ಅಪ್ಪ-ಅಕ್ಕ ಕಾಂಗ್ರೆಸ್ಗೆ, ಆದರೆ ಬಿಜೆಪಿಗೆ ನನ್ನ ಬೆಂಬಲ ಎಂದ ಕ್ರಿಕೆಟಿಗ ರವೀಂದ್ರ ಜಡೇಜಾ
ನವದೆಹಲಿ, ಏಪ್ರಿಲ್ 16: ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ತಂದೆ ಮತ್ತು ಅಕ್ಕ ಇಬ್ಬರೂ ಇತ್ತೀಚೆಗೆ ಗುಜರಾತ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಆದರೆ, ತಾವು ಬಿಜೆಪಿಯನ್ನು ಬೆಂಬಲಿಸುತ್ತಿರುವುದಾಗಿ ಜಡೇಜಾ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಜಡೇಜಾರ ಅಪ್ಪ ಅನಿರುದ್ಧ್ ಸಿನ್ಹ್ ಮತ್ತು ಅಕ್ಕ ನಾಯ್ನಬಾ ಜಡೇಜಾ ಭಾನುವಾರ ಜಾಮ್ನಗರ್ ಜಿಲ್ಲೆಯ ಕಲಾವಾದ್ ಪಟ್ಟಣದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.

ಆದರೆ, ಮಾರ್ಚ್ 3ರಂದೇ ಜಡೇಜಾ ಪತ್ನಿ ರಿವಾಬಾ ಜಡೇಜಾ ಬಿಜೆಪಿ ಸೇರ್ಪಡೆಯಾಗಿದ್ದರು. ಈಗ ಕುಟುಂಬದಲ್ಲಿ ಇಬ್ಬರು ಕಾಂಗ್ರೆಸ್ ಸೇರಿಕೊಂಡಿದ್ದರೆ, ಇತ್ತ ಜಡೇಜಾ ಪತ್ನಿಯ ಕಡೆ ವಾಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 3ರಂದು ಜಾಮ್ನನಗರ್ಗೆ ಬಂದಿದ್ದ ಸಂದರ್ಭದಲ್ಲಿ ಜಡೇಜಾ ಅವರ ಪತ್ನಿ ರಿವಾಬಾ ಬಿಜೆಪಿ ಸೇರ್ಪಡೆಯಾಗಿದ್ದರು. ಇದಕ್ಕೂ ಮೊದಲು ನವೆಂಬರ್ನಲ್ಲಿ ಜಡೇಜಾ ದಂಪತಿ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು.
ಕಳೆದ ವರ್ಷ ಪತಿ ರವೀಂದ್ರ ಜಡೇಜಾ ಅವರೊಂದಿಗೆ ಪ್ರಧಾನಿ ಮೋದಿ ಅವರನ್ನು ಅನೌಪಚಾರಿಕವಾಗಿ ಭೇಟಿಯಾಗಿದ್ದೆ. ಆಗಿನಿಂದ ಅವರ ಪ್ರಭಾವಕ್ಕೆ ಒಳಗಾಗಿದ್ದೆ ಎಂದು ರಿವಾಬಾ ಹೇಳಿದ್ದರು.
|
ಬಿಜೆಪಿಗೆ ಬೆಂಬಲ
'ನಾನು ಬಿಜೆಪಿಯನ್ನು ಬೆಂಬಲಿಸುತ್ತೇನೆ. @ನರೇಂದ್ರ ಮೋದಿ #ರಿವಾಬಾ ಜಡೇಜಾ ಜೈ ಹಿಂದ್' ಎಂದು ಕ್ರಿಕೆಟಿಗ ರವೀಂದ್ರ ಜಡೇಜಾ ಸೋಮವಾರ ಟ್ವೀಟ್ ಮಾಡಿದ್ದಾರೆ. ಅಪ್ಪ ಮತ್ತು ಅಕ್ಕ ಕಾಂಗ್ರೆಸ್ ಸೇರ್ಪಡೆಯಾದ ಮರುದಿನವೇ ಅವರು ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
|
ಮೋದಿ ಅಭಿನಂದನೆ
ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಜಡೇಜಾಗೆ ಧನ್ಯವಾದ ಸಲ್ಲಿಸಿದ್ದಾರೆ. ಜತೆಗೆ 2019ರ ವಿಶ್ವಕಪ್ ಟೂರ್ನಿಯ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸ್ಟಾಫ್ ನರ್ಸ್ ಆಗಿದ್ದ ನಾಯ್ನಬಾ
ಜಡೇಜಾ ಅವರ ಅಕ್ಕ ನಾಯ್ನಬಾ ಜಡೇಜಾ ರಾಜ್ಯ ಸರ್ಕಾರದ ಆಸ್ಪತ್ರೆಯೊಂದರಲ್ಲಿ ಸ್ಟಾಫ್ ನರ್ಸ್ ಆಗಿದ್ದರು. ಮಹಿಳೆಯರ ಸಬಲೀಕರಣಕ್ಕಾಗಿ ಕೆಲಸ ಮಾಡಲು ಬಯಸಿರುವುದಾಗಿ ಹೇಳಿರುವ ಅವರು, ಮಹಿಳೆಯರು, ರೈತರು ಮತ್ತು ಯುವಜನರ ಹಕ್ಕುಗಳಿಗೆ ಕಾಂಗ್ರೆಸ್ ಹೋರಾಡುತ್ತಿರುವುದರಿಂದ ಅದನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ.
ರವೀಂದ್ರ ಜಡೇಜಾ ಅವರ ತಾಯಿ 15 ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ಮನೆಗೆ ಹಿರಿಯ ಮಗಳಾದ ನಾಯ್ನಬಾ ಕುಟುಂಬ ನಿರ್ವಹಣೆಯ ಜತೆಗೆ, ಕ್ರಿಕೆಟಿಗನಾಗುವ ತಮ್ಮನ ಬಯಕೆಗೆ ಬೆಂಬಲವಾಗಿ ನಿಂತಿದ್ದರು. ಪ್ರಸ್ತುತ ಅವರು ರಾಜಕೋಟ್ ನಗರದಲ್ಲಿ ಅವರ ಕುಟುಂಬ ನಡೆಸುತ್ತಿರುವ ರೆಸ್ಟೋರೆಂಟ್ ಒಂದನ್ನು ನೋಡಿಕೊಳ್ಳುತ್ತಿದ್ದಾರೆ.
|
ಕಾರ್ಣಿ ಸೇನೆಯಿಂದ ರಾಜಕೀಯಕ್ಕೆ
ರಿವಾಬಾ ಜಡೇಜಾ ಅವರು ಕಳೆದ ವರ್ಷ ಅಕ್ಟೋಬರ್ ನಲ್ಲಿ ರಜಪೂತರ ಸಂಘಟನೆ 'ಕಾರ್ಣಿ ಸೇನೆ' ಸೇರಿಕೊಂಡಿದ್ದರು. ಬಹುಬೇಗ ಗುಜರಾತ್ ಘಟಕದ ಸೇನಾ ಮಹಿಳಾ ಮಹಿಳಾ ಶಾಖೆಯ ಮುಖ್ಯಸ್ಥೆ ಮಾಡಲಾಯಿತು. ಅಕ್ಟೋಬರ್ ತಿಂಗಳಿನಲ್ಲಿ ನಡೆದ ಕಾರ್ಣಿ ಸೇನೆ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದರು. ದೀಪಿಕಾ ಪಡುಕೋಣೆ ನಟನೆಯ, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತ್' ಚಿತ್ರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ದರು.












Click it and Unblock the Notifications