ಭಾರತದ 8 ರಾಜ್ಯಗಳಲ್ಲಿ 4 ಲಕ್ಷಕ್ಕಿಂತ ಹೆಚ್ಚು ಜನರಿಗೆ ಕೊರೊನಾ ಲಸಿಕೆ
ನವದೆಹಲಿ, ಫೆಬ್ರವರಿ.13: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ದೃಷ್ಟಿಯಿಂದ ಲಸಿಕೆ ವಿತರಣೆ ಅಭಿಯಾನವನ್ನು ಕ್ಷಿಪ್ರಗತಿಯಲ್ಲಿ ನಡೆಸಲಾಗುತ್ತಿದೆ. ಇನ್ನೊಂದು ದಿಕ್ಕಿನಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಸಹ ಇಳಿಮುಖವಾಗುತ್ತಿದೆ.
ಕಳೆದ 28 ದಿನಗಳಲ್ಲಿ 79.67 ಲಕ್ಷಕ್ಕಿಂತ ಹೆಚ್ಚು ಮಂದಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ. ದೇಶಾದ್ಯಂತ ಇದುವರೆಗೂ 79,67,647 ವೈದ್ಯಕೀಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಜಿಲ್ಲಾಧಿಕಾರಿ ಸೇರಿದಂತೆ ಸರ್ಕಾರದ ಪ್ರಮುಖ ವಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ.
ಬೊಜ್ಜು ಹೊಂದಿರುವ ಕೊರೊನಾ ಸೋಂಕಿತರ ಮೇಲೆ ಲಸಿಕೆ ಪರಿಣಾಮ ಬೀರುವುದಿಲ್ಲ ನಿಜವೇ?
ದೇಶದಲ್ಲಿ ಎರಡನೇ ಹಂತದ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ನಡೆಸಲಾಗುತ್ತಿದ್ದು, ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ. 5,909,136 ಆರೋಗ್ಯ ಸಿಬ್ಬಂದಿ ಮತ್ತು 2,058,511 ಕಾರ್ಮಿಕರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.
4 ಲಕ್ಷಕ್ಕಿಂತ ಅಧಿಕ ಮಂದಿಗೆ ಲಸಿಕೆ ವಿತರಿಸಿದ ರಾಜ್ಯಗಳು
ರಾಜ್ಯ | ಲಸಿಕೆ ಹಾಕಿಸಿಕೊಂಡ ಫಲಾನುಭವಿಗಳು |
ಉತ್ತರ ಪ್ರದೇಶ | 8,58,602 |
ಗುಜರಾತ್ | 6,67,073 |
ಮಹಾರಾಷ್ಟ್ರ | 6,49,660 |
ರಾಜಸ್ಥಾನ | 6,06,694 |
ಮಧ್ಯಪ್ರದೇಶ | 5,26,095 |
ಕರ್ನಾಟಕ | 4,91,552 |
ಪಶ್ಚಿಮ ಬಂಗಾಳ | 4,85,054 |
ಬಿಹಾರ | 4,71,683 |
17 ಕೇಂದ್ರಾಡಳಿತ/ರಾಜ್ಯದಲ್ಲಿ ಒಂದೇ ಒಂದು ಸಾವು ಸಂಭವಿಸಿಲ್ಲ
ಭಾರತದಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಡುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊವಿಡ್-19 ಮಹಾಮಾರಿಗೆ 103 ಮಂದಿ ಸಾವನ್ನಪ್ಪಿದ್ದಾರೆ. ಆದರೆ 17 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾವೈರಸ್ ಸೋಂಕಿನಿಂದ ಒಂದೇ ಒಂದು ಸಾವಿನ ಪ್ರಕರಣ ದಾಖಲಾಗಿಲ್ಲ. ತೆಲಂಗಾಣ, ಒಡಿಶಾ, ಜಾರ್ಖಂಡ್, ಪುದುಚೇರಿ, ಚಂಡೀಘರ್, ನಾಗಾಲ್ಯಾಂಡ್, ಅಸ್ಸಾಂ, ಮಣಿಪುರ, ಸಿಕ್ಕಿಂ, ಮೇಘಾಲಯ, ಲಡಾಖ್, ಮಿಜೋರಾಂ, ತ್ರಿಪುರಾ, ಲಕ್ಷದ್ವೀಪ, ಅರುಣಾಚಲ ಪ್ರದೇಶ, ದಿಯು ಮತ್ತು ದಮನ್ ನಲ್ಲಿ ಒಂದೇ ಒಂದು ಸಾವಿನ ಪ್ರಕರಣಗಳು ದಾಖಲಾಗಿಲ್ಲ.
ಈ ರಾಜ್ಯಗಳಲ್ಲಿ ಅತಿಹೆಚ್ಚು ಹೊಸ ಸೋಂಕಿತ ಪ್ರಕರಣ
ಭಾರತದಾದ್ಯಂತ ಕಳೆದ 24 ಗಂಟೆಗಳಲ್ಲಿ 12,000ಕ್ಕಿಂತ ಹೆಚ್ಚು ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಶೇ.82ರಷ್ಟು ಹೊಸ ಪ್ರಕರಣಗಳು ಕೇವಲ ಆರು ರಾಜ್ಯಗಳಲ್ಲಿ ಪತ್ತೆಯಾಗಿವೆ. ಅತಿಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಆರು ರಾಜ್ಯಗಳ ಪಟ್ಟಿ ಇಲ್ಲಿದೆ ನೋಡಿ.
ರಾಜ್ಯ | ಸೋಂಕಿತ ಪ್ರಕರಣಗಳ ಸಂಖ್ಯೆ |
ಕೇರಳ | 5332 |
ಮಹಾರಾಷ್ಟ್ರ | 2422 |
ತಮಿಳುನಾಡು | 486 |
ಛತ್ತೀಸ್ ಗಢ | 410 |
ಕರ್ನಾಟಕ | 405 |
ಗುಜರಾತ್ | 281 |
ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣ ಅಂಕಿ-ಸಂಖ್ಯೆ
ಭಾರತದಲ್ಲಿ 24 ಗಂಟೆಗಳಲ್ಲಿ 12,143 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಂದೇ ದಿನ 103 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆಯು 1,55,550ಕ್ಕೆ ಏರಿಕೆಯಾಗಿದೆ. ಕಳೆದ ಒಂದು ದಿನದಲ್ಲಿ 11,395 ಜನರು ಕೊವಿಡ್-19 ಸೋಂಕಿನಿಂದ ಗುಣಮುಖರಾಗಿದ್ದಾರೆ. ಶನಿವಾರದ ಅಂಕಿ-ಅಂಶಗಳ ಪ್ರಕಾರ, ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 1,08,92,746ಕ್ಕೆ ಏರಿಕೆಯಾಗಿದೆ. 1,06,00,625 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಉಳಿದಂತೆ 1,36,571 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.