ನಿಮ್ಮಿಂದಾಗಿ ಇದ್ದೇನೆ, ಇಲ್ಲದಿದ್ದರೆ ನನ್ನನ್ನು ಏನು ಮಾಡುತ್ತಿದ್ರೋ? : ಮೋದಿ
ಭ್ರಷ್ಟಾಚಾರವನ್ನು ನಿರ್ಮೂಲನ ಮಾಡುವ ಕೆಲಸವನ್ನು ದೇಶದ ಜನತೆ ನನಗೆ ನೀಡಿದೆ. ಆ ಕೆಲಸಕ್ಕೆ ನಾನು ಮುಂದಾಗಿದ್ದೇನೆ, ಇದಕ್ಕೆ ಎಷ್ಟೇ ವಿರೋಧ ಬಂದರೂ ನಾನು ಹಿಂದಕ್ಕೆ ಸರಿಯುವುದಿಲ್ಲ ಎಂದು ಪರೋಕ್ಷವಾಗಿ ವಿಪಕ್ಷಗಳ ವಿರುದ್ದ ಮೋದಿ ಕಿಡಿಕಾರಿದ್ದಾರೆ.
ಡೆಹ್ರಾಡೂನ್, ಡಿ 28 : ದೇಶದಲ್ಲಿನ ಕಪ್ಪುಹಣ ಸ್ವಚ್ಛಗೊಳಿಸಲು ನೋಟು ಬ್ಯಾನ್ ಜಾರಿಗೆ ತಂದಿದ್ದೇವೆ. ನಿಮ್ಮ (ಜನರ) ಬೆಂಬಲ ನನಗೇ ಇಲ್ಲದೇ ಇದ್ದಲ್ಲಿ ಇವರೆಲ್ಲಾ ನನ್ನನ್ನು ಏನು ಮಾಡುತ್ತಿದ್ದರೋ ಎಂದು ಪ್ರಧಾನಿ ಮೋದಿ ವಿಪಕ್ಷಗಳ ವಿರುದ್ದ ಬೇಸರ ವ್ಯಕ್ತ ಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ (ಡಿ 27) ಪರಿವರ್ತನಾ ರ್ಯಾಲಿಯ ಭಾಗವಾಗಿ ನಡೆದ ಭಾರೀ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದ ಮೋದಿ, ಹಾಸಿಗೆ, ದಿಂಬಿನ ಕೆಳಗೆ ಕಪ್ಪುಹಣವನ್ನು ಇಟ್ಟು ನಿದ್ರಿಸುತ್ತಿದ್ದರು. ಇವೆಲ್ಲಾ ಬಡವರ ಹಣ, ಇದು ಹೊರಗೆ ಬರಬೇಕು ಎನ್ನುವ ಕಾರಣಕ್ಕಾಗಿ ನೋಟು ನಿಷೇಧ ಜಾರಿಗೆ ತಂದಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಚಾರ್ ಧಾಮ್ ಹೆದ್ದಾರಿ ಅಭಿವೃದ್ದಿ ಯೋಜನೆಗೆ ಚಾಲನೆ ನೀಡಿ ಸಭೆಯಲ್ಲಿ ಮಾತನಾಡುತ್ತಿದ್ದ ಮೋದಿ, ಈ ಯೋಜನೆ ಕೇದಾರನಾಥ್ ಪ್ರವಾಹದಲ್ಲಿ ಸಾವನ್ನಪ್ಪಿದವರಿಗೆ ಅರ್ಪಿಸುತ್ತಿದ್ದೇವೆ ಎಂದಿದ್ದಾರೆ.
ಅಡುಗೆ ಅನಿಲ ವಿತರಣೆ ವಿಚಾರದಲ್ಲಿ ನಮ್ಮ ಸರಕಾರ ಕ್ರಾಂತಿಕಾರಿ ಹೆಜ್ಜೆಯಿಡುತ್ತಿದ್ದೇವೆ, ಇದು ಬಡವರ ಕಲ್ಯಾಣಕ್ಕಾಗಿ ನಾವು ಇಟ್ಟಿರುವ ಹೆಜ್ಜೆಯೇ ಹೊರತು ಶ್ರೀಮಂತರಿಗಾಗಿ ಅಲ್ಲ ಎಂದು ಮೋದಿ ಹೇಳಿದ್ದಾರೆ.
ನಲವತ್ತು ವರ್ಷದಿಂದ ನಮ್ಮನ್ನು ಕಾಯುವ ಸೈನಿಕರು ಒಂದು ರ್ಯಾಂಕ್, ಒಂದು ಪೆನ್ಸನ್ ಜಾರಿಗೆ ತನ್ನಿ ಎಂದು ಸರಕಾರವನ್ನು ಕೇಳುತ್ತಲೇ ಬಂದಿದ್ದರು. ಕೊನೆಗೆ ಅದನ್ನು ಜಾರಿಗೆ ತಂದವರು ನಾವು ಎಂದು ಮೋದಿ ತುಂಬಿದ ಸಭೆಯಲ್ಲಿ ಹೇಳಿದ್ದಾರೆ.
ನನ್ನನ್ನು ಚೌಕೀದಾರನನ್ನಾಗಿ ಮಾಡಿದ್ದೀರಾ, ನಾನು ಸಣ್ಣಪುಟ್ಟ ಉದ್ಘಾಟನೆ ಮಾಡಿಕೊಂಡು ಇರಬೇಕಾ? ದೇಶಕ್ಕಾಗಿ ಏನಾದರೂ ಮೋದಿ ಮಾಡುತ್ತಾರೆ ಎನ್ನುವ ಭರವಸೆಯಿಂದ ನಮಗೆ ಅಧಿಕಾರ ನೀಡಿದ್ದೀರಿ. ದೇಶದ ಪರವಾಗಿ ಕೆಲಸ ಮಾಡಿದರೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ ಎಂದು ಮೋದಿ, ವಿಪಕ್ಷಗಳ ವಿರುದ್ದ ಹರಿಹಾಯ್ದಿದ್ದಾರೆ.
ಭ್ರಷ್ಟಾಚಾರವನ್ನು ನಿರ್ಮೂಲನ ಮಾಡುವ ಕೆಲಸವನ್ನು ದೇಶದ ಜನತೆ ನನಗೆ ನೀಡಿದೆ. ಆ ಕೆಲಸಕ್ಕೆ ನಾನು ಮುಂದಾಗಿದ್ದೇನೆ, ಇದಕ್ಕೆ ಎಷ್ಟೇ ವಿರೋಧ ಬಂದರೂ ನಾನು ಹಿಂದಕ್ಕೆ ಸರಿಯುವುದಿಲ್ಲ. ನಿಮ್ಮ ಬೆಂಬಲದಿಂದ ಇದ್ದೇನೆ, ಇಲ್ಲದಿದ್ದರೆ ನನಗೆ ಏನು ಮಾಡುತ್ತಿದ್ದರೋ ಎಂದು ಪರೋಕ್ಷವಾಗಿ ವಿಪಕ್ಷಗಳ ವಿರುದ್ದ ಮೋದಿ ಕಿಡಿಕಾರಿದ್ದಾರೆ.