ಕೊರೊನಾ ಮೂರನೇ ಅಲೆ ಭೀತಿ ನಡುವೆ ಹೆಚ್ಚು ಪ್ರಕರಣ ದಾಖಲಾಗುತ್ತಿರುವ ರಾಜ್ಯಗಳಿವು...
ನವದೆಹಲಿ, ಆಗಸ್ಟ್ 10: ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ತಗ್ಗುತ್ತಿದ್ದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಯಿತು. ಹೀಗಾಗಿ ರಾಜ್ಯಗಳಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಯಿತು.
ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಲಾಯಿತು. ಆದರೆ ಇಷ್ಟಾದರೂ ಕೆಲವು ರಾಜ್ಯಗಳಲ್ಲಿ ಮಾತ್ರ ಕೊರೊನಾ ತಗ್ಗಲೇ ಇಲ್ಲ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದ್ದು, ಮೂರನೇ ಅಲೆ ಆತಂಕ ಎದುರಾಗಿದೆ. ಆಗಸ್ಟ್ ಅಂತಿಮ ವೇಳೆಗೆ ಮೂರನೇ ಅಲೆ ಆರಂಭವಾಗುವುದಾಗಿ ತಜ್ಞರು ಎಚ್ಚರಿಕೆ ರವಾನಿಸಿದ್ದು, ಈ ಆತಂಕದಿಂದಾಗಿ ಮತ್ತೆ ಈ ರಾಜ್ಯಗಳಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನರಿಗೆ ಮನವಿ ಮಾಡಲಾಗಿದೆ. ಲಸಿಕೆ ನೀಡುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ.
ಈ ನಡುವೆ ಕೊರೊನಾ ಅಲೆಯ ಮಾದರಿಯಲ್ಲಿ ಕಂಡುಬಂದಿರುವ ಗೊಂದಲದ ಪ್ರವೃತ್ತಿ ಕುರಿತು ಹೈದರಾಬಾದ್ ವಿಶ್ವವಿದ್ಯಾಲಯದ ಮಾಜಿ ವಿಸಿ ವಿಪಿನ್ ಶ್ರೀವಾತ್ಸವ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಸೋಂಕಿನಿಂದ ದೈನಂದಿನ ಸಾವಿನ ಪ್ರಕರಣಗಳು ಸಕಾರಾತ್ಮಕವಾಗಿ ಬದಲಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದರಿಂದ ಕೊರೊನಾ ಮೂರನೇ ಅಲೆ ಕೆಟ್ಟದಾಗಿ ತಿರುವು ಪಡೆಯಬಹುದು ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಜುಲೈ 4ರಿಂದ ದೈನಂದಿನ ಸಾವಿನ ಪ್ರಕರಣಗಳಲ್ಲಿ ಏರಿಳಿತ ಕಾಣಿಸಿಕೊಳ್ಳುತ್ತರುವುದು ಕಳವಳ ಮೂಡಿಸಿದೆ. ಪ್ರಸ್ತುತ ಚಿತ್ರಣದಲ್ಲಿ ಗೊಂದಲಕಾರಿಯಾಗಿದೆ. ಸಾವಿನ ಪ್ರಕರಣಗಳಲ್ಲಿ ಇದ್ದಕ್ಕಿದ್ದಂತೆ ಭಾರೀ ಇಳಿಕೆ ಕಂಡುಬರುವುದು ಅಥವಾ ಏಕಾಏಕಿ ಏರಿಕೆಯಾಗುವುದು ಆತಂಕ ತಂದಿದೆ ಎಂದು ಹೇಳಿದ್ದಾರೆ. ಕೊರೊನಾ ಪ್ರಕರಣಗಳು ಹೆಚ್ಚಾಗಿರುವ ರಾಜ್ಯಗಳಾವುವು? ಮುಂದೆ ಓದಿ...

ಕೇರಳದಲ್ಲಿ ನಿಂತಿಲ್ಲ ಕೊರೊನಾ ಹಾವಳಿ
ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವುದು ಕೇರಳದಲ್ಲಿ. ಇಲ್ಲಿ ನಿರಂತರವಾಗಿ ಕೊರೊನಾ ದೈನಂದಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿಯಂತ್ರಣ ಇನ್ನೂ ಸಾಧ್ಯವಾಗಿಲ್ಲ. ಸೋಮವಾರ 13,049 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟಾರೆ ಪ್ರಕರಣದ ಸಂಖ್ಯೆ 35,65,574 ಆಗಿದೆ. ಕೇರಳದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕೇಂದ್ರ ತಂಡ ಆಗಸ್ಟ್ ಮೊದಲಲ್ಲೇ ಕೇರಳಕ್ಕೆ ಭೇಟಿ ನೀಡಿತ್ತು. ಕೆಲವು ಸಲಹೆಗಳನ್ನು ನೀಡಿದ್ದು, ಕೊರೊನಾ ನಿಯಮಗಳ ಪಾಲನೆ ಕುರಿತು ಎಚ್ಚರಿಕೆ ನೀಡಿತ್ತು. ಇದೀಗ ಕೊರೊನಾ ಪರೀಕ್ಷೆ, ಸಂಪರ್ಕ ಪತ್ತೆ ಹಾಗೂ ಕಂಟೇನ್ಮೆಂಟ್ ವಲಯಗಳನ್ನು ಸೃಷ್ಟಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಅಧಿಕ ಪ್ರಕರಣ ದಾಖಲು
ಕೇರಳದ ನಂತರ ಮಹಾರಾಷ್ಟ್ರ ಅಧಿಕ ದೈನಂದಿನ ಕೊರೊನಾ ಪ್ರಕರಣಗಳನ್ನು ದಾಖಲಿಸುತ್ತಿರುವ ರಾಜ್ಯವಾಗಿದೆ. ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 68,375 ಆಗಿದೆ. ಮೂರನೇ ಅಲೆ ಆತಂಕವೂ ಎದುರಾಗಿರುವುದರಿಂದ ಸಿಎಂ ಉದ್ಧವ್ ಠಾಕ್ರೆ ರಾಜ್ಯದಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಕೂಡ ಸೋಂಕು ತಗ್ಗಿಲ್ಲ
ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಕೂಡ ಸೋಂಕು ನಿರೀಕ್ಷಿತ ಮಟ್ಟದಲ್ಲಿ ಇಳಿಕೆಯಾಗಿಲ್ಲ. ಸೋಮವಾರ ತಮಿಳುನಾಡಿನಲ್ಲಿ 1929 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದರೆ, ಕರ್ನಾಟಕದಲ್ಲಿ 1186 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ ಪ್ರದೇಶದಲ್ಲಿ ಸೋಂಕು ಹೆಚ್ಚಾಗುತ್ತಿರುವ ಸೂಚನೆ ದೊರೆತಿದೆ. ಬೆಂಗಳೂರಿನಲ್ಲಿ ಆಗಸ್ಟ್ 16ರವರೆಗೂ ಕರ್ಫ್ಯೂ ವಿಧಿಸಲಾಗಿದ್ದು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಉಡುಪಿಯಲ್ಲಿ ಹೆಚ್ಚಿನ ಪ್ರಕರಣಗಳಿವೆ.

ಆಂಧ್ರಪ್ರದೇಶಕ್ಕೂ ಅಪಾಯದ ಸೂಚನೆ
ಸಾವಿರ ಸಂಖ್ಯೆಯ ಮೇಲೆ ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯಗಳಲ್ಲಿ ಆಂಧ್ರ ಕೂಡ ಒಂದಾಗಿದೆ. ಸೋಮವಾರ ಆಂಧ್ರದಲ್ಲಿ 1413 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಸದ್ಯಕ್ಕೆ ಇಲ್ಲಿನ ಪಾಸಿಟಿವಿಟಿ ದರ 7.9% ಇದೆ. ಇದರೊಂದಿಗೆ ರಾಜ್ಯಕ್ಕೆ ಅಪಾಯದ ಸೂಚನೆ ನೀಡಲಾಗಿದೆ.
ಭಾರತದಲ್ಲಿ ಮಂಗಳವಾರ 28,204 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 147 ದಿನಗಳಲ್ಲಿ ದಾಖಲಾದ ಅತಿ ಕಡಿಮೆ ಪ್ರಕರಣ ಇದಾಗಿದೆ. ಸದ್ಯಕ್ಕೆ ದೇಶದಲ್ಲಿ 3,88,508 ಸಕ್ರಿಯ ಪ್ರಕರಣಗಳಿವೆ. ಚೇತರಿಕೆ ಪ್ರಮಾಣ ಶೇ.97.45ರಷ್ಟಿದೆ.












Click it and Unblock the Notifications