ಕಾಂಗ್ರೆಸ್ ಅಧ್ಯಕ್ಷಗಿರಿಗೆ ಗಾಂಧಿ ಕುಟುಂಬದವರು ಬೇಡ
ನವದೆಹಲಿ, ಅ.25 : ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಕುರಿತು ವಿಶ್ಲೇಷಣೆ ನಡೆದು, ನಾಯಕತ್ವದ ಪ್ರಶ್ನೆ ಎದ್ದಿರುವಾಗಲೇ 'ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಅಧ್ಯಕ್ಷರಾಗಬೇಕು' ಎಂದು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಪಿ.ಚಿದಂಬರಂ ಈ ಕುರಿತು ಅಭಿಪ್ರಾಯಪಟ್ಟಿದ್ದು, ಸದ್ಯ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಗಟ್ಟಿ ಧ್ವನಿಯಲ್ಲಿ ಮಾತನಾಡುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸೇತರ ಶಕ್ತಿಗಳು ಹೆಚ್ಚು ಬಲಿಷ್ಠ ವಾಗುತ್ತಿದೆ ಎಂದು ಚಿದಂಬರಂ ತಿಳಿಸಿದ್ದಾರೆ. [ಮಕಾಡೆ ಮಲಗಿದ ಕಾಂಗ್ರೆಸ್ː ರಾಹುಲ್ ಗಾಂಧಿ ಎಲ್ಲಿ?]

ಕೆಳಹಂತದಿಂದ ಪಕ್ಷ ಸಂಘಟನೆ ಮಾಡಬೇಕು ಎಂಬ ವಾದಕ್ಕೆ ಬೆಂಬಲ ಸೂಚಿಸಿರುವ ಚಿದಂಬರಂ ಅವರು, ಭವಿಷ್ಯದಲ್ಲಿ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಗಳು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಬೇಕು ಎಂದು ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರಲ್ಲಿ ಈಗಲೂ ಧೈರ್ಯವಿದೆ ಎಂದು ಹೇಳಿರುವ ಅವರು, ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಅಧ್ಯಕ್ಷ ಪಟ್ಟಕೇರುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. [ನಾಯಕತ್ವದ ಬಗ್ಗೆ ತುಟಿಕ್-ಪಿಟಿಕ್ ಎನ್ನಬಾರದು]
ಕಾಂಗ್ರೆಸ್ ದೂಷಿಸಲು ಸಾಧ್ಯವಿಲ್ಲ : ಕಪ್ಪುಹಣದ ಕುರಿತು ಮಾಹಿತಿ ಮುಚ್ಚಿಡಲು ಕಾಂಗ್ರೆಸ್ ನಿಯಮ ರೂಪಿಸಿತ್ತು ಎಂಬ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಆರೋಪವನ್ನು ತಳ್ಳಿಹಾಕಿರುವ ಚಿದಂಬರಂ ಅವರು, ಇಂತಹ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ದೂಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಪ್ಪುಹಣದ ಮಾಹಿತಿ ಪ್ರಕಟಗೊಳಿಸುವುದು ಸುಪ್ರೀಂಕೋರ್ಟ್ಗೆ ಸೇರಿದ ವಿಷಯ. ವಿದೇಶಿ ಬ್ಯಾಂಕ್ಗಳು ನೀಡಿದ ಮಾಹಿತಿ ನಾನು ಹಣಕಾಸು ಸಚಿವನಾಗಿದ್ದಗಲೂ ನನಗೆ ತಿಳಿದಿರಲಿಲ್ಲ. ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಬಿಜೆಪಿ ಸತ್ಯವನ್ನು ಮುಚ್ಚಿಟ್ಟು ಪಕ್ಷವನ್ನು ದೂಷಿಸುತ್ತಿರುವುದು ಸರಿಯಲ್ಲಿ ಎಂದರು.












Click it and Unblock the Notifications