Deepavali 2022: ಪಟಾಕಿ ನಿಷೇಧ ಮಾಡಿದ ಹಲವು ರಾಜ್ಯಗಳು; ನಿಮ್ಮ ರಾಜ್ಯವು ಇದೆಯಾ ನೋಡಿ
ನವದೆಹಲಿ, ಅ. 14: ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಪಟಾಕಿ ಸಿಡಿಸಿ ಎಂಜಾಯ್ ಮಾಡಬೇಕು ಎಂದುಕೊಂಡಿದ್ದ ಕೆಲವರಿಗಂತು ನಿರಾಸೆ ಕಾದಿದೆ. ಏಕೆಂದರೆ ಕಳೆದ ಕೆಲವು ವರ್ಷಗಳಂತೆ ಈ ಬಾರಿಯು ಪಟಾಕಿ ಸಿಡಿಸಲು ಕೆಲವು ರಾಜ್ಯ ಸರ್ಕಾರಗಳು ಈಗಾಗಲೇ ನಿಯಮಗಳನ್ನು ರೂಪಿಸಿವೆ.
ಪಟಾಕಿಯ ಅನಿಯಂತ್ರಿತ ಮಾರಾಟ ಮತ್ತು ಭಾರೀ ಪಟಾಕಿ ಸಿಡಿಸುವಿಕೆಯಿಂದ ಹಬ್ಬದ ನಂತರ ಗಾಳಿಯಲ್ಲಿ ಮಾಲಿನ್ಯಕಾರಕಗಳ ತೀವ್ರ ಏರಿಕೆಗೆ ಕಾರಣವಾಗುವುದರಿಂದ, ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತವೆ. ಪರಿಸರಕ್ಕೂ ಹಾನಿಯಾಗುತ್ತದೆ ಹೀಗಾಗಿ ಅದನ್ನು ಕಡಿಮೆ ಮಾಡಲು ನಾಗರಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹಲವು ರಾಜ್ಯ ಸರ್ಕಾರಗಳು ಪಟಾಕಿ ಮಾರಾಟ, ಸಿಡಿಸುವಿಕೆ ಮತ್ತು ತಯಾರಿಕೆ ಮೇಲೆ ನಿಯಂತ್ರಣ ಹೇರಿವೆ. ಆ ರಾಜ್ಯಗಳ ಪಟ್ಟಿ ಕೆಳಗಿನಂತಿದೆ.
Deepavali 2022: ಹಸಿರು ಪಟಾಕಿ ಎಂದರೇನು? ಪರಿಸರ ಮಾಲಿನ್ಯ ಕಡಿಮೆ ಆಗುತ್ತದೆಯೇ?
ದೆಹಲಿಯಲ್ಲಿ ಜನವರಿ 1ರ ವರೆಗೂ ಪಟಾಕಿ ಬ್ಯಾನ್
ದೇಶದಲ್ಲಿ ವಾಯುಮಾಲಿನ್ಯ ಎಂದ ತಕ್ಷಣ ನೆನಪಾಗುವುದು ದೆಹಲಿ. ಆ ಮಟ್ಟಿಗೆ ಅಲ್ಲಿ ವಾಯುಮಾಲಿನ್ಯವಿದೆ. ಇಂತಹ ಸ್ಥಿತಿಯಲ್ಲಿ ಪಟಾಕಿ ಸುಡುವಿಕೆ ಬೃಹತ್ ಪ್ರಮಾಣದ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ದೆಹಲಿ ಸರ್ಕಾರವು ಜನವರಿ 1, 2023 ರವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಎಲ್ಲಾ ರೀತಿಯ ಪಟಾಕಿಗಳ ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ಆದೇಶವನ್ನು ಜಾರಿಗೊಳಿಸಿದೆ.
ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಆದೇಶದ ವಿರುದ್ಧ ಹಸಿರು ಪಟಾಕಿ ತಯಾರಕರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ. ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ ಸಂಪೂರ್ಣ ನಿಷೇಧವು ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಈ ರೀತಿಯ ಸಂಪೂರ್ಣ ನಿಷೇಧವನ್ನು ಈ ಹಿಂದೆ ಹಾಕಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿವೆ.
ಕೇವಲ ಹಸಿರು ಪಟಾಕಿ ಮಾರಾಟ, ಬಳಕೆಗೆ ಅವಕಾಶ
ದೆಹಲಿ ನಂತರ ಪಂಜಾಬ್ ಕೂಡ ಪಟಾಕಿ ಸಿಡಿಸಲು ನಿರ್ಬಂಧಗಳನ್ನು ಹೇರಿದೆ. ಅಕ್ಟೋಬರ್ 24 ರ ದೀಪಾವಳಿಯಂದು ಪಟಾಕಿ ಸಿಡಿಸಲು ಎರಡು ಗಂಟೆಗಳ ಕಾಲ ಅಂದರೆ ರಾತ್ರಿ 8 ರಿಂದ 10 ರ ವರೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಪಂಜಾಬ್ ಸರ್ಕಾರ ಬುಧವಾರ ಸ್ಪಷ್ಟಪಡಿಸಿದೆ.
ಪಟಾಕಿಗಳ ತಯಾರಿಕೆ, ದಾಸ್ತಾನು, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಪರವಾನಗಿ ಪಡೆದ ವ್ಯಾಪಾರಿಗಳ ಮೂಲಕ ಮಾತ್ರ ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಅನುಮತಿಸಲಾಗುವುದು ಎಂದು ರಾಜ್ಯದ ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಗುರ್ಮೀತ್ ಸಿಂಗ್ ಮೀಟ್ ಹಯರ್ ಹೇಳಿದ್ದಾರೆ.
ದೀಪಾವಳಿಯ ಹೊರತಾಗಿ, ಗುರುನಾನಕ್ ದೇವ್ ಅವರ 'ಪ್ರಕಾಶ್ ಪುರಬ್', ನವೆಂಬರ್ 8 ರಂದು ಬೆಳಿಗ್ಗೆ 4 ರಿಂದ 5 ರವರೆಗೆ ಮತ್ತು ರಾತ್ರಿ 9 ರಿಂದ ರಾತ್ರಿ 10 ರವರೆಗೆ ಒಂದು ಗಂಟೆ ಪಟಾಕಿ ಸಿಡಿಸಲು ಅನುಮತಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇದಲ್ಲದೆ, ಕ್ರಿಸ್ಮಸ್ ಮತ್ತು ಹೊಸ ವರ್ಷದ ಮುನ್ನಾದಿನದಂದು ರಾತ್ರಿ 11.55 ರಿಂದ 12.30 ರವರೆಗೆ ತಲಾ 35 ನಿಮಿಷಗಳ ಕಾಲ ಪಟಾಕಿ ಸಿಡಿಸಲು ಅವಕಾಶ ನೀಡಲಾಗುತ್ತದೆ ಎಂದು ಗುರ್ಮೀತ್ ಸಿಂಗ್ ಮೀಟ್ ಹಯರ್ ಹೇಳಿದ್ದಾರೆ.
ಹರಿಯಾಣದಲ್ಲೂ ಹೆಚ್ಚಾದ ಮಾಲಿನ್ಯ, ಪಟಾಕಿಗೆ ಕೊಕ್!
ಹರಿಯಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (HSPCB) ಸೋಮವಾರ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಪಟಾಕಿಗಳ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ತಕ್ಷಣವೇ ನಿಷೇಧಿಸಿದೆ.
ಆದೇಶದ ಪ್ರಕಾರ, ಚಳಿಗಾಲದ ತಿಂಗಳುಗಳಲ್ಲಿ ಸಂಭವಿಸುವ ವಿವಿಧ ಘಟನೆಗಳು ಹರಿಯಾಣದಲ್ಲಿ ವಾಯು ಮಾಲಿನ್ಯದ ಮಟ್ಟವನ್ನು ಉಲ್ಬಣಗೊಳಿಸಿದವು ಎಂದಿದೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾ ಹೈಕೋರ್ಟ್ ನಿರ್ದೇಶನದಂತೆ ಅಕ್ಟೋಬರ್ 24 ರಂದು ಕಾಳಿ ಪೂಜೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಹಸಿರು ಪಟಾಕಿಗಳನ್ನು ಮಾತ್ರ ಅನುಮತಿಸಿದೆ. ಈ ವಿಷಯದ ಕುರಿತು ಎರಡು ಕೇಂದ್ರೀಯ ಸಂಸ್ಥೆಗಳ ಶಿಫಾರಸುಗಳನ್ನು ಅನುಸರಿಸುತ್ತದೆ ಎಂದು ಸಚಿವ ಮಾನಸ್ ಭುನಿಯಾ ಗುರುವಾರ ಹೇಳಿದ್ದಾರೆ.
ಹಬ್ಬದ ಸಂದರ್ಭದಲ್ಲಿ ಕ್ಯೂಆರ್ ಕೋಡ್ ಹೊಂದಿರುವ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಯಾವುದೇ ಪಟಾಕಿಗಳನ್ನು ಆಮದು ಮಾಡಿಕೊಳ್ಳಬಾರದು ಮತ್ತು ಮಾರಾಟ ಮಾಡಬಾರದು ಎಂದು ಕೋಲ್ಕತ್ತಾ ಹೈಕೋರ್ಟ್ ನಿರ್ದೇಶಿಸಿದೆ.
ಆಸ್ಪತ್ರೆ, ಶಾಲೆ, ನ್ಯಾಯಾಲಯಗಳಿ ಪಟಾಖಿ ಸಿಡಿಸಲು ಅವಕಾಶವಿಲ್ಲ
ಹಿಂದಿನ ನಾಲ್ಕು ವರ್ಷಗಳ ಅದೇ ಪ್ರವೃತ್ತಿಯನ್ನು ಅನುಸರಿಸಿ, ತಮಿಳುನಾಡು ಸರ್ಕಾರವು ಹಬ್ಬದ ದಿನ ಒಂದು ದಿನದಲ್ಲಿ ಎರಡು ಬಾರಿ ಒಂದು ಗಂಟೆ ಪಟಾಕಿ ಸಿಡಿಸಲು ಅನುಮತಿ ನೀಡಿದೆ. ಬೆಳಿಗ್ಗೆ 6 ರಿಂದ 7 ಮತ್ತು ಸಂಜೆ 7 ರಿಂದ 8 ಗಂಟೆಯಲ್ಲಿ ಪಟಾಕಿ ಸಿಡಿಸಬಹುದು.
ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯು ಆಸ್ಪತ್ರೆಗಳು, ಶಾಲೆಗಳು, ನ್ಯಾಯಾಲಯಗಳು ಮುಂತಾದ ನಿಶ್ಯಬ್ದ ಪ್ರದೇಶಗಳಲ್ಲಿ ಸರಣಿ ಪಟಾಕಿಗಳನ್ನು ಮತ್ತು ಮಾಮೂಲಿ ಪಟಾಕಿಗಳನ್ನು ಸಿಡಿಸುವಂತಿಲ್ಲ ಎಂದು ಆದೇಶ ನೀಡಿದೆ.