ಸಮುದಾಯ ಹಂತ ತಲುಪಿದ ಕೊರೊನಾ: ಆರೋಗ್ಯ ಸಚಿವ ಎಚ್ಚರಿಕೆ
ಗುವಾಹಟಿ, ಜುಲೈ 6: ಭಾರತದಲ್ಲಿ ಪ್ರತಿದಿನ 20 ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಕೇಸ್ಗಳು ವರದಿಯಾಗುತ್ತಿದೆ. ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ದಿನಕ್ಕೆ 1 ಸಾವಿರಕ್ಕೂ ಅಧಿಕ ಸೋಂಕು ವರದಿಯಾಗುತ್ತಿದೆ.
ಆದರೂ, ಭಾರತದಲ್ಲಿ ಕೊರೊನಾ ವೈರಸ್ ಸಮುದಾಯ ಹಂತಕ್ಕೆ ಪ್ರವೇಶ ಮಾಡಿದೆ ಎಂದು ಯಾವ ಸರ್ಕಾರವೂ ಒಪ್ಪಿಕೊಳ್ಳುತ್ತಿಲ್ಲ. ಇದೀಗ, ಅಸ್ಸಾಂ ಆರೋಗ್ಯ ಸಚಿವರು ''ಕೊವಿಡ್ ಈಗ ಸಮುದಾಯ ಹಂತಕ್ಕೆ ತಲುಪಿದೆ'' ಎಂದು ರಾಜ್ಯದ ಜನತೆಗೆ ಎಚ್ಚರಿಕೆ ನೀಡಿದ್ದಾರೆ.
''ಕೊರೊನಾ ವೈರಸ್ ಈಗ ಸಮುದಾಯ ಹಂತಕ್ಕೆ ಪ್ರವೇಶ ಮಾಡಿದ್ದು, ಗುವಾಹಟಿಯಲ್ಲಿ ಪರಿಸ್ಥಿತಿ ಔಪಚಾರಿಕ ಹಂತಕ್ಕೆ ತಲುಪಿದೆ'' ಎಂದು ಆರೋಗ್ಯ ಸಚಿವ ಬಿಸ್ವಾಸ್ ಶರ್ಮಾ ಭಾನುವಾರ ಹೇಳಿದ್ದಾರೆ.

ಕಳೆದ ಹತ್ತು ದಿನಗಳಲ್ಲಿ ಅಸ್ಸಾಂ ರಾಜ್ಯದಲ್ಲಿ 2700 ಜನರಿಗೆ ಕೊವಿಡ್ ತಗುಲಿದೆ. ಮಾರ್ಚ್ 31 ರಂದು ಮೊದಲ ಕೊರೊನಾ ಕೇಸ್ ಪತ್ತೆಯಾಗಿತ್ತು, ಇದೀಗ 96 ದಿನಗಳ ಬಳಿಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11001ಕ್ಕೆ ತಲುಪಿದೆ ಎಂದು ಮಾಹಿತಿ ನೀಡಿದ್ದಾರೆ.
ಮೊದಲು ಆರ್ಟಿ-ಪಿಸಿಆರ್ ಮಾದರಿ ಪರೀಕ್ಷೆ ನಡೆಸಲಾಗುತ್ತಿತ್ತು. ಇದರ ವರದಿ ಬರಲು 3 ಅಥವಾ 4 ದಿನ ಬೇಕಿತ್ತು. ಪ್ರಸ್ತುತ ಅಸ್ಸಾಂನಲ್ಲಿ ತ್ವರಿತವಾಗಿ ಕೊವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಆಂಟಿಜೆನ್ ಮಾದರಿಯ ಪರೀಕ್ಷೆಯಲ್ಲಿ ಕೇವಲ ಒಂದು ಗಂಟೆ ಸಮಯದಲ್ಲಿ ಫಲಿತಾಂಶ ಬರಲಿದೆ ಎಂದು ಸಚಿವರ ತಿಳಿಸಿದರು.
ಅಸ್ಸಾಂನಲ್ಲಿ ಜುಲೈ 14ರವರೆಗೂ ಕಠಿಣ ಲಾಕ್ಡೌನ್ ಜಾರಿಯಲ್ಲಿದೆ. ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೂ ಮಾತ್ರ ದೈನಂದಿನ ಅಗತ್ಯವಸ್ತುಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.












Click it and Unblock the Notifications