ದಲಿತ ವಿದ್ಯಾರ್ಥಿ ಆತ್ಮಹತ್ಯೆ : ಜಾತಿ ಬೆಂಕಿಗೆ ರಾಜಕೀಯ ತುಪ್ಪ
ಬಾಳಿ ಬದುಕಬೇಕಾಗಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ, ಆತನ ಭವಿಷ್ಯದಲ್ಲಿ ತನ್ನ ಮುಂದಿನ ಜೀವನ ಕಾಣುತ್ತಿದ್ದ ಕುಟುಂಬ ಕಣ್ಣೀರ ಕೋಡಿ ಹರಿಸುತ್ತಿದೆ. ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ ಎಂದರಿತ ಯುವರಾಜರು ದೆಹಲಿಯಿಂದ ಹೈದರಾಬಾದಿಗೆ ದೌಡಾಯಿಸಿದ್ದಾರೆ, ನಿರೀಕ್ಷೆಯಂತೆ ಬಿಜೆಪಿಯ ವಿರುದ್ದ ಹರಿಹಾಯ್ದಿದ್ದಾರೆ. ಕೆಲವರು ಪ್ರಶಸ್ತಿ ಹಿಂದಿರುಗಿಸಲು ಆರಂಭಿಸಿದ್ದಾರೆ.
ಇತ್ತ ದಲಿತ ವಿದ್ಯಾರ್ಥಿ ಎನ್ನಲಾದ (ದಲಿತ ಅಥವಾ ಓಬಿಸಿಯೋ ಎನ್ನುವ ಗೊಂದಲವಿದೆ ಎನ್ನಲಾಗುತ್ತಿದೆ) ರೋಹಿತ ವೇಮುಲಾನ ದುರಂತ ಸಾವು ವಿಪಕ್ಷದವರಿಗೆ ಆಹಾರವಾಗಿದೆ, ಕೇಜ್ರಿವಾಲ್ ಮಗುದೊಮ್ಮೆ ಮೋದಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ, ಮಾಯಾವತಿ ಸಮಿತಿ ರಚಿಸುತ್ತೇನೆಂದು ದೂರದ ಲಕ್ನೋದಿಂದ ಹೇಳಿಕೆ ನೀಡಿದ್ದಾರೆ. (ವಿದ್ಯಾರ್ಥಿ ರೋಹಿತ್ ಸಾವು, ಸ್ಮೃತಿ ರಾಜೀನಾಮೆಗೆ ಆಗ್ರಹ)
ಬಿಜೆಪಿ ನಮ್ಮದೇನೂ ತಪ್ಪಿಲ್ಲ ಎಂದು ಸಮಜಾಯಿಷಿ ನೀಡಿದೆ, ಹೈದರಾಬಾದ್ ಪೊಲೀಸರು ಬಲವಂತದಿಂದ ಮೃತ ವಿದ್ಯಾರ್ಥಿ ರೋಹಿತನ ಅಂತಿಮ ಸಂಸ್ಕಾರವನ್ನು ಮಂಗಳವಾರ (ಜ 19) ನಡೆಸಿದೆ ಎನ್ನುತ್ತದೆ ಸಾಮಾಜಿಕ ತಾಣದ ಕೆಲವೊಂದು ಪೋಸ್ಟುಗಳು.
ವಿದ್ಯಾರ್ಥಿಗಳ ಪ್ರತಿಭಟನೆಗೆ ಸಾಥ್ ನೀಡಿ, ರಾಹುಲ್ ಗಾಂಧಿ ಭಾಷಣ ಮಾಡುತ್ತಿರುವಾಗ ನಿಮ್ಮ ರಾಜಕೀಯ ಬೇಳೆಯನ್ನು ಈ ವಿಚಾರದಲ್ಲಿ ಬೇಯಿಸಬೇಡಿ ಎನ್ನುವ ಫಲಕವನ್ನು ವಿದ್ಯಾರ್ಥಿಗಳು ರಾಹುಲ್ ಗಾಂಧಿಗೆ ತೋರಿಸಿದ್ದು ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೊಂದು ಪ್ರಬಲ ಸಂದೇಶ.
ಯಾಕೆಂದರೆ ದಾದ್ರಿ ಘಟನೆಯ ವೇಳೆ ಘಟನಾ ಸ್ಥಳಕ್ಕೆ ಹೋಗಿದ್ದ ಕಾಂಗ್ರೆಸ್ ಉಪಾಧ್ಯಕ್ಷರು ನಂತರ ಬಂದಿದ್ದು ಹೈದರಾಬಾದ್ ದಲಿತ ವಿದ್ಯಾರ್ಥಿಯ ಸಾವಿನ ಮನೆಗೆ. ಮಾಲ್ಡಾ ಅಥವಾ ಪಠಾಣ್ ಕೋಟ್ ದಾಳಿಯಲ್ಲಿ ಮೃತ ಕುಟುಂಬಗಳಿಗೆ ಸಾಂತ್ವನ ಹೇಳಲು ರಾಹುಲ್ ಗಾಂಧಿ ಹೋಗದೇ ಇದ್ದುದ್ದರಿಂದ ಇವರ ರಾಜಕೀಯ ನಿಲುವೇನು ಎನ್ನುವುದರ ಬಗ್ಗೆ ಗೊಂದಲ ಮೂಡುವುದು ಸಹಜ.
ಘಟನೆಯ ಸುತ್ತಮುತ್ತ ಕೆಲವೊಂದು ಸತ್ಯಾಸತ್ಯತೆಗಳು (ಜಾತ್ಯಾತೀತವಾಗಿ), ಮುಂದೆ ಓದಿ..
ಹೈದರಾಬಾದ್ ವಿವಿಯ ಉಪಕುಲಪತಿ
ಹೈದರಾಬಾದ್ ವಿವಿಯ ಉಪಕುಲಪತಿ ಅಪ್ಪಾರಾವ್ ಪೊಡಿಲೆ, ದೀರ್ಘಾವಧಿಯಲ್ಲಿ ಈ ವಿಶ್ವವಿದ್ಯಾಲಯದ ವಿವಿಧ ಹುದ್ದೆಯಲ್ಲಿದ್ದವರು. ಬುದ್ದಿವಂತ ಮತ್ತು ಉತ್ತಮ ಆಡಳಿತಗಾರರಾಗಿದ್ದರೂ ಇವರ ಕೆಲವೊಂದು ನಿರ್ಣಯಗಳು ವಿವಿಯನ್ನು ಸಂಕಷ್ಟಕ್ಕೆ ದೂಡಿದ್ದವು. 2002ರಲ್ಲಿ ಹತ್ತು ದಲಿತ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಸುದ್ದಿಯಾಗಿದ್ದರು, ಮತ್ತು ಬಹಿರಂಗವಾಗಿಯೇ ಬಿಜೆಪಿ ಸಿದ್ದಾಂತವನ್ನು ಬೆಂಬಲಿಸುವವರು ಎನ್ನುವ ಆರೋಪವೂ ಇವರ ಮೇಲಿದೆ. ಎಂಎಸ್ಸಿಯಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿರುವ ಅಪ್ಪುರಾವ್, ಬಿಜೆಪಿ ಶಾಸಕ ರಾಮಚಂದ್ರ ರಾವ್ ಅವರ ನಿಕಟವರ್ತಿ.
ರಾಜಕೀಯ ಬಣ್ಣ ಪಡೆದುಕೊಂಡ ವಿದ್ಯಾರ್ಥಿಯ ಸಾವು
ಹೈದರಾಬಾದ್ ಕೇಂದ್ರೀಯ ವಿವಿಯ ದಲಿತ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣ ಸಂಪೂರ್ಣ ರಾಜಕೀಯ ಬಣ್ಣ ಪಡೆದುಕೊಂಡಿರುವುದರಿಂದ, ಪ್ರತಿಭಟನೆಯ ಕಾವು ಸಹಜವಾಗಿ ಹೆಚ್ಚಾಗಿದೆ. ಘಟನೆ ಸಂಬಂಧ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ವಿರುದ್ಧ FIR ದಾಖಲಾಗಿರುವುದರಿಂದ, ಅವರು ರಾಜೀನಾಮೆ ನೀಡಬೇಕೆಂದು ವಿದ್ಯಾರ್ಥಿಗಳ ಧರಣಿ ಮುಂದುವರಿದಿದೆ. ರಾಹುಲ್ ಗಾಂಧಿ ಕೂಡಾ ಇದಕ್ಕೆ ಸಾಥ್ ನೀಡಿದ್ದಾರೆ. ಈ ಪ್ರತಿಭಟನೆಯ ವೇಳೆ 'ವಿದ್ಯಾರ್ಥಿಯ ಸಾವಿನ ವಿಚಾರದಲ್ಲಿ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬೇಡಿ'ಎನ್ನುವ ಇಂಗ್ಲಿಷ್ ಫಲಕವನ್ನು ಕೆಲವು ವಿದ್ಯಾರ್ಥಿಗಳು ಹಿಡಿದಿದ್ದರು.
ದಲಿತ ವಿದ್ಯಾರ್ಥಿ ಸಾವಿನ ಘಟನೆ ಹಿಂದೆಯೂ ನಡೆದಿತ್ತು
ಹೈದ್ರಾಬಾದ್ ವಿವಿ ಕ್ಯಾಂಪಸ್ ನಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಶರಣಾದ ಮೊದಲ ವಿದ್ಯಾರ್ಥಿಯೇನೂ ಅಲ್ಲ. ಕಳೆದ ಹತ್ತು ವರ್ಷಗಳಲ್ಲಿ ಎಂಟು ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಹಿತ್ ಸೇರಿದರೆ ಇದು ಒಂಭತ್ತನೆಯದ್ದು.
ಏನಿರಬಹುದು ಸಮಸ್ಯೆ?
ಇಷ್ಟು ದಲಿತ ವಿದ್ಯಾರ್ಥಿಗಳು ಯಾಕೆ ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಯಾಕೆ ಈ ವಿದ್ಯಾರ್ಥಿಗಳ ಸಮಸ್ಯೆಗಳನ್ನು ವಿವಿ ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವುದು ಒಂದು ಪ್ರಶ್ನೆಯಾದರೆ, ಹಿಂದೆ ವಿದ್ಯಾರ್ಥಿಗಳು ಸಾವನ್ನಪ್ಪಿದ (ರಾಜಕೀಯವಾಗಿ ಹೇಳುವುದಾದರೆ ಯುಪಿಎ ಸರಕಾರದ ಅವಧಿಯಲ್ಲಿ) ವೇಳೆ ಈಗಿನ ರೀತಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಕೆ ಆಗಿಲ್ಲ, ದಲಿತ ವಿದ್ಯಾರ್ಥಿಯ ಸಾವಿನಲ್ಲೂ ರಾಜಕೀಯವಾಡುವಷ್ಟು ಕೆಳಮಟ್ಟಕ್ಕಿಳಿಯಿತೇ ನಮ್ಮ ವ್ಯವಸ್ಥೆ? ಈ ಹಿಂದೆ ಪ್ರಶಸ್ತಿ ಹಿಂದಿರುಗಿಸದವರು ಈಗ್ಯಾಕೆ ಪ್ರಶಸ್ತಿ ವಾಪಸ್ ಮಾಡುತ್ತಿದ್ದಾರೆ, ಪ್ರಗತಿಪರರಿಗೆ ಈಗ ಜ್ಞಾನೋದಯವಾಗಲು ಕಾರಣವೇನು?
ಬಿಜೆಪಿ ಹೇಳೋದೇನು?
ಸಾವಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಕೋರ್ಟ್ ಆದೇಶದ ಪ್ರಕಾರ ರೋಹಿತ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಆದರೂ ಹಾಸ್ಟೆಲ್ ಪ್ರವೇಶಕ್ಕೆ ಮಾತ್ರ ನಿರಾಕರಿಸಲಾಗಿತ್ತು. ರೋಹಿತ್ ಉಗ್ರರಿಗೆ ಬೆಂಬಲ ನೀಡುವ ನಿಲುವಿನಿಂದಾಗಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿತ್ತು ಎನ್ನುವುದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಹೇಳಿಕೆ.
HRD ಸಚಿವಾಲಯದಿಂದ ಒತ್ತಡವಿತ್ತೇ?
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಸಂಘದವರು ಎಬಿವಿಪಿ ಹೈದರಾಬಾದ್ ಘಟಕದ ಅಧ್ಯಕ್ಷರ ಮೇಲೆ ಹಲ್ಲೆ ಮಾಡಿದ್ದರು ಎನ್ನುವ ವರದಿಯಿದೆ. ಈ ಸಂಬಂಧ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ, ಮಾನವ ಸಂಪನ್ಮೂಲ ಖಾತೆಗೆ ಪತ್ರ ಬರೆದು ಘಟನೆಯ ಬಗ್ಗೆ ವಿವರಿಸಿದ್ದರು. ಸಚಿವರ ಪತ್ರವನ್ನು ಉಲ್ಲೇಖಿಸಿ ಎಚ್ಆರ್ಡಿ ಸಚಿವಾಲಯ ವಿವಿ ಉಪಕುಲಪತಿಗಳಿಗೆ ಪತ್ರ ಬರೆದಿದ್ದರು. ಆದರೆ ವಿವಿಯಿಂದ ಯಾವುದೇ ಉತ್ತರ ಬರದ ಹಿನ್ನಲೆಯಲ್ಲಿ ಮತ್ತೆ ನಾಲ್ಕು ಬಾರಿ ವಿವಿಗೆ ಸಚಿವಾಲಯದಿಂದ ಪತ್ರ ಹೋಗಿತ್ತು. ಇದಾದ ನಂತರ ವಿವಿಯ ಮಂಡಳಿ ಪ್ರಕರಣದ ವಿಚಾರಣೆ ನಡೆಸಿ ವೇಮುಲ ರೋಹಿತ್ ಸೇರಿದಂತೆ ಐವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿತ್ತು.