Delhi Assembly Election 2025: ದೆಹಲಿ ಚುನಾವಣೆ, ರಾಹುಲ್ ಗಾಂಧಿ ಸಮಾವೇಶದ ಮೇಲೆ ಎಲ್ಲರ ಕಣ್ಣು
ನವದೆಹಲಿ, ಜನವರಿ 12: ಕೇಂದ್ರ ಚುನಾವಣಾ ಆಯೋಗ ದೆಹಲಿ ವಿಧಾನಸಭೆ ಚುನಾವಣೆ-2025ರ ಅಧಿಸೂಚನೆ ಪ್ರಕಟಿಸಿದೆ. ಫೆಬ್ರವರಿ 5ರಂದು ಒಂದೇ ಹಂತದಲ್ಲಿ 70 ಸದಸ್ಯ ಬಲದ ವಿಧಾನಸಭೆಗೆ ಮತದಾನ ನಡೆಯಲಿದೆ, ಫೆಬ್ರವರಿ 8ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36.
ರಾಷ್ಟ್ರ ರಾಜಧಾನಿಯ ಚುನಾವಣೆ ಕಾವು ಪಡೆದುಕೊಳ್ಳುತ್ತಿದೆ. ಸದ್ಯ ಆಡಳಿತ ಪಕ್ಷ ಎಎಪಿ. ಚುನಾವಣೆಯಲ್ಲಿ ಎಎಪಿಗೆ ಬಿಜೆಪಿ, ಕಾಂಗ್ರೆಸ್ ಸಮಾನ ಎದುರಾಳಿಗಳು. ಮೂರು ಪಕ್ಷಗಳು ಚುನಾವಣಾ ಪ್ರಚಾರ ಆರಂಭಿಸಿವೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜನವರಿ 13ರ ಸೋಮವಾರದಿಂದ ದೆಹಲಿಯಲ್ಲಿ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ.

ಜೈ ಭೀಮ್, ಜೈ ಸಂವಿಧಾನ್ ಸಮಾವೇಶ: ರಾಹುಲ್ ಗಾಂಧಿ ಸೋಮವಾರ ಸೀಲಾಂಪುರ್ ಕ್ಷೇತ್ರದಲ್ಲಿ 'ಜೈ ಭೀಮ್, ಜೈ ಸಂವಿಧಾನ್' ಸಮಾವೇಶ ಉದ್ದೇಶಿಸಿ ಮಾತನಾಡುವ ಮೂಲಕ ದೆಹಲಿ ವಿಧಾನಸಭೆ ಚುನಾವಣೆ 2025ರ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.
ದೆಹಲಿ ಕಾಂಗ್ರೆಸ್ ಉಸ್ತುವಾರಿ ಖ್ವಾಜಾ ನಿಜಾಮುದ್ದೀನ್ ಮಾತನಾಡಿ, "ದೆಹಲಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರು, ಸಾಮಾನ್ಯ ಜನರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಹುಲ್ ಗಾಂಧಿ ಈಗಾಗಲೇ ದೆಹಲಿಯಲ್ಲಿ ಎಲ್ಲಾ ವರ್ಗದ ಜನರ ಜೊತೆ ಸಂವಾದ ನಡೆಸುತ್ತಿದ್ದು, ಪಕ್ಷ ಚುನಾವಣೆಗೆ ತಯಾರಿ ನಡೆಸುತ್ತಿದೆ" ಎಂದು ಹೇಳಿದ್ದಾರೆ.
ಬಿಜೆಪಿ, ಎಎಪಿ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ಹೋಲಿಕೆ ಮಾಡಿದರೆ ಕಾಂಗ್ರೆಸ್ ನಿಧಾನವಾಗಿ ಪ್ರಚಾರನ್ನು ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ದೆಹಲಿಯಲ್ಲಿ ಎರಡು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಎಎಪಿ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಟೀಕಿಸಿದ್ದಾರೆ.
ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದ್ರ ಯಾದವ್ ನೇತೃತ್ವದಲ್ಲಿ ಈಗಾಗಲೇ ಒಂದು ತಿಂಗಳ ಕಾಲದ 'ದೆಹಲಿ ನ್ಯಾಯ ಯಾತ್ರೆ'ಯನ್ನು ನಡೆಸಲಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಿದೆ ಎಂದು ಖ್ವಾಜಾ ನಿಜಾಮುದ್ದೀನ್ ತಿಳಿಸಿದ್ದಾರೆ.
"ದೆಹಲಿಯ 11 ವರ್ಷಗಳ ಜನ ವಿರೋಧ ಆಡಳಿತನವನ್ನು ನೋಡಿರುವ ಜನರು ಈ ಬಾರಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ. ಬಿಜೆಪಿ ಮತ್ತು ಎಎಪಿ ಆಡಳಿತ ನೋಡಿ ಜನರು ರೋಸಿ ಹೋಗಿದ್ದಾರೆ. ಅವರು ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸಲಿದ್ದಾರೆ" ಎಂದು ಖ್ವಾಜಾ ನಿಜಾಮುದ್ದೀನ್ ಹೇಳಿದ್ದಾರೆ.
"ರಾಹುಲ್ ಗಾಂಧಿ ಈಗಾಗಲೇ ಲಾರಿ ಚಾಲಕರು, ಗೊಂಬೆ ತಯಾರಕರು, ಬೇಕರಿ ಉತ್ಪನ್ನ ತಯಾರಕರು, ಟೈಲರ್ಗಳು, ತರಕಾರಿ ಮಾರಾಟ ಮಾಡುವವರು ಹೀಗೆ ದೆಹಲಿಯ ವಿವಿಧ ವರ್ಗದ ಜನರ ಜೊತೆ ಸಂವಾದ ನಡೆಸಿದ್ದಾರೆ. ಅವರು ತಮ್ಮ ಸಮಸ್ಯೆಗಳ ಕುರಿತು ಅಳವಾದ ವಿವರಣೆಗಳನ್ನು ನೀಡಿದ್ದಾರೆ" ಎಂದು ಖ್ವಾಜಾ ನಿಜಾಮುದ್ದೀನ್ ತಿಳಿಸಿದರು.
ಭ್ರಷ್ಟಾಚಾರದ ಆಡಳಿತ ನಡೆಸುವ ಎಎಪಿಯಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ತಂತ್ರ ರೂಪಿಸಿದೆ. ಅದಕ್ಕಾಗಿ ಸೀಲಾಂಪುರ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಮಾವೇಶವನ್ನು ನಡೆಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ಕೊಡಲಾಗುತ್ತದೆ. ದೆಹಲಿ ಚುನಾವಣೆಯಲ್ಲಿ ಜನರು ಯಾವ ಪಕ್ಷವನ್ನು ಬೆಂಬಲಿಸಲಿದ್ದಾರೆ? ಎಂದು ಕಾದು ನೋಡಬೇಕಿದೆ.












Click it and Unblock the Notifications