Delhi Election 2025: ಸ್ಲಂ ನಿವಾಸಿಗಳ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಈ ಕೆಲಸ ಮಾಡಲಿ ಎಎಪಿ ಸವಾಲು
ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರ ಜೋರಾಗಿ ನಡೆದಿದೆ. ದೆಹಲಿ ವಿಧಾನಸಭೆ ಚುನಾವಣೆಗೆ ಇನ್ನು ಎರಡು ವಾರಗಳು ಮಾತ್ರ ಬಾಕಿ ಉಳಿದಿವೆ. ಈ ನಡುವೆ ಬಿಜೆಪಿ - ಕಾಂಗ್ರೆಸ್ ಹಾಗೂ ಎಎಪಿ ಪಕ್ಷಗಳ ನಡುವೆ ಸ್ಲಂ ವಿಚಾರವಾಗಿ ವಾಕ್ಸಮರ ಮುಂದುವರಿದೆ. ಸ್ಲಂಗಳ ಅಭಿವೃದ್ಧಿ ಯಾರ ಅವಧಿಯಲ್ಲಿ ಆಗಿದೆ ಎನ್ನುವ ವಿಚಾರ ಇಲ್ಲಿ ಭಾರೀ ಚರ್ಚೆಯಾಗುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸ್ಲಂ ವಿಚಾರವನ್ನು ಇರಿಸಿಕೊಂಡೇ ಎಎಪಿಯ ಮೇಲೆ ಮುಗಿಬಿದ್ದಿವೆ. ದೆಹಲಿಯಲ್ಲಿ ಎಎಪಿ ಸ್ಲಂಗಳ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿದೆ. ಕಳೆದ 10 ವರ್ಷಗಳಿಂದ ದೆಹಲಿಯಲ್ಲಿ ಎಎಪಿ ಅಧಿಕಾರದಲ್ಲಿ ಇದ್ದರೂ ಸ್ಲಂಗಳ ಅಭಿವೃದ್ಧಿ ಮಾಡಿಲ್ಲ ಎಂದು ಬಿಜೆಪಿ - ಕಾಂಗ್ರೆಸ್ ಆರೋಪಿಸಿದೆ. ಇದೀಗ ಈ ವಿಚಾರವಾಗಿ ಎಎಪಿ ತಿರುಗೇಟು ನೀಡಿದೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಸಾಮಾನ್ಯವಾಗಿ ದೇಶದಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಆರೋಪ - ಪ್ರತ್ಯಾರೋಪ ನಡೆಯುತ್ತಿರುತ್ತವೆ. ಆದರೆ ಇದೀಗ ದೆಹಲಿ ಚುನಾವಣೆಯಲ್ಲಿ ಅಭಿವೃದ್ಧಿ ವಿಷಯಗಳು ಚರ್ಚೆಯಾಗುತ್ತಿವೆ. ಈ ವಿಷಯದ ಬಗ್ಗೆ ಮಾತನಾಡಿರುವ ದೆಹಲಿಯ ಗ್ರೇಟರ್ ಕೈಲಾಶ್ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ಸೌರಭ್ ಭಾರದ್ವಾಜ್ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಎರಡು ವರ್ಷದ ಅವಧಿಯಲ್ಲಿ ದೆಹಲಿಯಲ್ಲಿ ಬರೋಬ್ಬರಿ 12 ಸ್ಲಂ / ಕೊಳೆಗೇರಿಗಳಲ್ಲಿನ ಮನೆಗಳನ್ನು ನೆಲಸಮ ಮಾಡಿದೆ. ಇನ್ನೂ ಹಲವು ಸ್ಲಂಗಳನ್ನು ನೆಲಸಮ ಮಾಡುವುದಕ್ಕೆ ನ್ಯಾಯಾಲಯದ ಮೊರೆ ಹೋಗಿದೆ ಎಂದು ದೂರಿದ್ದಾರೆ.

ಬಿಜೆಪಿಯು ಸ್ಲಂಗಳ ವಿಚಾರವಾಗಿ ಇಷ್ಟೊಂದು ಮಾತನಾಡುತ್ತಿದೆ. ಸ್ಲಂಗಳ ವಿಚಾರವಾಗಿ ನಿಜವಾಗಿಯೂ ಅಷ್ಟೊಂದು ಕಾಳಜಿ ಇರುವುದೇ ನಿಜವಾದರೆ ಬಿಜೆಪಿಯು ಈ ಪ್ರಕರಣಗಳನ್ನು ವಾಪಸ್ ಪಡೆಯಲಿ ಎಂದು ಅವರು ಸವಾಲು ಹಾಕಿದ್ದಾರೆ. ಈಗ ಬಿಜೆಪಿಯು ದೆಹಲಿ ಚುನಾಣೆಗಳು ಸಮೀಪಿಸುತ್ತಿರುವ ಸಮಯದಲ್ಲಿ ಸ್ಲಂ ಹಾಗೂ ಸ್ಲಂಗಳ ನಿವಾಸಿಗಳ ಬಗ್ಗೆ ಮಾತನಾಡುತ್ತಿದೆ. ನಿಜಕ್ಕೂ ಸ್ಲಂನಲ್ಲಿ ಇರುವ ನಿವಾಸಿಗಳ ಮೇಲೆ ಕಾಳಜಿ ಇರುವುದು ನಿಜವೇ ಆದರೆ ಬಿಜೆಪಿಯು ನ್ಯಾಯಾಲಯದಲ್ಲಿ ಸ್ಲಂಗಳ ನೆಲಸಮ ಮಾಡುವ ವಿಚಾರಕ್ಕೆ ಸಲ್ಲಿಸಿರುವ ಅರ್ಜಿಗಳನ್ನು ಹಿಂಪಡೆಯಲಿ ಎಂದು ಸವಾಲು ಎಸೆದಿದ್ದಾರೆ.
ಬಿಜೆಪಿ ಸ್ಲಂ ನಿವಾಸಿಗಳ ಮತವನ್ನು ಪ್ರೀತಿಸುತ್ತದೆ: ಎಎಪಿ
ದೆಹಲಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ವಾಕ್ಸಮರ ಶುರುವಾಗಿದೆ. ದೆಹಲಿಯಲ್ಲಿ ಸ್ಲಂಗಳ ನಿರ್ಮೂಲ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಜೆಪಿಗೆ ಸ್ಲಂ ನಿವಾಸಿಗಳ ಮೇಲೆ ಪ್ರೀತಿ ಇಲ್ಲ. ಆದರೆ ಸ್ಲಂ ನಿವಾಸಿಗಳ ಮತಗಳ ಮೇಲೆ ಮಾತ್ರ ಪ್ರೀತಿ ಇದೆ. ಹೀಗಾಗಿ ಚುನಾವಣೆ ಸಮಯದಲ್ಲಿ ಸ್ಲಂ ವಿಷಯವನ್ನು ಪ್ರಸ್ತಾಪಿಸುತ್ತಿದೆ ಎಂದು ಎಎಪಿಯ ಮುಖ್ಯಸ್ಥ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಅವರು ಆಕ್ರೋಶ ಹೊರ ಹಾಕಿದ್ದಾರೆ.
ಈ ಬೆಳವಣಿಗೆಗಳಿಗಿಂತಲೂ ಮುಂಚೆ ಕೇಂದ್ರ ಸಚಿವ ರವನೀತ್ ಸಿಂಗ್ ಅವರು, ಅರವಿಂದ್ ಕೇಜ್ರಿವಾಲ್ ಅವರ ಆಡಳಿತದ ಬಗ್ಗೆ ಹಾಗೂ ಎಎಪಿಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದರು. ಅವರು ಇಷ್ಟು ವರ್ಷಗಳಿಂದ ಅಧಿಕಾರದಲ್ಲಿ ಇದ್ದರೂ ಯಾಕೆ ಸ್ಲಂಗಳ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನೆ ಮಾಡಿದ್ದರು.
ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 5ಕ್ಕೆ ಚುನಾವಣೆ ನಡೆಯಲಿದ್ದು, ಫೆಬ್ರವರಿ 8ಕ್ಕೆ ದೆಹಲಿ ವಿಧಾನಸಭೆಯ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications