ಆರ್.ಎಸ್.ಎಸ್ ವಿರುದ್ಧ 'ಸೇವಾದಳ' ಅಸ್ತ್ರ ಪ್ರಯೋಗಿಸಲಿದೆ ಕಾಂಗ್ರೆಸ್
ನವದೆಹಲಿ, ಜೂನ್ 11: ಆರ್.ಎಸ್.ಎಸ್ ನ ಬಲಿಷ್ಠ ಸಂಘಟನೆ ಮುಂದೆ ಹೋರಾಟ ನಡೆಸಲು ಸಾಧ್ಯವಾಗದೆ ದೇಶದಾದ್ಯಂತ ಮಕಾಡೆ ಮಲಗಿರುವ ಕಾಂಗ್ರೆಸ್ ತಿರುಗೇಟು ನೀಡಲು ರಣತಂತ್ರ ಹೆಣೆದಿದೆ. ತನ್ನ ಹಳೆಯ ಬೇರು ಸೇವಾದಳವನ್ನು ಬಲಿಷ್ಠಗೊಳಿಸಿ ಆರ್.ಎಸ್.ಎಸ್ ರೀತಿಯಲ್ಲೇ ಸಂಘಟನೆ ಗಟ್ಟಿಗೊಳಿಸಲು ಕಾಂಗ್ರೆಸ್ ಮುಂದಾಗಿದೆ.
ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕ್ರಮ ಆಯೋಜನೆ ಮಾಡುವಲ್ಲಿ ಮಾತ್ರ ಸೇವಾದಳ ಬಳಕೆಯಾಗುತ್ತಿತ್ತು. ಇದೇ ಸೇವಾದಳವನ್ನು ಪುನರ್ ಸಂಘಟಿಸಲು ಕಾಂಗ್ರೆಸ್ ಮುಂದಾಗಿದೆ.
ಭಾರತ ಆರೆಸ್ಸೆಸ್, ಬಿಜೆಪಿ ಕೈಯಲ್ಲಿ ಜೀತದಾಳಾಗಿದೆ: ರಾಹುಲ್
ಇನ್ನು ಮುಂದೆ ಪ್ರತೀ ತಿಂಗಳ ನಾಲ್ಕನೇ ಭಾನುವಾರ ದೇಶದ ಒಂದು ಸಾವಿರ ನಗರಗಳಲ್ಲಿ ಧ್ವಜ ವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲು ಪಕ್ಷ ನಿರ್ಧರಿಸಿದೆ. ಇದರಲ್ಲಿ ರಾಷ್ಟ್ರ ಪ್ರೇಮ, ಜಾಗೃತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ಕಾಂಗ್ರೆಸ್ ಉದ್ಧೇಶವಾಗಿದೆ.
ಇದೇ ಕಾರ್ಯಕ್ರಮದಲ್ಲಿ ಬಹುತ್ವ, ಸಹಿಷ್ಣುತೆ, ಜಾತ್ಯಾತೀತ ಮನೋಭಾವ, ಮಹಾತ್ಮಾ ಗಾಂಧಿ ಮತ್ತು ಜವಹರ್ ಲಾಲ್ ನೆಹರೂ ಅವರ ಚಿಂತನೆ, ತತ್ವಾದರ್ಶಗಳ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಲು ಆಲೋಚಿಸಿದೆ.
ಇದರ ಜೊತೆಗೆ 700 ಜಿಲ್ಲೆ ಮತ್ತು ನಗರಗಳಲ್ಲಿ ಸೇವಾದಳದ ಘಟಕಗಳನ್ನು ತೆರೆಯುವುದು, ಪ್ರತೀ ಘಟಕದಲ್ಲಿ 20-200 ಸ್ವಯಂ ಸೇವಕರನ್ನು ಹೊಂದುವುದು ಮೊದಲ ಹಂತದ ಯೋಜನೆಯಾಗಿದೆ.
ಭಾನುವಾರ ಹೇಳಿಕೆ ನೀಡಿರುವ ಸೇವಾದಳದ ಮುಖ್ಯ ಸಂಯೋಜಕ ಲಾಲ್ ಜೀಭಾಯ್ ದೇಸಾಯಿ, ಸೇವಾದಳ ಬಲವರ್ಧನೆಯ ಯೋಜನಾ ವರದಿ ಸಿದ್ದವಾಗಿದ್ದು ರಾಹುಲ್ ಗಾಂಧಿಯವರ ಒಪ್ಪಿಗೆ ಪಡೆಯಾಲಾಗುತ್ತದೆ. ನಂತರ ಧ್ವಜವಂದನೆ ಕಾರ್ಯಕ್ರಮ ಚಾಲ್ತಿಗೆ ಬರಲಿದೆ ಎಂದಿದ್ದಾರೆ.
ಇದರ ಜೊತೆಗೆ ಸೇವಾದಳದ ಕಾರ್ಯಕರ್ತರಿಗಾಗಿ ದೇಶದಾದ್ಯಂತ ಮೂರು ತಿಂಗಳ ತರಬೇತಿ ಶಿಬರವೂ ನಡೆಯಲಿದೆ. ಮೊದಲ ಶಿಬಿರ ಜೂನ್ 11ರಂದು ಅಂದರೆ ಇಂದು ಮಣಿಪುರದಲ್ಲಿ ಆರಂಭವಾಗಲಿದೆ. ಇದರಲ್ಲಿ ಸೇವದಳದ ಸ್ವಯಂ ಸೇವಕರು, ಈಶಾನ್ಯ ಭಾರತದಲ್ಲಿರುವ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ದೇಸಾಯಿ ಹೇಳಿದ್ದಾರೆ.
ಸೇವಾದಳ ಬಲವರ್ಧನೆಯ ಜೊತೆಗೆ ಸೇವಾದಳದ ಯುವ ಘಟಕ ಸ್ಥಾಪಿಸುವ ಆಲೋಚನೆಯೂ ನಮ್ಮ ಮುಂದಿದೆ ಎಂಬುದಾಗಿ ದೇಸಾಯಿ ಮಾಹಿತಿ ನೀಡಿದ್ದಾರೆ.