ್ಯ ಶರ್ಮಾ ಅವರನ್ನು ತಾತ್ಕಾಲಿಕ ಸ್ಪೀಕರ್ ಆಗಿ ನೇಮಿಸಿದರು. ಹಿರಿಯ ಕೌನ್ಸಿಲರ್ ಮುಖೇಶ್ ಗೋಯಲ್ ಅವರನ್ನು ಈ ಹುದ್ದೆಗೆ ಎಎಪಿ ಶಿಫಾರಸು ಮಾಡಿತ್ತು.
'ಸದನದ ಅತ್ಯಂತ ಹಿರಿಯ ಸದಸ್ಯರನ್ನು ಹಂಗಾಮಿ ಸ್ಪೀಕರ್ ಅಥವಾ ಸಭಾಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡುವುದು ಸಂಪ್ರದಾಯವಾಗಿದೆ. ಆದರೆ ಬಿಜೆಪಿ ಎಲ್ಲಾ ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ಸಂಸ್ಥೆಗಳನ್ನು ನಾಶಮಾಡಲು ಹೊರಟಿದೆ' ಎಂದು ಎಎಪಿ ಶಾಸಕ ಸೌರಭ್ ಭಾರದ್ವಾಜ್ ಟ್ವೀಟ್ ಮಾಡಿದ್ದಾರೆ.
ಮೇಯರ್ ಸ್ಥಾನವನ್ನು ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳಿಕೊಂಡಿದೆ. ಎಎಪಿಗೆ ತನ್ನದೇ ಕೌನ್ಸಿಲರ್ಗಳ ಮೇಲೆ ನಂಬಿಕೆ ಇಲ್ಲವೆಂದೂ ಆರೋಪಿಸಿದೆ.

'ಎಲ್ಲವನ್ನೂ ಸಂವಿಧಾನದ ಪ್ರಕಾರ ಮಾಡಲಾಗುತ್ತಿದೆ. ಅವರು ನೈತಿಕವಾಗಿ ಸೋತಿದ್ದಾರೆ. ಹೀಗಿರುವಾಗ ಅವರು ಸಮರ್ಥನೆಗಳನ್ನು ಮಾಡುತ್ತಿದ್ದಾರೆ' ಎಂದು ಬಿಜೆಪಿ ನಾಯಕ ಮನೋಜ್ ತಿವಾರಿ ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಪಕ್ಷವು ಮೇಯರ್ ಅಭ್ಯರ್ಥಿಯಾಗಿ ಶೆಲ್ಲಿ ಒಬೆರಾಯ್ ಅವರನ್ನು ಹೆಸರಿಸಿದೆ. ಎಂಸಿಡಿ ಹೌಸ್ 250 ಚುನಾಯಿತ ಕೌನ್ಸಿಲರ್ಗಳನ್ನು ಹೊಂದಿದೆ. ದೆಹಲಿಯ ಬಿಜೆಪಿಯ ಏಳು ಲೋಕಸಭಾ ಸಂಸದರು ಮತ್ತು ಎಎಪಿಯ ಮೂವರು ರಾಜ್ಯಸಭಾ ಸದಸ್ಯರು ಮತ್ತು ದೆಹಲಿ ಸ್ಪೀಕರ್ ನಾಮನಿರ್ದೇಶನ ಮಾಡಿದ 14 ಶಾಸಕರು ಮೇಯರ್ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ.












Click it and Unblock the Notifications