ಸಿವೋಟರ್ ಸಮೀಕ್ಷೆ : ಜೆಡಿಯು-ಬಿಜೆಪಿಗೆ ಥಂಬ್ಸ್ ಅಪ್!
ಬೆಂಗಳೂರು, ಜುಲೈ 29 : ಇಲ್ಲಿ ಯಾರೂ ಮಿತ್ರರಲ್ಲಿ, ಯಾರೂ ಶಾಶ್ವತ ಶತ್ರುಗಳಲ್ಲ. ಇಲ್ಲಿ ಯಾರೂ ಸಾಚಾಗಳಲ್ಲಿ, ಯಾರೂ ಪ್ರಬುದ್ಧ ಬುದ್ಧರೂ ಅಲ್ಲ. ಇಲ್ಲಿ ನಡೆಯುವ ಚದುರಂಗದಾಟದಲ್ಲಿ ಒಪ್ಪಂದಗಳು, ಒಳಒಪ್ಪಂದಗಳದ್ದೇ ರಾಜ್ಯಭಾರ. ಇದು ರಾಜಕೀಯ!
ಬಿಹಾರದಲ್ಲಿ ಈಗ ನಡೆದಿರುವುದು ಕೂಡ ಇದಕ್ಕೆ ಹೊರತಲ್ಲ. ಒಬ್ಬರಿಗೆ ಸರಿಯಾಗಿ ಕಾಣಬಹುದು, ಮತ್ತೊಬ್ಬರಿಗೆ ರಾಜಕೀಯ ಪಿತೂರಿ, ಮೋಸ, ಬೆನ್ನಿಗಿರಿದ ಚೂರಿಯಂತೆ ಕಾಣಬಹುದು. ರಾಜಕೀಯದಲ್ಲಿರುವವರು ತಮ್ಮ ಅನುಕೂಲಕ್ಕೆ ತಕ್ಕಂತೆ ಏನೇನೋ ಮಾಡಬಹುದು, ಆದರೆ, ಇದಕ್ಕೆ ಮತ ಹಾಕಿದ ಜನರೇನ್ನುತ್ತಾರೆ ಎನ್ನುವುದು ಕೂಡ ಮುಖ್ಯವಾಗುತ್ತದೆ.
ಒಂದಾನೊಂದು ಕಾಲದಲ್ಲಿ ಕಟ್ಟಾ ವಿರೋಧಿಗಳಾಗಿದ್ದ ಭಾರತೀಯ ಜನತಾ ಪಕ್ಷದ ಜೊತೆ ಕೈಜೋಡಿಸಿರುವ ಜೆಡಿಯು ಪಕ್ಷ, ಕಳಂಕಿತ ಆರ್ಜೆಡಿಯನ್ನು ಹೊರದಬ್ಬಿ, ಬಿಹಾರದಲ್ಲಿ ಹೊಸ ಶಕೆಯನ್ನು ಆರಂಭಿಸಿದೆ. ನಿತೀಶ್ ಕುಮಾರ್ ಅವರು ಮತ್ತೆ ಮುಖ್ಯಮಂತ್ರಿಯಾಗಿದ್ದರೆ, ಬಿಜೆಪಿಯ ಸುಶೀಲ್ ಮೋದಿಯವರು ಉಪಮುಖ್ಯಮಂತ್ರಿಯಾಗಿದ್ದಾರೆ.
ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯಾವುದೇ ರಾಜಕೀಯ ಪಕ್ಷಗಳು ಮತ ಹಾಕಿದ ಜನರ ಅಭಿಪ್ರಾಯವನ್ನು ಪಡೆದುಕೊಳ್ಳುತ್ತವಾ? ಹಾಗೇನಾದರೂ ಆದರೆ, ಸೂರ್ಯ ಪೂರ್ವದಲ್ಲಿ ಹುಟ್ಟುವುದನ್ನೇ ಬಿಟ್ಟುಬಿಡುತ್ತಾನೆ. ಆದರೆ, ಚುನಾವಣೆ ಸಮೀಕ್ಷಾ ಸಂಸ್ಥೆ ಬಿಹಾರದಲ್ಲಿ ನಡೆದಿರುವ ಬೆಳವಣಿಗೆಯ ಬಗ್ಗೆ ಜನರ ಅಭಿಮತವೇನು ಎಂಬುದನ್ನು ಕಲೆ ಹಾಕಿದ್ದಾರೆ.

ಕಾಂಗ್ರೆಸ್, ಆರ್ಜೆಡಿ ಮತದಾರರೂ ನಿತೀಶ್ಗೆ ಜೈ
228 ಕ್ಷೇತ್ರಗಳಿಂದ ಸಾವಿರಕ್ಕೂ ಹೆಚ್ಚು ಮತದಾರರನ್ನು ಭೇಟಿ ಮಾಡಿದಾಗ ತಿಳಿದುಬಂದಿದ್ದೇನೆಂದರೆ, ಜೆಡಿಯು ಜೊತೆ ಬಿಜೆಪಿ ಕೈಜೋಡಿಸಿ ಹೊಸ ಸರಕಾರ ರಚನೆಯಾಗಿದ್ದೇ ಸರಿ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಶೇ.40ರಷ್ಟು ಕಾಂಗ್ರೆಸ್ ಮತ್ತು ಶೇ.30ರಷ್ಟು ಆರ್ಜೆಡಿ ಮತದಾರರೂ ಕೂಡ ನಿತೀಶ್ ಹೀಗೆ ಮಾಡಿದ್ದು ಸರಿ ಎಂದಿದ್ದಾರೆ.

ತೇಜಸ್ವಿ ಯಾದವ್ ರಾಜೀನಾಮೆ ನೀಡಿದ್ದರೆ...
ಹೋಟೆಲ್ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ತೇಜಸ್ವಿ ಯಾದವ್ ಆರೋಪ ಬಂದ ತಕ್ಷಣ ರಾಜೀನಾಮೆ ನೀಡಬೇಕಿತ್ತು ಎಂದು ಹೇಳಿದ್ದಾರೆ. ಬಹುಶಃ ತೇಜಸ್ವಿ ಯಾದವ್ ಅವರು ಸಿಬಿಐ ತನಿಖೆ ಮುಗಿಸುವವರೆಗೆ ರಾಜೀನಾಮೆ ನೀಡಿದ್ದರೆ ಹಿಂದಿನ ಸರಕಾರ ಉಳಿಯುತ್ತಿತ್ತೇನೋ. ಆದರೆ, ಲಾಲೂ ಪ್ರಸಾದ್ ಯಾದವ್ ಅವರ ಅಧಿಕಾರದ ಲಾಲಸೆಯಿಂದ ಇರುವ ಅಧಿಕಾರವನ್ನೂ ಕಳೆದುಕೊಳ್ಳಬೇಕಾಯಿತು.

ಲಾಲೂ, ರಾಹುಲ್ ಗೆ ಭಾರೀ ಹೊಡೆತ
ಶೇ.92ರಷ್ಟು ಬಿಜೆಪಿ ಬೆಂಬಲಿಗರು ನಿತೀಶ್ ಕುಮಾರ್ ಪರವಾಗಿ ನಿಂತಿದ್ದರೆ, ಶೇ.73ರಷ್ಟು ಜೆಡಿಯು ಬೆಂಬಲಿಗರು ಹೊಸ ಮೈತ್ರಿಕೂಟಕ್ಕೆ ಜೈ ಎಂದಿದ್ದಾರೆ. ಶೇ.70ರಷ್ಟು ಇತರ ಮತದಾರರು ಕೂಡ ಲಾಲೂ ಪ್ರಸಾದ್ ಯಾದವ್ ಅವರನ್ನು ಬದಿಗೆ ಸರಿಸಿ ನಿತೀಶ್ ಸರಿಯಾದ ಕೆಲಸ ಮಾಡಿದ್ದಾರೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಇದು ಲಾಲೂಗೆ ಮಾತ್ರವಲ್ಲ, ರಾಹುಲ್ ಗಾಂಧಿಯವರಿಗೂ ಭಾರೀ ದೊಡ್ಡ ಹೊಡೆತ.

2019ರ ಚುನಾವಣೆಯಲ್ಲೂ ಬಿಜೆಪಿ-ಜೆಡಿಯುಗೆ ಮತ
2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕೂಡ ತಾವು ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ಮತ ಹಾಕುವುದಾಗಿ ಶೇ.55ರಷ್ಟು ಮತದಾರರು ಸ್ಪಷ್ಟಪಡಿಸಿದ್ದಾರೆ. ಇವರಲ್ಲಿ ಶೇ.30ರಷ್ಟು ಮತದಾರರು ಮಾತ್ರ ಕಾಂಗ್ರೆಸ್-ಆರ್ಜೆಡಿ ಮೈತ್ರಿಕೂಟಕ್ಕೆ ಮತಹಾಕುವುದಾಗಿ ತಿಳಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಜೆಡಿಯು ಬೆಂಬಲಿಸುವ ಶೇ.25ರಷ್ಟು ಜನರು ತಾವು ನಿತೀಶ್ ವಿರುದ್ಧ ಮತಹಾಕುವುದಾಗಿ ಹೇಳಿದ್ದಾರೆ.

ಬಿಜೆಪಿಗೆ ಭಾರೀ ಶಾಕ್
ಒಂದು ವೇಳೆ ಭ್ರಷ್ಟಾಚಾರದ ಹಗರಣವೆಲ್ಲ ಹೊರಬಂದು ರಾಡಿ ಎಬ್ಬಿಸದಿದ್ದರೆ, ಮಹಾಘಟಬಂಧನ ಹೋಳಾಗದಿದ್ದರೆ ತಾವು ಮಹಾಘಟಬಂಧನಕ್ಕೇ ಮತ ಹಾಕುತ್ತಿದ್ದುಗಾಗಿ ಬಹುತೇಕ ಮತದಾರರು ಹೇಳಿ ಭಾರತೀಯ ಜನತಾ ಪಕ್ಷಕ್ಕೆ ಭಾರೀ ಶಾಕ್ ನೀಡಿದ್ದಾರೆ. ಬಿಹಾರದಲ್ಲಿ ಬಿಜೆಪಿಯ ಆಟ ಅಷ್ಟು ನಡೆಯುವುದಿಲ್ಲ ಎಂಬುದನ್ನು ಮತದಾರರೇ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications