ಅದ್ಧೂರಿ ಆರತಕ್ಷತೆ, ಕೇರಳ ವ್ಯಾಪಾರಿ ಕಚೇರಿ ಮೇಲೆ ಐಟಿ ದಾಳಿ
ತಿರುವನಂತಪುರಂ, ಡಿಸೆಂಬರ್ 6: ವೆಂಪಲವಟ್ಟಂನಲ್ಲಿ ಭಾನುವಾರ ಮಗಳು ಮೇಘಾ ಅದ್ಧೂರಿ ಆರತಕ್ಷತೆ ಮಾಡಿದ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮದ್ಯ ವ್ಯಾಪಾರಿ ಡಾ.ಬಿಜು ರಮೇಶ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಸೋಮವಾರ ಮಧ್ಯಾಹ್ನ ಮೂವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮದುವೆ ಖರ್ಚು-ವೆಚ್ಚದ ಮಾಹಿತಿ ಪರಿಶೀಲಿಸಿದರು.
ಮಾಧ್ಯಮಗಳ ಮಾಹಿತಿ ಪ್ರಕಾರ ಬಿಜು ರಮೇಶ್ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಳು ಗಂಟೆಗಳ ಕಾಲ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು. ಒಂದು ವಾರದೊಳಗೆ ಮದುವೆ ಖರ್ಚಿನ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಇಲಾಖೆಯು ಸಮಯ ನೀಡಿದೆ.[ನೂರು ಬಗೆ ಖಾದ್ಯ, 20 ಸಾವಿರ ಅತಿಥಿಗಳು: ಕೇರಳದಲ್ಲಿ ಮದುವೆ ವೈಭೋಗ]

ವಿವಾದಾತ್ಮಕ ವ್ಯಾಪಾರಸ್ಥ ಬಿಜು ರಮೇಶ್ ಮುಖ್ಯ ಕಚೇರಿ ಕೇರಳದಲ್ಲಿದೆ. ಈ ಹಿಂದೆ ಯುಡಿಎಫ್ ಅಧಿಕಾರದಲ್ಲಿದ್ದಾಗ ಸರಕಾರದ ಭ್ರಷ್ಟಾಚಾರವನ್ನು ರಮೇಶ್ ಬಯಲಿಗೆ ಎಳೆದಿದ್ದರು. ಆ ನಂತರ ನಡೆದ ಚುನಾವಣೆಯಲ್ಲಿ ಯುಡಿಎಫ್ ಅಧಿಕಾರ ಕಳೆದುಕೊಳ್ಳಬೇಕಾಯಿತು. ರಮೇಶ್ ಮಗಳು ಮೇಘಾ ಹಾಗೂ ಮಾಜಿ ಕಂದಾಯ ಸಚಿವ ಅಡೂರ್ ಪ್ರಕಾಶ್ ಮಗ ಅಜಯ್ ಕೃಷ್ಣ ಮದುವೆ ಈಚೆಗೆ ಅದ್ಧೂರಿಯಾಗಿ ಆಗಿತ್ತು.
ವೈಭವೋಪೇತವಾಗಿ ನಡೆದ ಆರತಕ್ಷತೆಯಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಇಡೀ ದೇಶದಲ್ಲಿ ನೋಟಿನ ಸಮಸ್ಯೆ ಇರುವಾಗ ಮಾಡಿದ ಈ ಆರತಕ್ಷತೆ ಭಾರೀ ಚರ್ಚೆಗೆ ಕಾರಣವಾಗಿತ್ತು.












Click it and Unblock the Notifications