ಕೋವಿಶೀಲ್ಡ್ ಕೊರತೆ: ದೆಹಲಿ, ಮಹಾರಾಷ್ಟ್ರ, ಒಡಿಶಾದಲ್ಲಿ ಲಸಿಕೆ ಅಭಿಯಾನಕ್ಕೆ ಕುತ್ತು
ನವದೆಹಲಿ, ಜು.13: ದೇಶದಲ್ಲಿ ಕೋವಿಡ್ ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಾಗುತ್ತಿದ್ದಂತೆ, ದೆಹಲಿ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕೋವಿಶೀಲ್ಡ್ ಲಸಿಕೆಗಳ ಕೊರತೆ ಕಾಣಿಸಿಕೊಂಡಿದೆ.
ಕೋವಿಡ್ ಲಸಿಕೆ ಕೊರತೆಯ ಬಗ್ಗೆ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ''ದೆಹಲಿಯಲ್ಲಿ ಮತ್ತೆ ಲಸಿಕೆ ಮುಗಿದಿದೆ,'' ಎಂದು ಹೇಳಿದ್ದಾರೆ.
''ಕೇಂದ್ರ ಸರ್ಕಾರ ಒಂದು ಅಥವಾ ಎರಡು ದಿನ ಲಸಿಕೆ ನೀಡುತ್ತದೆ, ನಂತರ ನಾವು ಲಸಿಕೆ ಕೇಂದ್ರಗಳನ್ನು ಹಲವಾರು ದಿನಗಳವರೆಗೆ ಮುಚ್ಚಬೇಕಾಗುತ್ತದೆ. ಅಷ್ಟಕ್ಕೂ ಕೇಂದ್ರ ಸರ್ಕಾರಕ್ಕೆ ಏನು ತೊಂದರೆ? ಇಷ್ಟು ದಿನಗಳ ನಂತರವೂ ನಮ್ಮ ದೇಶದ ಲಸಿಕೆ ಕಾರ್ಯಕ್ರಮ ಏಕೆ ಕುಸಿಯುತ್ತಿದೆ?,'' ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ದೆಹಲಿಯಷ್ಟೇ ಅಲ್ಲ, ಹಲವಾರು ರಾಜ್ಯಗಳು ಕಳೆದ ಹಲವು ದಿನಗಳಿಂದ ಕೋವಿಡ್ -19 ಲಸಿಕೆ ಪೂರೈಕೆಯಲ್ಲಿ ತೀವ್ರ ಕೊರತೆಯ ಬಗ್ಗೆ ತಿಳಿಸಿದೆ. ಲಸಿಕೆ ಅಭಿಯಾನ ಮತ್ತೆ ದುರ್ಬಲವಾಗಿದೆ ಎಂದು ಹೇಳಿಕೊಂಡಿದೆ.
ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ, ''ಈ ಹಿಂದೆ ರಾಜ್ಯಕ್ಕೆ 1.5 ಮಿಲಿಯನ್ ಜನರಿಗೆ ಲಸಿಕೆ ನೀಡುವ ಸಾಮರ್ಥ್ಯವಿತ್ತು. ಆದರೆ ಈಗ ಸ್ಟಾಕ್ ಕೊರತೆಯಿಂದಾಗಿ ಕೇವಲ 2,00,000 ರಿಂದ 3,00,000 ಜನರಿಗೆ ಲಸಿಕೆ ನೀಡಲಾಗುತ್ತಿದೆ,'' ಎಂದಿದ್ದಾರೆ.
ಇನ್ನು ಒಡಿಶಾದಲ್ಲಿ, 30 ಜಿಲ್ಲೆಗಳ ಪೈಕಿ 24 ರಲ್ಲಿ ಲಸಿಕೆ ಕಾರ್ಯಕ್ರಮವು ಸ್ಥಿಗಿತಗೊಂಡಿದೆ. ರಾಜ್ಯ ಆರೋಗ್ಯ ಕಾರ್ಯದರ್ಶಿ ಪಿ ಕೆ ಮೊಹಾಪಾತ್ರಾ, ''ಕೋವಿಶೀಲ್ಡ್ ಲಸಿಕೆಯ ಮುಂದಿನ ಸ್ಟಾಕ್ ಜುಲೈ 15 ರಂದು ಬರುವ ನಿರೀಕ್ಷೆಯಿದೆ,'' ಎಂದು ತಿಳಿಸಿದ್ದಾರೆ.
ಈ ನಡುವೆ ಕೇಂದ್ರ ಸರ್ಕಾರವು ಕೋವಿಡ್ -19 ಲಸಿಕೆ ಕೊರತೆ ಆರೋಪವನ್ನು ನಿರಾಕರಿಸಿದೆ. ಜುಲೈ ತಿಂಗಳಿಗೆ ಎಷ್ಟು ಲಸಿಕೆಗಳನ್ನು ಕಳುಹಿಸಲಾಗುವುದು ಬಗ್ಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೊದಲೇ ತಿಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಕಳೆದ ವಾರ ಅಧಿಕೃತ ಹೇಳಿಕೆಯಲ್ಲಿ, ಆರೋಗ್ಯ ಸಚಿವಾಲಯವು, ''ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಸೇರಿದಂತೆ 2021 ರ ಜುಲೈ ತಿಂಗಳಲ್ಲಿ ಲಭ್ಯವಿರುವ ಪ್ರಮಾಣಗಳ ಬಗ್ಗೆ ಎಲ್ಲಾ ರಾಜ್ಯಗಳು ಅಥವಾ ಯುಟಿಗಳಿಗೆ ಮುಂಚಿತವಾಗಿ ತಿಳಿಸಲಾಗುತ್ತಿದೆ. ಲಸಿಕೆಗಳ ಲಭ್ಯತೆಯ ಆಧಾರದ ಮೇಲೆ ತಮ್ಮ ಕೋವಿಡ್ -19 ಲಸಿಕೆ ಅವಧಿಗಳನ್ನು ಯೋಜಿಸಲು ರಾಜ್ಯಗಳು ಅಥವಾ ಯುಟಿಗಳಿಗೆ ಸೂಚಿಸಲಾಗಿದೆ,'' ಎಂದು ಹೇಳಿದೆ.
ಜೂನ್ ಕೊನೆಯ ವಾರದಲ್ಲಿ ಪ್ರತಿದಿನ ಸರಾಸರಿ 6.21 ಮಿಲಿಯನ್ ಡೋಸ್ ಕೋವಿಡ್ -19 ಲಸಿಕೆಗಳನ್ನು ನೀಡಲಾಗಿದೆ. ಜುಲೈ 5 ಮತ್ತು 11 ರ ನಡುವೆ, ದೈನಂದಿನ ಸರಾಸರಿ ಲಸಿಕೆ ಪ್ರಮಾಣವು ಮತ್ತಷ್ಟು 3.50 ಮಿಲಿಯನ್ ಪ್ರಮಾಣಗಳಿಗೆ ಇಳಿದಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications