ಆಹಾ! ದೀಪಾವಳಿಯ ಸಂಭ್ರಮ: ಹೀಗಿದೆ ದೇಶದೆಲ್ಲೆಡೆ ಬೆಳಕಿನ ಹಬ್ಬದ ಸಡಗರ
ಬೆಂಗಳೂರು, ನವೆಂಬರ್ 7: ದೇಶದಾದ್ಯಂತ ಬೆಳಕಿನ ಹಬ್ಬದ ಸಡಗರ ಹರಡಿದೆ. ಪಟಾಕಿ ಬಳಕೆಯ ಮೇಲಿನ ನಿರ್ಬಂಧದ ನಡುವೆಯೂ ಎಲ್ಲೆಡೆ ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿಸುವ, ಢಂ ಎಂದು ಸದ್ದುಮೊಳಗಿಸುವ ಪಟಾಕಿಗಳ ಅಬ್ಬರವೇನೂ ತೀರಾ ಕಡಿಮೆಯಾಗಿಲ್ಲ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರತಿ ರಾಜ್ಯಗಳಲ್ಲಿಯೂ ವಿಭಿನ್ನ ರೀತಿಯ ಸಂಪ್ರದಾಯದಂತೆ ದೀಪಾವಳಿಯ ಆಚರಣೆ ನಡೆದಿದೆ.
ಇಡೀ ದೇಶ ಹಣತೆಯ ಬೆಳಕಿನಲ್ಲಿ ಮಿಂದಿದೆ. ದೇವಸ್ಥಾನ, ಮನೆ, ಕಚೇರಿ, ವಾಣಿಜ್ಯ ಕಟ್ಟಡಗಳು ಎಲ್ಲೆಡೆ ಬೆಳಕು ತುಂಬಿದೆ. ಸಾಲು ಸಾಲು ರಜೆಗಳಿರುವುದರಿಂದ ಊರಿಗೆ ತೆರಳಿ ಹಬ್ಬ ಆಚರಿಸುವ ಸಂಭ್ರಮ ಕಾಣಿಸುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷದಂತೆ ಈ ಬಾರಿಯೂ ಸೈನಿಕರ ಜತೆಯಲ್ಲಿ ದೀಪಾವಳಿ ಆಚರಿಸಿದರು. ಉತ್ತರಾಖಂಡದ ಹರ್ಸಿಲ್ನಲ್ಲಿ ಸಶಸ್ತ್ರಪಡೆಯ ಸೈನಿಕರನ್ನು ಭೇಟಿ ಮಾಡಿ ಅವರಿಗೆ ಸಿಹಿ ತಿನ್ನಿಸಿ ಶುಭ ಕೋರಿದರು.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಅರುಣಾಚಲಕ್ಕೆ ತೆರಳಿ ಚೀನಾ-ಭಾರತ ಗಡಿಯಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದರು.
ಬೆಳಕಿನ ಹಬ್ಬ ದೇಶದ ವಿವಿಧ ಭಾಗಗಳಲ್ಲಿ ಹೇಗಿತ್ತು, ಅದರ ಸಂಭ್ರಮದ ವರ್ಣಮಯ ದೃಶ್ಯಗಳು ಹೇಗಿದ್ದವು ಎಂಬುದರ ಕೆಲವು ಚಿತ್ರಗಳು ಮತ್ತು ವಿಡಿಯೋಗಳು ಇಲ್ಲಿವೆ.
|
ಬಾಂಗ್ಲಾದೇಶ ಗಡಿ
ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿನ ಬಾಂಗ್ಲಾದೇಶದ ಗಡಿಯಲ್ಲಿ ಗಡಿ ಭದ್ರತಾ ಪಡೆಯ ಯೋಧರು ಪಟಾಕಿ ಹೊಡೆದು ಹಬ್ಬ ಆಚರಿಸಿದರು.
| Array |
ದೇವಸ್ಥಾನದಲ್ಲಿ ಜನದಟ್ಟಣೆ
ದೀಪಾವಳಿ ಪ್ರಯುಕ್ತ ಜನರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಪ್ರದೇಶದ ಭೋಪಾಲ್ನಲ್ಲಿರುವ ಕರುಣಾನಾದಂ ಮಹಾಲಕ್ಷ್ಮಿ ದೇವಸ್ಥಾನವನ್ನು ದೀಪಾವಳಿ ಪ್ರಯುಕ್ತ ವಿಶೇಷವಾಗಿ ಅಲಂಕರಿಸಲಾಗಿತ್ತು.
|
ವಿಶೇಷ ಆರತಿ
ದೀಪಾವಳಿ ಅಂಗವಾಗಿ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನರು ಹಣತೆ ಹತ್ತಿ ಸಂಭ್ರಮಿಸಿದರೆ, ಪ್ರಮುಖ ದೇವಸ್ಥಾನಗಳಲ್ಲಿ ಬೃಹತ್ ಗಾತ್ರದ ಆರತಿಗಳನ್ನು ಎತ್ತಿ ಬೆಳಕಿನ ಹಬ್ಬಕ್ಕೆ ಸ್ವಾಗತ ಕೋರಲಾಯಿತು.
|
ಸಿಖ್ಖರ ಪವಿತ್ರ ಸ್ಥಳದಲ್ಲಿಯೂ
ದೀಪಾವಳಿ ಧಾರ್ಮಿಕ ಸಾಮರಸ್ಯದ ಹಬ್ಬವೂ ಹೌದು. ಸಿಖ್ಖರ ಪವಿತ್ರ ಧಾರ್ಮಿಕ ಕ್ಷೇತ್ರವಾದ ಅಮೃತಸರದಲ್ಲಿರುವ ಸ್ವರ್ಣಮಂದಿರವನ್ನು ವಿಶೇಷ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು.
|
ಶಿವಾಜಿ ವಿಮಾನ ನಿಲ್ದಾಣ
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣ ದೀಪಾವಳಿ ಹಬ್ಬದ ಪ್ರಯುಕ್ತ ಬುಧವಾರ ವಿಶೇಷ ಮೆರುಗು ಪಡೆದುಕೊಂಡಿದೆ. ಇಡೀ ವಿಮಾನ ನಿಲ್ದಾಣದ ಹೊರಭಾಗ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.












Click it and Unblock the Notifications