'ಭಾರತ್ ಬದಲು ಕಾಂಗ್ರೆಸ್ ಜೋಡೋ ಯಾತ್ರೆ ಆರಂಭಿಸಬೇಕು'- ಕಾಂಗ್ರೆಸ್ ತೊರೆದ ನಬಿ
ಹೊಸದಿಲ್ಲಿ, ಆಗಸ್ಟ್ 26: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಶುಕ್ರವಾರ ತನ್ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಪಕ್ಷದ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಐದು ಪುಟಗಳ ಪತ್ರವನ್ನು ನಾಯಕ ಗುಲಾಂ ನಬಿ ಆಜಾದ್ ನೀಡಿದ್ದಾರೆ. ಇದರಲ್ಲಿ ನಬಿ ಅವರು "ಭಾರವಾದ ಹೃದಯ" ದಿಂದ ತಮ್ಮ ರಾಜೀನಾಂಎಗೆ ಕಾರಣವನ್ನು ನೀಡಿದ್ದಾರೆ. 'ಭಾರತ್ ಜೋಡೋ ಯಾತ್ರೆ' ಆರಂಭಿಸುವ ಮುನ್ನ ನಾಯಕತ್ವ 'ಕಾಂಗ್ರೆಸ್ ಜೋಡೋ ಯಾತ್ರೆ' ಕೈಗೊಳ್ಳಬೇಕಿತ್ತು ಎಂದು ಹಿರಿಯ ನಾಯಕ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತಕ್ಕೆ ಯಾವುದು ಸರಿ ಎಂಬುದರ ಪರ ಹೋರಾಡಲು ಎಐಸಿಸಿಯನ್ನು ನಡೆಸುತ್ತಿರುವ ಕೂಟದ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಇಚ್ಛಾಶಕ್ತಿ ಮತ್ತು ಸಾಮರ್ಥ್ಯ ಎರಡನ್ನೂ ಕಳೆದುಕೊಂಡಿದೆ ಎಂದು ಪಕ್ಷ ಬದಲಾವಣೆ ಬಯಸುತ್ತಿರುವ ಜಿ-23 ಗುಂಪಿನ ಭಾಗವಾಗಿರುವ ಆಜಾದ್ ಹೇಳಿದ್ದಾರೆ. ಆಜಾದ್ ಅವರು ಕಾಂಗ್ರೆಸ್ನೊಳಗಿನ G23 ಗುಂಪಿನ ಪ್ರಮುಖ ಸದಸ್ಯರಾಗಿದ್ದಾರೆ, ಅವರು ನಾಯಕತ್ವವನ್ನು ಟೀಕಿಸಿದ್ದಾರೆ.
ಪಕ್ಷ ತೊರೆದ ಗುಲಾಂ ನಬಿ ಆಜಾದ್
ನೂತನ ಅಧ್ಯಕ್ಷರ ಆಯ್ಕೆಗೆ ಕಾಂಗ್ರೆಸ್ ಹೈಕಮಾಂಡ್ ಇತ್ತೀಚೆಗೆ ಒಪ್ಪಿಗೆ ನೀಡಿದೆ. ಇನ್ನೆರಡು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಜಿ-23 ಬಣದ ಅಸಮಾಧಾನಕ್ಕೆ ತೆರೆ ಬೀಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದಕ್ಕೂ ಮುನ್ನವೇ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿದೆ. ಶುಕ್ರವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ತೊರೆಯುವುದಾಗಿ ಘೋಷಿಸಿದರು. ಅವರು ಪಕ್ಷದ ಎಲ್ಲಾ ಸ್ಥಾನಗಳಿಗೆ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಮೊದಲಿನಿಂದಲೂ, ಆಜಾದ್ ಕಾಂಗ್ರೆಸ್ನ ಕೋಪಗೊಂಡ ಬಣವಾದ ಜಿ -23 ನ ಭಾಗವಾಗಿದ್ದರು.
'ಕಾಂಗ್ರೆಸ್ ಜೋಡೋ ಯಾತ್ರೆ' ಮಾಡಿ
ಗುಲಾಂ ನಬಿ ಆಜಾದ್ ಅವರು ಸೋನಿಯಾ ಗಾಂಧಿ ಅವರಿಗೆ 5 ಪುಟಗಳ ಪತ್ರವನ್ನು ಕಳುಹಿಸುವ ಮೂಲಕ ರಾಜೀನಾಮೆ ನೀಡಿದ್ದಾರೆ. ಪತ್ರದಲ್ಲಿ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನೊಂದಿಗಿನ ನನ್ನ ಅರ್ಧ ಶತಮಾನದ ಹಳೆಯ ಸಂಬಂಧವನ್ನು ಮುರಿಯಲು ನಿರ್ಧರಿಸಿದ್ದು ತುಂಬಾ ವಿಷಾದ ಮತ್ತು ಅತ್ಯಂತ ಭಾವನಾತ್ಮಕ ಹೃದಯದಿಂದ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಈಗ ಇಚ್ಛಾಶಕ್ತಿ ಮತ್ತು ಸಾಮರ್ಥ್ಯವನ್ನು ಕಳೆದುಕೊಂಡಿದೆ. ಇದೇ ವೇಳೆ ಪಕ್ಷದಲ್ಲಿ ಅನುಭವಿ ಹಾಗೂ ಹಿರಿಯ ನಾಯಕರನ್ನು ಬದಿಗೊತ್ತಿ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಪಕ್ಷ ತೊರೆಯಲು ನಿರ್ಧರಿಸಿದ್ದಾಗಿ ಪತ್ರದಲ್ಲಿ ಹೇಳಿಕೊಂಡಿದ್ದಾರೆ. ಈ ಹಿಂದೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಆಜಾದ್ ರಾಜೀನಾಮೆ ನೀಡಿದ್ದರು. 'ಭಾರತ್ ಜೋಡೋ ಯಾತ್ರೆ'ಗಿಂತ ಮೊದಲು 'ಕಾಂಗ್ರೆಸ್ ಜೋಡೋ ಯಾತ್ರೆ' ಆರಂಭಿಸಬೇಕು ಎಂದಿದ್ದಾರೆ.
'ಕೈ'ವಿರುದ್ಧ ಕೋಪಗೊಂಡವರ ಗುಂಪು
ಕಾಂಗ್ರೆಸ್ನ ವಿರುದ್ಧ ಕೋಪಗೊಂಡ ನಾಯಕರು ಜಿ -23 ಎಂಬ ಗುಂಪನ್ನು ರಚಿಸಿದ್ದಾರೆ. ಅವರು ಪಕ್ಷದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆಗೆ ಒತ್ತಾಯಿಸುತ್ತಿದ್ದಾರೆ. ಇದರಲ್ಲಿ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಆನಂದ್ ಶರ್ಮಾ ಮುಂತಾದ ಹಿರಿಯ ನಾಯಕರು ಸೇರಿದ್ದರು. ಆದರೆ, ಈಗ ಅದರ ಬಹುತೇಕ ನಾಯಕರು ಪಕ್ಷ ತೊರೆದಿದ್ದಾರೆ.
ಯಾತ್ರೆಗೆ ನಕ್ಷೆ ಬಿಡುಗಡೆಗೊಳಿಸಿದ ಕಾಂಗ್ರೆಸ್
ಕಾಂಗ್ರೆಸ್ ಪಕ್ಷವು ಭಾರತ ಜೋಡೋ ಯಾತ್ರೆಯ ನಕ್ಷೆಯನ್ನು ಬಿಡುಗಡೆಗೊಳಿಸಿದ್ದು, 3500 ಕಿಲೋಮೀಟರ್ಗಳು ಪ್ರಯಾಣ ಬೆಳೆಸಲು ನಿರ್ಧರಿಸಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಜೋಡೋ ಯಾತ್ರೆಯಲ್ಲಿ ಕನ್ಯಾಕುಮಾರಿ, ತಿರುವನಂತಪುರ, ಕೊಚ್ಚಿ, ಮೈಸೂರು, ಬಳ್ಳಾರಿ,ರಾಯಚೂರಿನಿಂದ ಪ್ರಾರಂಭಿಸಿ ಶ್ರೀನಗರಕ್ಕೆ ತಲುಪುವ ಮೂಲಕ ಯೋಜನೆ ಹಾಕಿಕೊಂಡಿದೆ. ಸೆಪ್ಟೆಂಬರ್ 7 ರಿಂದ ಆರಂಭವಾಗಲಿರುವ 'ಭಾರತ್ ಜೋಡೋ ಯಾತ್ರೆ'ಯ ಲೋಗೋ, ಘೋಷಣೆ ಹಾಗೂ ಭಿತ್ತಿಪತ್ರವನ್ನು ಕಾಂಗ್ರೆಸ್ ಪಕ್ಷ ಆಗಸ್ಟ್ 23 ಬಿಡುಗಡೆ ಮಾಡಿದೆ.