ರಫೇಲ್ ಹಗರಣದ ತನಿಖೆ: ಕಾಂಗ್ರೆಸ್ ಆನ್ಲೈನ್ ಅಭಿಯಾನಕ್ಕೆ ಸಹಿ ಹಾಕ್ತೀರಾ?
Recommended Video
ನವದೆಹಲಿ, ಡಿಸೆಂಬರ್ 13: ಐದು ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಚುರುಕುಗೊಂಡಿರುವ ಕಾಂಗ್ರೆಸ್ ಚಿತ್ತ ರಫೇಲ್ ಒಪ್ಪಂದದತ್ತ ಮತ್ತೆ ಹೊರಳಿದೆ.
ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸುತ್ತಾ ಬಂದಿರುವ ಕಾಂಗ್ರೆಸ್, ಆಡಳಿತಾರೂಢ ಬಿಜೆಪಿ ಮೇಲೆ ಒತ್ತಡ ಹೇರಲು ಈಗ ಹೊಸ ಅಭಿಯಾನ ಆರಂಭಿಸಿದೆ.
ರಫೇಲ್ ಒಪ್ಪಂದದ ಹಗರಣವನ್ನು ಜಂಟಿ ಸಂಸದೀಯ ಸಮಿತಿ ಮೂಲಕ ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದ್ದು, ಅದಕ್ಕಾಗಿ ಆನ್ಲೈನ್ ಸಹಿ ಸಂಗ್ರಹ ಆರಂಭಿಸಿದೆ.
ರಫೇಲ್ ತನಿಖೆ ನಡೆದರೆ ಮೋದಿ, ಅಂಬಾನಿ ಹೆಸರು ಹೊರಬರುತ್ತದೆ: ರಾಹುಲ್
ನಾವು ಭ್ರಷ್ಟಾಚಾರ ಮತ್ತು ಬಂಡವಾಳಶಾಹಿ ಸ್ವಜನಪಕ್ಷಪಾತದ ಜೊತೆಗೆ ನಿಲ್ಲುವುದಿಲ್ಲ ಎಂದು ಭಾರತದ ಜನರು 'ಚೌಕಿದಾರ'ನಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ರಫೇಲ್ ಹಗರಣವನ್ನು ಜಂಟಿ ಸಂಸದೀಯ ಸಮಿತಿ ಮೂಲಕ ತನಿಖೆಗೆ ಒಳಪಡಿಸಲು ಒತ್ತಾಯಿಸುತ್ತೇವೆ ಎಂದು ಟ್ವೀಟ್ ಮಾಡಿರುವ ಕಾಂಗ್ರೆಸ್, ಪಾರದರ್ಶಕತೆಯನ್ನು ಮರಳಿ ತರಲು ಅರ್ಜಿಗೆ ಸಹಿ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದೆ.
#SignToProbeRafaleScam ಎಂಬ ಹ್ಯಾಶ್ ಟ್ಯಾಗ್ ಬಳಸಿ ಅಭಿಯಾನಕ್ಕೆ ಪ್ರಚಾರ ನೀಡಲಾಗುತ್ತಿದೆ.ಈಗಾಗಲೇ 11 ಸಾವಿರಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ.
ರಫೇಲ್ ಸತ್ಯ ತಿಳಿಯಬೇಕಿದೆ
ಕಾಂಗ್ರೆಸ್ನ ರಾಜನ್ ಕೊಚ್ಚಾರ್ ಆರಂಭಿಸಿರುವ ಈ ಆನ್ ಲೈನ್ ಸಹಿ ಸಂಗ್ರಹ ಅಭಿಯಾನವು ರಫೇಲ್ ಕುರಿತಾದ ಸತ್ಯವನ್ನು ಭಾರತ ತಿಳಿದುಕೊಳ್ಳಬೇಕಿದೆ ಎಂಬ ಶೀರ್ಷಿಕೆಯಲ್ಲಿದೆ. ಅಭಿಯಾನದ ಬರಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಿಲಯನ್ಸ್ ಮಾಲೀಕ ಅನಿಲ್ ಅಂಬಾನಿ ಅವರ ಚಿತ್ರಗಳನ್ನು ಬಳಸಲಾಗಿದೆ.
ನರೇಂದ್ರ ಮೋದಿ ಸರ್ಕಾರವು ಫ್ರಾನ್ಸ್ ಸರ್ಕಾರದೊಂದಿಗೆ ಮಾಡಿಕೊಂಡಿರುವ ರಫೇಲ್ ಯುದ್ಧ ವಿಮಾನ ಒಪ್ಪಂದವನ್ನು ಜಂಟಿ ಸಂಸದೀಯ ತನಿಖೆಗೆ ಒಳಪಡಿಸಲು ನಿಮ್ಮ ಬೆಂಬಲ ಬೇಕಿದೆ ಎಂದು ನಾಗರಿಕರಿಗೆ ಮನವಿ ಮಾಡಿರುವ ಅರ್ಜಿಯು, ಈ ತನಿಖೆ ನಡೆಸುವ ಅಗತ್ಯವನ್ನು ಆರು ಕಾರಣಗಳಲ್ಲಿ ಪಟ್ಟಿ ಮಾಡಿದೆ.
ರಫೇಲ್ ಡೀಲ್ ಬಗ್ಗೆ ಐಎಎಫ್ ಗೆ ಸುಪ್ರೀಂ ಪ್ರಶ್ನೆಗಳ ಸುರಿಮಳೆ
Array |
ಮೋದಿ ಒಬ್ಬರದೇ ನಿರ್ಧಾರ
ವಿಮಾನದ ದರ, ಸಂಖ್ಯೆ ಮತ್ತು ಅದರ ಪಾಲುದಾರರು ಸೇರಿದಂತೆ ಒಪ್ಪಂದದ ಪ್ರತಿಯೊಂದು ನಿರ್ಧಾರಗಳನ್ನೂ ಪ್ರಧಾನಿ ನರೇಂದ್ರ ಮೋದಿ ಅವರೊಬ್ಬರೇ ತೆಗೆದುಕೊಂಡಿದ್ದಾರೆ. ಉನ್ನತ ಮಟ್ಟದ ಸಮಿತಿ, ಸಂಪುಟ ಸಮಿತಿಗಳ ಅಭಿಪ್ರಾಯಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆ ಮತ್ತು ನಿಯಮಗಳನ್ನು ಸುಲಭವಾಗಿ ದಾಟಿಸಿದ್ದಾರೆ ಎಂದು ಆರೋಪಿಸಲಾಗಿದೆ.
'90 ವರ್ಷದ ಅನುಭವಿ ಕಂಪನಿ, ಅನನುಭವಿ ರಿಲಯನ್ಸ್ ಅನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ'
ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ
ಹಿಂದಿನ ಸರ್ಕಾರದ ವೇಳೆ ನಡೆದಿದ್ದ ಒಪ್ಪಂದಕ್ಕಿಂತ ಶೇ 300ರಷ್ಟು ಹೆಚ್ಚು ಬೆಲೆಗೆ ವಿಮಾನ ಖರೀದಿ ಮಾಡಲು ಒಪ್ಪಂದ ನಡೆದಿದೆ. ಹೆಚ್ಚಿನ ಬೆಲೆಗೆ ವಿಮಾನ ಖರೀದಿಸುವ ಒಪ್ಪಂದ ಮಾಡಿಕೊಂಡಿರುವುದಕ್ಕೆ ಇದುವರೆಗೂ ಸಕಾರಣದ ವಿವರಣೆ ನೀಡಿಲ್ಲ. ಬೆಲೆ ಏರಿಕೆ ವಿವರಗಳನ್ನು ಬಹಿರಂಗಪಡಿಸುವುದು ಸಾಧ್ಯವಿಲ್ಲ ಎಂದಿದ್ದ ಸರ್ಕಾರ, ಅದಕ್ಕೆ ಕೊಟ್ಟಿರುವ ಕಾರಣ 'ರಾಷ್ಟ್ರೀಯ ಭದ್ರತೆ ಹಿತದೃಷ್ಟಿ'. ಇದು ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಅನುಮಾನಕ್ಕೆ ಪುಷ್ಠಿ ನೀಡುವಂತಿದೆ.
|
ಅಂಬಾನಿಗೆ 1.30 ಲಕ್ಷ ಕೋಟಿ ಲಾಭ
ಅನಿಲ್ ಅಂಬಾನಿ ಅವರ ರಿಲಯನ್ಸ್ ಸಮೂಹವು 45 ಸಾವಿರ ಕೋಟಿ ಸಾಲದ ಹೊರೆಯಲ್ಲಿತ್ತು. 30 ಸಾವಿರ ಕೋಟಿ ರೂ. ಆಫ್ ಸೆಟ್ ಪಾಲುದಾರಿಕೆಯ ಲಾಭವನ್ನು ಮಾಡಿಕೊಡುವ ಸಲುವಾಗಿ ರಿಲಯನ್ಸ್ಗೆ ನೀಡಲಾಯಿತು. ಮುಂದಿನ 50 ವರ್ಷಗಳಲ್ಲಿ 36 ರಫೇಲ್ ಯುದ್ಧ ವಿಮಾನಗಳ ಬಿಡಿಭಾಗಗಳನ್ನು ಒದಗಿಸುವ ಹಾಗೂ ನಿರ್ವಹಣೆ ಕಾರ್ಯಗಳಿಂದ ಒಂದು ಲಕ್ಷ ಕೋಟಿ ರೂ. ಲಾಭ ಪಡೆದುಕೊಳ್ಳುವುದಾಗಿ ರಿಲಯನ್ಸ್ ಹೇಳಿಕೊಂಡಿದೆ. ಹೀಗಾಗಿ ಅನಿಲ್ ಅಂಬಾನಿ ಅವರ ರಿಲಯನ್ಸ್ ಡಿಫೆನ್ಸ್ಗೆ ಸಿಗುವ ಲಾಭ 1.30 ಲಕ್ಷ ಕೋಟಿ ರೂ.
ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ
ಆರಂಭದಲ್ಲಿದ್ದ 126 ಯುದ್ಧ ವಿಮಾನಗಳ ಸಂಖ್ಯೆಯನ್ನು 36ಕ್ಕೆ ಇಳಿಸುವ ಮೂಲಕ ಪ್ರಧಾನಿ ಅವರು ನಮ್ಮ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿಯಾಗಿದ್ದಾರೆ. ಕಳೆದ ಕನಿಷ್ಠ ಮೂರು ವರ್ಷಗಳಿಂದ ನಮ್ಮ ವಾಯು ಸೇನೆಗೆ ಯುದ್ಧ ವಿಮಾನಗಳ ಅಗತ್ಯವಿದ್ದು, ಒಪ್ಪಂದವನ್ನು ಹೊಸದಾಗಿ ಮಾಡಿಕೊಳ್ಳುವ ಮೂಲಕ ಅದಕ್ಕೆ ಹಿನ್ನಡೆ ಮಾಡಲಾಗಿದೆ. ಇದರಿಂದಾಗಿ ವಾಯು ಪಡೆಯು ವೈಮಾನಿಕ ಕಾರ್ಯಾಚರಣೆ ನಡೆಸಲು ಇನ್ನೂ ಸಿದ್ಧವಾಗಲು ಸಾಧ್ಯವಾಗಿಲ್ಲ. ಮತ್ತು ಸಲಕರಣೆಗಳು ಲಭ್ಯವಾಗಿಲ್ಲ. 126ಕ್ಕೆ ಬದಲಾಗಿ ಕೇವಲ 36 ವಿಮಾನಗಳನ್ನು ಒದಗಿಸುವುದು ವಾಯು ಪಡೆಗೆ ಇರುವ ಅಗತ್ಯಗಳನ್ನು ಅಣಕಿಸಿದಂತೆ. ಇದರಿಂದ ವೈರಿಗಳ ಎದುರು ಯುದ್ಧದ ಸನ್ನಿವೇಶ ಎದುರಾದರೆ ಸೇನಾಪಡೆ ಸಂಕಷ್ಟಕ್ಕೆ ಸಿಲುಕಲಿದೆ.
|
ಮೇಕ್ ಇನ್ ಇಂಡಿಯಾ ಅಣಕ
ಫ್ರಾನ್ಸ್ ನಿರ್ಮಾಣದ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಧಾನಿ ನಿರ್ಧಾರ, ಅವರದೇ 'ಮೇಕ್ ಇನ್ ಇಂಡಿಯಾ' ಯೋಜನೆಯನ್ನು ಅಣಕಿಸಿದೆ. ಅತ್ಯಾಧುನಿಕ ಯುದ್ಧವಿಮಾನಗಳನ್ನು ತಯಾರಿಸುವ ಮೂಲಕ ಸ್ವಾವಲಂಬಿಯಾಗುವ ಭಾರತದ ಅವಕಾಶವನ್ನೇ ಇದು ಕಸಿದುಕೊಂಡಿದೆ. ಜೊತೆಗೆ ಆಧುನಿಕ ವೈಮಾನಿಕ ತಂತ್ರಜ್ಞಾನಗಳನ್ನು ಪಡೆದುಕೊಳ್ಳುವ ಪ್ರಯತ್ನಕ್ಕೆ ಇನ್ನೂ ದಶಕಗಳ ಕಾಲ ಹಿನ್ನಡೆಯುಂಟುಮಾಡುವಂತೆ ಆಗಿದೆ.
ಎಚ್ ಎಎಲ್ಗೆ ಉಂಟಾದ ನಷ್ಟ
ರದ್ದುಗೊಂಡ 126 ಯುದ್ಧ ವಿಮಾನಗಳಲ್ಲಿ 108 ವಿಮಾನಗಳು ಎಚ್ ಎಎಲ್ನಲ್ಲಿ ತಯಾರಾಗಬೇಕಿತ್ತು. ಆ ತಂತ್ರಜ್ಞಾನವನ್ನು ಹೊಂದಿರುವ ಎಚ್ ಎಎಲ್ಗೆ ಇದರಿಂದ ಹಾನಿಯಾಗಿದೆ. ಈ ಅಮೂಲ್ಯ ಸಾರ್ವಜನಿಕ ವಲಯದ ಉದ್ಯಮದಿಂದ ಪ್ರಯೋಜನ ಪಡೆಯುತ್ತಿರುವವರೆಂದರೆ ವಿದೇಶಿ ವಿಮಾನ ತಯಾರಕರು ಮತ್ತು ರಿಲಯನ್ಸ್ ಡಿಫೆನ್ಸ್ನಂತಹ ಭಾರತದ ಖಾಸಗಿ ಸಂಸ್ಥೆಗಳು.
|
ಆಗ್ರಹಿಸುವುದು ನಮ್ಮ ಹಕ್ಕು
ಭಾರತೀಯ ಪ್ರಜೆಗಳಾದ ನಾವು ನಾವು ಚುನಾಯಿಸಿದ ಸರ್ಕಾರವನ್ನು ಎಲ್ಲ ಪಾರದರ್ಶಕತೆ ಮತ್ತು ಹೊಣೆಗಾರಿಕೆಗಳಲ್ಲಿ ನಿಲ್ಲಿಸುವ ಹಕ್ಕನ್ನು ಹೊಂದಿದ್ದೇವೆ. ಸರ್ಕಾರವು ರಫೇಲ್ ಒಪ್ಪಂದದಲ್ಲಿ ನಡೆದುಕೊಂಡ ರೀತಿ ಸಮರ್ಥನೀಯವೇ ಎಂಬುದನ್ನು ಅರಿಯಲು ಜಂಟಿ ಸಂಸದೀಯ ಸಮಿತಿ ತನಿಖೆ ಸಹಾಯ ಮಾಡಲಿದೆ. ಹಿಂದೇಟು ಹಾಕದೆ ಇಂತಹ ತನಿಖೆ ನಡೆಸಲು ಸರ್ಕಾರ ಭಯ ಪಡುವ ಅಗತ್ಯವಿಲ್ಲ. ಇದರಿಂದ ರಫೇಲ್ ಒಪ್ಪಂದದ ಕುರಿತಾದ ಎಲ್ಲ ಅನುಮಾನಗಳಿಗೆ ತೆರೆ ಬೀಳಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ