ಬಿಜೆಪಿಯಿಂದಲೇ 'ಕೇಂಬ್ರಿಡ್ಜ್ ಅನಾಲಿಟಿಕಾ' ಬಳಕೆ: ಕಾಂಗ್ರೆಸ್ ತಿರುಗೇಟು
ನವದೆಹಲಿ, ಮಾರ್ಚ್ 21: ಬಿಜೆಪಿಯ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ಕೇಂಬ್ರಿಡ್ಜ್ ಅನಾಲಿಟಿಕಾದ ಸೇವೆಯನ್ನು ಕಾಂಗ್ರೆಸ್ ಆಗಲಿ, ಕಾಂಗ್ರೆಸ್ ಅಧ್ಯಕ್ಷರಾಗಲಿ ಪಡೆದುಕೊಂಡಿಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಹೇಳಿದ್ದಾರೆ.
"ನಕಲಿ ಸುದ್ದಿಗಳ ಬಿಜೆಪಿ ಕಾರ್ಖಾನೆ ಇಂದು ಮತ್ತೊಂದು ಸುಳ್ಳನ್ನು ಸೃಷ್ಟಿಸಿದೆ. ನಕಲಿ ಹೇಳಿಕೆಗಳು, ನಕಲಿ ಪತ್ರಿಕಾಗೋಷ್ಠಿಗಳು ಮತ್ತು ನಕಲಿ ಅಜೆಂಡಾಗಳು ಬಿಜೆಪಿ ಮತ್ತು ಅದರ 'ಕಾನೂನು ರಹಿತ' ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ರ ದೈನಂದಿನ ಚಟುವಟಿಕೆಯಂತೆ ಭಾಸವಾಗುತ್ತಿದೆ," ಎಂದು ಅವರು ದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದ್ದಾರೆ.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಥವಾ ಕಾಂಗ್ರೆಸ್ ಅಧ್ಯಕ್ಷರು ಕೇಂಬ್ರಿಜ್ ಅನಾಲಿಟಿಕಾ ಕಂಪನಿಯ ಸೇವೆಯನ್ನು ಎಂದೂ ಬಳಸಿಕೊಂಡಿಲ್ಲ.ಇದು ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ನಕಲಿ ಅಜೆಂಡಾ ಮತ್ತು ಹಸಿ ಸುಳ್ಳು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕೇಂಬ್ರಿಜ್ ಅನಾಲಿಟಿಕ ಲಿಂಕ್ ಇರುವ ವೆಬ್ಸೈಟ್ 2010 ರಲ್ಲಿ ಅದರ ಸೇವೆಯನ್ನು ಬಿಜೆಪಿ - ಜೆಡಿ(ಯು) ಪಡೆದಿದ್ದಾಗಿ ತೋರಿಸುತ್ತಿವೆ. ಸಂಸ್ಥೆಯ ಭಾರತೀಯ ಪಾಲುದಾರ ಕಂಪನಿ ಒವ್ಲೆನೆ ಬಿಸಿನೆಸ್ ಇಂಟೆಲಿಜೆನ್ಸ್ (ಒಬಿಐ) ಸಂಸ್ಥೆಯನ್ನು ಬಿಜೆಪಿ ಮಿತ್ರಪಕ್ಷದ ಸಂಸರೊಬ್ಬರ ಮಗ ನಡೆಸುತ್ತಿದ್ದಾರೆ. ಒಬಿಐ ಕಂಪನಿಯ ಸೇವೆಗಳನ್ನು ರಾಜನಾಥ್ ಸಿಂಗ್ ಅವರು 2009 ರಲ್ಲಿ ಬಳಸಿದರು," ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಲಂಡನ್ ನಿಂದ ಭಾರತದವರೆಗೆ
ಲಂಡನ್ ಮೂಲದ ಕೇಂಬ್ರಿಜ್ ಅನಾಲಿಟಿಕಾ ಮತದಾರರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಹಾಗೂ ಮತದಾರರ ಮನಸ್ಸನ್ನು ಬದಲಿಸುವ ವ್ಯವಹಾರದಲ್ಲಿ ನಿರತವಾಗಿರುವ ಕಂಪೆನಿಯಾಗಿದೆ.
ಫೇಸ್ಬುಕ್ ಬಳಕೆದಾರರ ಮನಸ್ಥಿತಿಯ ಆಧಾರದಲ್ಲಿ ಕೇಂಬ್ರಿಜ್ ಅನಾಲಿಟಿಕಾ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಕಾರ್ಯತಂತ್ರವನ್ನು ರೂಪಿಸಿತ್ತು.
ಇತ್ತೀಚೆಗೆ ಫೇಸ್ಬುಕ್ ಡೇಟಾ ಈ ಕಂಪನಿಗೆ ಸೋರಿಕೆಯಾದ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು.
ಇದಾದ ಬಳಿಕ ಈ ಕಂಪನಿ ಜತೆ ಕಾಂಗ್ರೆಸ್ ಗೆ ಸಂಬಂಧ ಇದೆ ಎಂದು ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದರು.
ಇದಕ್ಕೀಗ ಕಾಂಗ್ರೆಸ್ ತಿರುಗೇಟು ನೀಡಿದೆ.












Click it and Unblock the Notifications