ಕಾಂಗ್ರೆಸ್ ಸರ್ವೋಚ್ಛ ಕುರ್ಚಿಯಲ್ಲಿ ರಾಹುಲ್ ಬದಲಿಗೆ ಕರ್ಚೀಫ್ ಹಾಕಿದ ಲೀಡರ್ ಯಾರು!?
ನವದೆಹಲಿ, ಆಗಸ್ಟ್ 30: ಅಖಿಲ ಭಾರತ ಕಾಂಗ್ರೆಸ್ ಕಮಿಟಿ(ಎಐಸಿಸಿ) ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಚುನಾವಣೆಯಲ್ಲಿ ರಾಹುಲ್ ಗಾಂಧಿಯ ಹೆಸರಿನ ಹೊರತಾಗಿ ಮತ್ತೊಬ್ಬ ನಾಯಕನ ಹೆಸರು ಕೇಳಿ ಬಂದಿದೆ. ಆ ಹೆಸರೇ ಪಕ್ಷದ ಹಿರಿಯ ನಾಯಕ ಶಶಿ ತರೂರ್.
ಕಾಂಗ್ರೆಸ್ಸಿನ ಹಿರಿಯ ನಾಯಕರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಶಶಿ ತರೂರ್, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ಆಂತರಿಕ ಮೂಲಗಳಿಂದ ತಿಳಿದು ಬಂದಿದೆ. ಈ ಕುರಿತು ಶಶಿ ತರೂರ್ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ, ಆದರೆ ಶೀಘ್ರದಲ್ಲೇ ತಮ್ಮ ತೀರ್ಮಾನ ಹೇಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ರಾಹುಲ್ ಸುತ್ತ 'ಸೈಕೊಫ್ಯಾಂಟ್ಸ್'; ಯಾರಿದ್ದಾರೆ ಆ ಟೀಮ್ನಲ್ಲಿ?
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸ್ಥಾನದಲ್ಲಿ ಕುಳಿತು ಪಕ್ಷದ ಚುಕ್ಕಾಣಿ ಹಿಡಿಯುವ ನಾಯಕನಿಗಾಗಿ ಕೈ ಪಡೆ ಹುಡುಕಾಟ ನಡೆಸಿದೆ.
ಕಾಂಗ್ರೆಸ್ಸಿನ ಸರ್ವೋಚ್ಛ ನಾಯಕನ ಕುರ್ಚಿಯಿಂದ ರಾಹುಲ್ ಗಾಂಧಿ ಕೊಂಚ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಮೂಲದ ಪ್ರಕಾರ, ಕಾಂಗ್ರೆಸ್ಸಿನ ಹಿರಿಯ ನಾಯಕರೆಲ್ಲ ರಾಹುಲ್ ಗಾಂಧಿ ಹೊರತಾಗಿ ರಾಷ್ಟ್ರೀಯ ಅಧ್ಯಕ್ಷರಾಗುವ ಮತ್ತೊಬ್ಬ ನಾಯಕರಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ ಶಶಿ ತರೂರ್ ಹೆಸರು ಹೇಗೆ ಗಾಳಿಯಲ್ಲಿ ತೂರಿ ಬಂದಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.
ಶಶಿ ತರೂರ್ ಬರೆದ ಆ ಲೇಖನದ ಇತಿಹಾಸವೇನು?
ಕಾಂಗ್ರೆಸ್ ಅಧ್ಯಕ್ಷರಾಗಿ ಟೋಪಿ ಹಾಕಿಕೊಳ್ಳುತ್ತಾರೆಯೇ ಇಲ್ಲವೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಶಶಿ ತರೂರ್ ನಿರಾಕರಿಸಿದ್ದಾರೆ. ಆದರೆ ಇಂಥದರ ಮಧ್ಯೆ ತಾವು ಮಲಯಾಳಂ ದೈನಿಕ ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ ಪಾರದರ್ಶಕ ಹಾಗೂ ನ್ಯಾಯಯುತ ರೀತಿಯಲ್ಲಿ ಚುನಾವಣೆ ನಡೆಸುವಂತೆ ಕರೆ ನೀಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ 12 ಸದಸ್ಯರ ಆಯ್ಕೆಗೂ ಚುನಾವಣೆಗಳನ್ನು ನಡೆಸುವಂತೆ ಸಲಹೆ ಕೊಟ್ಟಿದ್ದಾರೆ. ಈ ಲೇಖನದಲ್ಲಿ ಉಲ್ಲೇಖಿಸಿರುವ ಕೆಲವು ಅಂಶಗಳು ಹೊಸ ಅನುಮಾನಗಳನ್ನು ಹುಟ್ಟು ಹಾಕುವಂತಿದೆ.
"ಈ ಪ್ರಮುಖ ಸ್ಥಾನಗಳಿಂದ ಪಕ್ಷವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ನಿರ್ಧರಿಸಲು ಎಐಸಿಸಿ ಮತ್ತು ಪಿಸಿಸಿ ಪ್ರತಿನಿಧಿಗಳಿಂದ ಪಡೆದ ಪಕ್ಷದ ಸದಸ್ಯರಿಗೆ ಅವಕಾಶ ನೀಡಬೇಕು. ಹೀಗೆ ಒಳಬರುವ ನಾಯಕರ ತಂಡವನ್ನು ಕಾನೂನುಬದ್ಧಗೊಳಿಸಲು ಮತ್ತು ಪಕ್ಷವನ್ನು ಮುನ್ನಡೆಸಲು ವಿಶ್ವಾಸಾರ್ಹ ಜನಾದೇಶವನ್ನು ನೀಡಲು ಸಹಾಯ ಮಾಡುತ್ತದೆ," ಎಂದು ಶಶಿ ತರೂರ್ ಉಲ್ಲೇಖಿಸಿದ್ದಾರೆ.
AICC ಅಧ್ಯಕ್ಷ ಚುನಾವಣೆ ಕುರಿತು ಶಶಿ ತರೂರ್ ಹೇಳುವುದೇನು?
"ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಕಾಂಗ್ರೆಸ್ಗೆ ಕೆಟ್ಟದಾದ ಹಾಗೂ ಅಗತ್ಯವಿರುವ ಹೊಸದೊಂದು ಆರಂಭವನ್ನು ಒದಗಿಸುತ್ತದೆ," ಎಂದು ತಿರುವನಂತಪುರಂನ ಸಂಸದ ಶಶಿ ತರೂರ್ ಹೇಳಿದ್ದಾರೆ. ಈ ಚುನಾವಣೆಯು ಇತರ ಪ್ರಯೋಜನಕಾರಿ ಪರಿಣಾಮಗಳನ್ನು ಹೊಂದಿದೆ. ಉದಾಹರಣೆಗೆ, "ಬ್ರಿಟೀಷ್ ಕನ್ಸರ್ವೇಟಿವ್ ಪಕ್ಷದ ಇತ್ತೀಚಿನ ನಾಯಕತ್ವದ ರೇಸ್ ಸಮಯದಲ್ಲಿ ನಾವು ಜಾಗತಿಕ ಆಸಕ್ತಿಯನ್ನು ನೋಡಿದ್ದೇವೆ, 2019 ರಲ್ಲಿ ಥೆರೆಸಾ ಮೇ ಬದಲಿಗೆ 12 ಅಭ್ಯರ್ಥಿಗಳು ಸ್ಪರ್ಧಿಸಿದಾಗ ಬೋರಿಸ್ ಜಾನ್ಸನ್ ಅಗ್ರಸ್ಥಾನದಲ್ಲಿ ಹೊರಹೊಮ್ಮಿದರು, ನಾವು ಈಗಾಗಲೇ ಈ ವಿದ್ಯಮಾನವನ್ನು ನೋಡಿದ್ದೇವೆ," ಎಂಬುದನ್ನು ಒತ್ತಿ ಹೇಳಿದ್ದಾರೆ.
ಮತದಾರರನ್ನು ಸೆಳೆಯುವುದಕ್ಕೆ ಕಾಂಗ್ರೆಸ್ಸಿಗೆ ಹೊಸ ಪ್ರೇರಣೆ
ಬದಲಾವಣೆಯ ಗಾಳಿ ಬೀಸುತ್ತಿರುವ ಇಂಥ ಸನ್ನಿವೇಶದಲ್ಲಿ ಕಾಂಗ್ರೆಸ್ ಹೊಸ ಪ್ರಯತ್ನವನ್ನು ಮಾಡುವುದರ ಮೂಲಕ ಪಕ್ಷದ ಬಗ್ಗೆ ರಾಷ್ಟ್ರೀಯ ಹಿತಾಸಕ್ತಿ ಹೆಚ್ಚಾಗುತ್ತದೆ. ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಕಡೆಗೆ ಹೆಚ್ಚಿನ ಮತದಾರರನ್ನು ಪ್ರೇರೇಪಿಸುತ್ತದೆ. "ಈ ಕಾರಣಕ್ಕಾಗಿ, ಹಲವಾರು ಅಭ್ಯರ್ಥಿಗಳು ತಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಮುಂದೆ ಬರುತ್ತಾರೆ ಎಂದು ನಾನು ಭಾವಿಸುತ್ತೇನೆ. ಪಕ್ಷ ಮತ್ತು ರಾಷ್ಟ್ರಕ್ಕಾಗಿ ಅವರ ದೃಷ್ಟಿಕೋನಗಳನ್ನು ಮುಂದಿಡುವುದು ಖಂಡಿತವಾಗಿಯೂ ಸಾರ್ವಜನಿಕ ಹಿತಾಸಕ್ತಿಗಳನ್ನು ಪ್ರಚೋದಿಸುತ್ತದೆ. ಒಟ್ಟಾರೆಯಾಗಿ ಪಕ್ಷಕ್ಕೆ ಹೊಸತನದ ಅಗತ್ಯವಿದ್ದರೂ, ಅತ್ಯಂತ ತುರ್ತು ನಾಯಕತ್ವದ ಸ್ಥಾನವು ಸಹಜವಾಗಿಯೇ ಕಾಂಗ್ರೆಸ್ ಅಧ್ಯಕ್ಷರದ್ದು ಎಂದು ಶಶಿ ತರೂರ್ ಹೇಳಿದ್ದಾರೆ.
AICC ಚುಕ್ಕಾಣಿ ಹಿಡಿಯುವುದು ಸುಲಭದ ಕಾರ್ಯವಲ್ಲ
ಕಾಂಗ್ರೆಸ್ಸಿನ ಪ್ರಸ್ತುತ ಸ್ಥಿತಿ, ಬಿಕ್ಕಟ್ಟಿನ ಗ್ರಹಿಕೆ ಮತ್ತು ರಾಷ್ಟ್ರೀಯ ಚಿತ್ರಣವನ್ನು ಗಮನಿಸಿದರೆ, ಯಾರೇ ಅಧ್ಯಕ್ಷರ ಕವಚವನ್ನು ಸ್ವೀಕರಿಸುತ್ತಾರೋ ಅವರು ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಮತ್ತು ಮತದಾರರನ್ನು ಪ್ರೇರೇಪಿಸುವ ಎರಡೂ ಗುರಿಗಳನ್ನು ಸಾಧಿಸುವ ಅಗತ್ಯವಿದೆ. ನೂತನ ಅಧ್ಯಕ್ಷರು ಪಕ್ಷಕ್ಕೆ ಏನಾಗಿದೆ ಎಂಬುದನ್ನು ತಿಳಿದು ಸರಿಪಡಿಸಲು ಯೋಜನೆ ಹಾಕಿಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ಭಾರತದ ಬಗ್ಗೆ ದೂರದೃಷ್ಟಿ ಹೊಂದಿರಬೇಕು. ಯಾವುದೇ ರೀತಿಯ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ಪ್ರಕ್ರಿಯೆಯು ಸಮಸ್ಯೆಯನ್ನು ಇತ್ಯರ್ಥಗೊಳಿಸುವುದಕ್ಕೆ ಆರೋಗ್ಯಕರ ಮಾರ್ಗವಾಗಿದೆ. ಇದು ಒಳಬರುವ ಅಧ್ಯಕ್ಷರಿಗೆ ನೀಡಲಾಗುವ ಜನಾದೇಶವನ್ನು ಕಾನೂನುಬದ್ಧಗೊಳಿಸುತ್ತದೆ," ಎಂದು ಹೇಳಿದ್ದಾರೆ.
ಆಂತರಿಕ ಕ್ಷೋಭೆಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಭಾನುವಾರ ತನ್ನ ಅಧ್ಯಕ್ಷರ ಚುನಾವಣೆಯನ್ನು ಅಕ್ಟೋಬರ್ 17ರಂದು ನಡೆಸುವುದಾಗಿ ಘೋಷಿಸಿತು. ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ.
ಕಾಂಗ್ರೆಸ್ಸಿನಲ್ಲಿ "ಅಂದರ್ ಕಾ ಬಾತ್ ಕ್ಯಾ ಹೈ"?
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಹಲವು ನಾಯಕರು ರಾಹುಲ್ ಗಾಂಧಿಯನ್ನು ಪಕ್ಷದ ಮುಖ್ಯಸ್ಥರಾಗಿ ಅಧಿಕಾರಕ್ಕೆ ಮರಳುವಂತೆ ಸಾರ್ವಜನಿಕವಾಗಿ ಉತ್ತೇಜಿಸುತ್ತಿದ್ದಾರೆ. ಆದರೆ, ಈ ವಿಚಾರದಲ್ಲಿ ಅನಿಶ್ಚಿತತೆ ಮತ್ತು ಗೌಪ್ಯತೆ ಮುಂದುವರಿದಿದೆ. ರಾಹುಲ್ ಗಾಂಧಿಯು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾಗುವುದಿಲ್ಲ ಎಂಬ ತಮ್ಮ ನಿಲುವನ್ನು ಮುಂದುವರಿಸುತ್ತಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳೇ ಹೇಳುತ್ತಿವೆ.
ಬುಧವಾರ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಬಗ್ಗೆ ವರದಿಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ ಮತ್ತು ಪಕ್ಷದ ಆಡಳಿತವನ್ನು ಮತ್ತೆ ವಹಿಸಿಕೊಳ್ಳಲು ರಾಹುಲ್ ಗಾಂಧಿಯನ್ನು ಮನವೊಲಿಸಲು ಕೊನೆಯ ಕ್ಷಣದವರೆಗೂ ಪ್ರಯತ್ನಿಸಲಾಗುವುದು ಎಂದು ಹೇಳಿದರು.
2019ರಲ್ಲಿ ಟಾಟಾ.. ಬಾಯ್ ಬಾಯ್, ಗಯಾ ಎಂದಿದ್ದ ರಾಹುಲ್ ಗಾಂಧಿ
ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಸತತ ಎರಡನೇ ಬಾರಿ ಸೋಲು ಕಂಡ ನಂತರದಲ್ಲಿ ಅದರ ಹೊಣೆ ಹೊತ್ತುಕೊಂಡು ರಾಹುಲ್ ಗಾಂಧಿಯವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತದನಂತರದಲ್ಲಿ ಹಂಗಾಮಿ ಅಧ್ಯಕ್ಷರಾಗಿ ಪಕ್ಷದ ಆಡಳಿತವನ್ನು ಸೋನಿಯಾ ಗಾಂಧಿ ವಹಿಸಿಕೊಂಡಿದ್ದರು. ಇದರ ಮಧ್ಯೆ ಕಾಂಗ್ರೆಸ್ ನಾಯಕತ್ವದ ಬಗ್ಗೆ ಜಿ-23 ನಾಯಕರು ಬಂಡಾಯದ ಬಾವುಟ ಹಾರಿಸಿದ್ದರು. ಇದರಿಂದ ಒಂದು ಹಂತದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸ್ವತಃ ಸೋನಿಯಾ ಗಾಂಧಿಯವರೇ ಮುಂದಾಗಿದ್ದರೂ, ಅವರನ್ನು ಮುಂದುವರಿಸಲು ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿತ್ತು.