ಉಪವಾಸ ಸತ್ಯಾಗ್ರಹ, ದೆಹಲಿ ಡೆಪ್ಯುಟಿ ಸಿಎಂ ಸಿಸೋಡಿಯಾ ಆಸ್ಪತ್ರೆಗೆ
ನವದೆಹಲಿ, ಜೂನ್ 18: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಕಚೇರಿಯಲ್ಲಿ ಕಳೆದ 6 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ದೆಹಲಿಯ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಅವರ ದೇಹದಲ್ಲಿ ಕಿಟೋನ್ ಮಟ್ಟ 7.4ಕ್ಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಲೋಕನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಗೆ ಸೇರಿಸಲಾಗಿದೆ.
ಕಳೆದ ಆರು ದಿನಗಳಿಂದ ಅವರು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರನಾಥ್ ಜೈನ್ ಅವರ ಜೊತೆ ಅನಿಲ್ ಬೈಜಾಲ್ ಅವರ ಕಚೇರಿಯಲ್ಲೇ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಇದರಲ್ಲಿ ಸತ್ಯೇಂದ್ರನಾಥ್ ಅವರ ಆರೋಗ್ಯವೂ ಹದಗೆಟ್ಟಿದ್ದು, ಅವರನ್ನು ಭಾನುವಾರ ರಾತ್ರಿಯೇ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ಇದೀಗ ಅನಿಲ್ ಬೈಜಾಲ್ ಅವರ ನಿವಾಸದ ವೇಯ್ಟಿಂಗ್ ರೂಂನಲ್ಲಿ ಅರವಿಂದ ಕೇಜ್ರಿವಾಲ್ ಮತ್ತು ಗೋಪಾಲ್ ರೈ ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ.
ಬೈಜಾಲ್ ಅವರನ್ನು ಭೇಟಿಯಾಗಲು ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಇತರ ಸಚಿವರು ಕಳೆದ ಸೋಮವಾರದಿಂದ ಯತ್ನಿಸುತ್ತಿದ್ದಾರೆ. ಆದರೆ ಇದಕ್ಕೆ ಅನುಮತಿ ನೀಡುತ್ತಿಲ್ಲ. 'ಅಧಿಕಾರಿಗಳ ಪ್ರತಿಭಟನೆ ಕೊನೆಗೊಳಿಸಲು ಲೆಫ್ಟಿನೆಂಟ್ ಗವರ್ನರ್ ಮಧ್ಯ ಪ್ರವೇಶ ಮಾಡಬೇಕು. ಇದಲ್ಲದೆ ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಗೆ ಅನುಮತಿ ನೀಡಬೇಕು' ಎಂಬುದು ಕೇಜ್ರಿವಾಲ್ ಸರಕಾರದ ಬೇಡಿಕೆಯಾಗಿದೆ.
ಬೈಜಾಲ್ ಭೇಟಿಗೆ ಅವಕಾಶ ನೀಡದೇ ಇದ್ದ ಹಿನ್ನೆಲೆಯಲ್ಲಿ, ಅವರೆಲ್ಲಾ ಬೈಜಾಲ್ ಕಚೇರಿಯ ವೇಯ್ಟಿಂಗ್ ರೂಂನಲ್ಲೇ 8 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಮಧ್ಯ ಪ್ರವೇಶ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಮೋದಿ ಸ್ಪಂದಿಸಿಲ್ಲ.












Click it and Unblock the Notifications