ಪತಂಜಲಿ ಕೊರೊನಿಲ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು
ನವದೆಹಲಿ, ಜೂನ್ 24: ಯೋಗ ಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಸಂಸ್ಥೆಯಿಂದ ಹೊರ ಬಂದಿರುವ 'ಕೊರೊನಿಲ್' ಎಂಬ ಔಷಧ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಕೊರೊನಾವೈರಸ್ ವಿರುದ್ಧ ಬಳಸಲು ಈ ಔಷಧ ಸೂಕ್ತವಾಗಿದೆ, ಸೋಂಕಿತರು ಶೀಘ್ರದಲ್ಲೇ ಗುಣಮುಖರಾಗಬಹುದು ಎಂದು ಸಂಸ್ಥೆ ಹೇಳುವ ಮೂಲಕ ಲಕ್ಷಾಂತರ ಜನರ ಜೀವವನ್ನು ಆಪಾಯಕ್ಕೆ ದೂಡಿದೆ ಎಂದು ಆರೋಪಿಸಲಾಗಿದೆ. ಇನ್ನೊಂದೆಡೆ 'ಕೊರೊನಿಲ್' ಔಷಧ ಮಾರಾಟಕ್ಕೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.
Recommended Video
ಸಾಮಾಜಿಕ ಕಾರ್ಯಕರ್ತ ತಮನ್ನಾ ಹಶ್ಮಿ ಎಂಬುವರು ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಕೇಶ್ ಕುಮಾರ್ ಎದುರು ದೂರು ಸಲ್ಲಿಕೆ ಮಾಡಿದ್ದಾರೆ. ಪತಂಜಲಿ ಸಂಸ್ಥೆಯ ರಾಮದೇವ್, ಎಂಡಿ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ವಂಚನೆ, ಕ್ರಿಮಿನಲ್ ಸಂಚು ಮುಂತಾದ ಆರೋಪ ಹೊರೆಸಲಾಗಿದೆ.
ಪ್ರಕರಣವನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯವು ಜೂನ್ 30ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಕೊರೊನಿಲ್ ಮಾತ್ರೆಗಳು ಕೊವಿಡ್ 19 ಸೋಂಕು ತೊಲಗಿಸುತ್ತದೆ ಎಂದು ಪ್ರಚಾರ ನೀಡಿರುವುದು ತಪ್ಪು ಸಂದೇಶ ನೀಡುತ್ತದೆ, ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ದೂರುದಾರ ಹೇಳಿದ್ದಾರೆ.

ಪತಂಜಲಿಯ ಈ ಕೊರೊನಿಲ್ನಿಂದ ಶೇ.100ರಷ್ಟು ಸೋಂಕು ಗುಣವಾಗುತ್ತದೆ. ಕೊರೊನಾ ಸೋಂಕು ನಿಯಂತ್ರಣ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳು ಸಕಾರಾತ್ಮಕ ಬಂದಿದೆ. ಕೊರೊನಿಲ್ ಔಷಧ ಸಂಪೂರ್ಣವಾಗಿ ಕ್ಲಿನಿಕಲ್ ಸಂಶೋಧನೆಯ ಆಧಾರವಾಗಿಟ್ಟುಕೊಂಡು ತಯಾರಿಸಲಾಗಿದೆ ಎಂದು ಪತಂಜಲಿ ಆಯುರ್ವೇದ ಹೇಳಿದೆ.
ಕೊವಿಡ್ 19 ರೋಗದ ವಿರುದ್ಧ ಹೋರಾಡಲು ಮೊದಲ ಭಾರಿಗೆ ಆಯುರ್ವೇದದಲ್ಲಿ ಔಷಧಿ ಕಂಡುಹಿಡಿದಿದ್ದೇವೆ. ಮೂರು ದಿನಗಳಲ್ಲಿ ಶೇ.69ರಷ್ಟು ಗುಣಮುಖರಾಗುತ್ತಾರೆ. 7 ದಿನಗಳಲ್ಲಿ ಶೇ.100ರಷ್ಟು ರೋಗಿಗಳು ಗುಣಮುಖರಾಗಲಿದ್ದಾರೆ ಎಂದು ಯೋಗ ಗುರು ಬಾಬಾ ರಾಮ್ದೇವ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications