ಮತ್ತೆ ವಕ್ಕರಿಸಿದ ಕೊರೊನಾ ಭೂತ: 5 ರಾಜ್ಯಗಳಿಗೆ ಹೈ ಅಲರ್ಟ್ ಸೂಚನೆ
ಕೊರೊನಾ ವೈರಸ್ ಪ್ರಭಾವ ದಿನದಿಂದ ದಿನಕ್ಕೆ ಕಮ್ಮಿಯಾಯಿತು ಎನ್ನುವಷ್ಟರಲ್ಲಿ ಮತ್ತೆ ಹೊಸ ಸೋಂಕಿತರ ಪ್ರಮಾಣ ಹೆಚ್ಚಾಗಲು ಆರಂಭಿಸಿದೆ. ಮಾಸ್ಕ್ ಹಾಕಿಕೊಳ್ಳಲೂ ಮರೆತಿದ್ದ ಜನರಿಗೆ ತನ್ನ ಉಪಸ್ಥಿತಿ ಇನ್ನೂ ಮುಗಿದಿಲ್ಲ ಎನ್ನುವಂತೆ ವೈರಸ್ ಹಲವು ರಾಜ್ಯಗಳಲ್ಲಿ ತೀವ್ರವಾಗಿ ಹರಡಲು ಆರಂಭಿಸಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ದೈನಂದಿನ ಪ್ರಕರಣ ಹೆಚ್ಚುತ್ತಿರುವುದರಿಂದ ಮಾಸ್ಕ್ ಧರಿಸುವುದನ್ನು ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಕಡ್ಡಾಯಗೊಳಿಸಿದೆ. ಸೋಂಕಿನ ಪ್ರಮಾಣ ಇದೇ ಗತಿಯಲ್ಲಿ ಏರಿಕೆಯಾಗುತ್ತಿದ್ದರೆ, ಟಫ್ ರೂಲ್ಸ್ ಜಾರಿಗೆ ಬರುವ ಸಾಧ್ಯತೆಯಿಲ್ಲದಿಲ್ಲ.
ದೇಶದ ಐದು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಅಲರ್ಟ್ ಆಗಿರುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಆಯಾಯ ರಾಜ್ಯದ ಆರೋಗ್ಯ ಸಚಿವರಿಗೆ ಸೂಚನೆಯನ್ನು ನೀಡಿದ್ದಾರೆ. ಕೊರೊನಾ ಏರಿಕೆಯ ನಡುವೆ ನಾಲ್ಕನೇ ಭೀತಿ ಕಾಡಲಾರಂಭಿಸಿದೆ, ಆದರೆ, ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.
ಮುಂದಿನ ಎರಡು ಮೂರು ವಾರಗಳು ಕೊರೊನಾ ಹರಡುವಿಕೆಯ ವಿಚಾರದಲ್ಲಿ ನಿರ್ಣಾಯಕವಾಗಲಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕೆಂದು ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆಯನ್ನು ನೀಡಿದೆ.

ಕಳೆದ ಒಂದು ವಾರದಲ್ಲಿ ಕೋವಿಡ್ ನಿಂದ ಮೃತ ಪಟ್ಟವರ ಸಂಖ್ಯೆ ಒಂದು
ರಾಜ್ಯದಲ್ಲಿ ಇನ್ನೂ 2,478 ಸಕ್ರಿಯ ಪ್ರಕರಣಗಳಿವೆ ಮತ್ತು ಮಂಗಳವಾರ (ಜೂನ್ 7) ಒಂದೇ ದಿನ 348 ಹೊಸ ಕೇಸುಗಳು ದಾಖಲಾಗಿವೆ. ರಾಜ್ಯ ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ ಪ್ರಕಾರ, 339 ಹೊಸ ಕೇಸುಗಳು ಬೆಂಗಳೂರು ನಗರದಿಂದ ವರದಿಯಾಗಿವೆ ಮತ್ತು ನಗರದಲ್ಲಿ 2,390 ಸಕ್ರಿಯ ಪ್ರಕರಣಗಳಿವೆ. ಜೂನ್ 1 ರಿಂದ ಜೂನ್ 7ರವರೆಗೆ 1,835 ಹೊಸ ಕೇಸುಗಳು ದಾಖಲಾಗಿದ್ದು, ಅದರಲ್ಲಿ ಶೇ. 90 ಕೇಸುಗಳು ಬೆಂಗಳೂರಿನಿಂದ ವರದಿಯಾಗಿರುವುದು ಎಚ್ಚರವಹಿಸಬೇಕಾದ ವಿಚಾರ. ಆದರೆ, ಕಳೆದ ಒಂದು ವಾರದಲ್ಲಿ ಕೋವಿಡ್ ನಿಂದ ಮೃತ ಪಟ್ಟವರ ಸಂಖ್ಯೆ ಒಂದು, ಹಾಗಾಗಿ, ಇದರ ತೀವ್ರತೆ ಹೆಚ್ಚಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಅಲರ್ಟ್ ಆಗಿ ಎಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಸೂಚನೆ
ಇನ್ನು, ದೇಶದ ಐದು ರಾಜ್ಯಗಳಲ್ಲಿ ಕೋವಿಡ್ ಏರಿಕೆಯಾಗುತ್ತಿರುವುದರಿಂದ ಈ ಬಗ್ಗೆ ಈಗಲೇ ಅಲರ್ಟ್ ಆಗಿ ಎಂದು ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚನೆಯನ್ನು ನೀಡಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್, ಕೇರಳ ಮತ್ತು ತೆಲಂಗಾಣ ರಾಜ್ಯದ ಆಗೋಗ್ಯ ಸಚಿವರಿಗೆ ಈ ಸಂಬಂಧ ಕಾರ್ಯದರ್ಶಿ ಪತ್ರವನ್ನು ಬರೆದಿದ್ದಾರೆ. ಐದು ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ ದೈನಂದಿನ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ದಿಢೀರ್ ಶೇ.80ರಷ್ಟು ಹೆಚ್ಚು
ಜೂನ್ 2ರಿಂದ ಜೂನ್ 5ರ ತನಕ ನಾಲ್ಕು ದಿನಗಳಲ್ಲಿ ದೇಶಾದ್ಯಂತ 15,597 ಹೊಸ ಕೇಸುಗಳು ವರದಿಯಾಗಿವೆ ಮತ್ತು 62 ಜನ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರವೊಂದರಲ್ಲೇ ಜೂನ್ ಏಳರಂದು 1,881 ಮತ್ತು ಒಟ್ಟಾರೆಯಾಗಿ ದೇಶದಲ್ಲಿ 5,233 ಕೇಸುಗಳು ದಾಖಲಾಗಿ ಏಳು ಸೋಂಕಿತರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ದಿಢೀರ್ ಶೇ.80ರಷ್ಟು ಹೆಚ್ಚಾಗಿರುವುದು ಕಳವಳ ಪಡುವಂತಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಇದುವರೆಗಿನ ಒಟ್ಟು ಸಾವುಗಳು 5,24,715
ದೇಶದಲ್ಲಿ ಒಟ್ಟಾರೆ ಪಾಸಿಟಿವಿಟಿ ರೇಟ್ ಶೇ.1.62ಕ್ಕೆ ಏರಿಕೆಯಾಗಿದ್ದು ಒಟ್ಟಾರೆಯಾಗಿ ದೇಶದಲ್ಲಿ ಸಕ್ರಿಯ ಪ್ರಕರಣಗಳು 28,857. ಕಳೆದ ಮಾರ್ಚ್ ತಿಂಗಳ ನಂತರ ಇದೇ ಮೊದಲ ಬಾರಿಗೆ ದೈನಂದಿನ ಹೊಸ ಸೋಂಕಿನ ಪ್ರಮಾಣ ಐದು ಸಾವಿರಕ್ಕೆ ಏರಿಕೆಯಾಗಿದೆ. ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಇದುವರೆಗಿನ ಒಟ್ಟು ಸಾವುಗಳು 5,24,715. ಕಳೆದ 24 ಗಂಟೆಗಳಲ್ಲಿ 3,300 ಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದು, ಚೇತರಿಕೆ ಪ್ರಮಾಣವು ಪ್ರಸ್ತುತ ಶೇ. 98.72 ರಷ್ಟಿದೆ.












Click it and Unblock the Notifications