ಕಲ್ಲಿದ್ದಲು ಕೊರತೆ: ಮುಂಬರುವ ದಿನಗಳಲ್ಲಿ ವಿದ್ಯುತ್ ಅಭಾವ
ನವದೆಹಲಿ, ಮೇ 30: ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಅಗತ್ಯ ಪ್ರಮಾಣದ ಕಲ್ಲಿದ್ದಲಿನ ದಾಸ್ತಾನು ಇಲ್ಲದಿರುವುದರಿಂದ ಮುಂಬರುವ ಜುಲೈ-ಆಗಸ್ಟ್ ತಿಂಗಳಿನಲ್ಲಿ ಮತ್ತೊಮ್ಮೆ ವಿದ್ಯುತ್ ಸಮಸ್ಯೆಗೆ ಕಾರಣವಾಗಬಹುದು ಎಂದು ವರದಿಯಾಗಿದೆ. ಕೇಂದ್ರ ಸರ್ಕಾರದ ಇತ್ತೀಚಿನ ನಡೆಗಳು ಕಲ್ಲಿದ್ದಲಿನ ಕೊರತೆ ಉಂಟಾಗಿರುವುದನ್ನು ಸೂಚಿಸುತ್ತದೆ. ಇದೇ ಪರಿಸ್ಥಿತಿ ಮುಂದಿನ 6 ರಿಂದ 12 ತಿಂಗಳು ಮುಂದುವರಿಯುವ ಸಾಧ್ಯತೆಯಿದೆ ಎಂದೂ ಅಂದಾಜಿಸಲಾಗಿದೆ.
ಕಲ್ಲಿದ್ದಲು ಕೊರತೆಯ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿರುವ ಕೇಂದ್ರ ಇಂಧನ ಸಚಿವಾಲಯ, ಕಳೆದ ಎರಡು ವಾರಗಳಿಂದ ತನ್ನ ಕಲ್ಲಿದ್ದಲು ಪೂರೈಕೆದಾರರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದೆ.
ಕರ್ನಾಟಕಕ್ಕೆ ವರದಾನವಾಯ್ತು ವಿದ್ಯುತ್ ಬಿಕ್ಕಟ್ಟು, 2800 ಕೋಟಿ ಲಾಭ
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ದೇಶವು ಅತ್ಯಂತ ಕೆಟ್ಟ ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿದೆ. ಇದೇ ಸಂದರ್ಭದಲ್ಲಿ ಆಮದು ಮಾಡಿಕೊಂಡಿರುವ ಕಲ್ಲಿದ್ದಲಿನ ಬೆಲೆ ಕೂಡ ದಾಖಲೆಯ ಟನ್ಗೆ 300 ಡಾಲರ್ ಆಗಿದೆ.
ವಿದ್ಯುತ್ ಕಣ್ಣಾಮುಚ್ಚಾಲೆ: ಕಲ್ಲಿದ್ದಲು ಆಮದಿಗೆ ಕೋಲ್ ಇಂಡಿಯಾ ನಿರ್ಧಾರ
ಇಂಧನ ಸಚಿವಾಲಯದ ಮಾಹಿತಿ
ಆಮದು ಮಾಡಿಕೊಂಡ ಶೇ 10ರಷ್ಟು ಕಲ್ಲಿದ್ದಲನ್ನು ಸ್ಥಳೀಯ ಕಲ್ಲಿದ್ದಲಿನೊಂದಿಗೆ ಬಳಸಿಕೊಳ್ಳುವ ನಿರ್ದೇಶನದ ಮೇರೆಗೆ ಕೋಲ್ ಇಂಡಿಯಾ ಕಂಪನಿ, 2015ರಿಂದ ಇದೇ ಮೊದಲ ಬಾರಿಗೆ ಕಲ್ಲಿದ್ದಲ್ಲನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ.
"ಕೋಲ್ ಇಂಡಿಯಾ ಕಂಪನಿಯು ಸರ್ಕಾರದಿಂದ ಸರ್ಕಾರಕ್ಕೆ (ಜಿ2ಜಿ) ಆಧಾರದ ಮೇಲೆ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತದೆ. ಜೊತೆಗೆ ಮತ್ತು ರಾಜ್ಯ ಜನರೇಟರ್ಗಳು ಮತ್ತು ಸ್ವತಂತ್ರ ವಿದ್ಯುತ್ ಉತ್ಪಾದಕರ (IPPs) ಉಷ್ಣ ವಿದ್ಯುತ್ ಸ್ಥಾವರಗಳಿಗೆ ಸರಬರಾಜು ಮಾಡುತ್ತದೆ" ಎಂದು ಮೇ 28 ರಂದು ಹೊರಡಿಸಿರುವ ಪತ್ರದಲ್ಲಿ ಇಂಧನ ಸಚಿವಾಲಯ ಮಾಹಿತಿ ನೀಡಿದೆ.
ತಿಂಗಳಲ್ಲಿ ಎರಡನೇ ಬಾರಿಗೆ ಸೆಕ್ಷನ್ 11 ಜಾರಿಗೆ
ಮುಂದಿನ ವರ್ಷ ಮಾರ್ಚ್ವರೆಗೆ ಆಮದು ಮಾಡಿಕೊಂಡ ಕಲ್ಲಿದ್ದಲನ್ನು ಸ್ಥಳೀಯ ಕಲ್ಲಿದ್ದಲು ಪೂರೈಕೆಗಳೊಂದಿಗೆ ಮಿಶ್ರಣ ಮಾಡುವುದರಿಂದ ಉಂಟಾಗುವ ಹೆಚ್ಚಿನ ವೆಚ್ಚವನ್ನು ತುಂಬಲು 32 GW ಸಾಮರ್ಥ್ಯದ ದೇಶೀಯ ಕಲ್ಲಿದ್ದಲು ಆಧಾರಿತ ವಿದ್ಯುತ್ ಯೋಜನೆಗಳಿಗೆ ಪರಿಹಾರ ನೀಡಲು ಮೇ 26 ರಂದು ವಿದ್ಯುತ್ ಸಚಿವಾಲಯವು ತಿಂಗಳಲ್ಲಿ ಎರಡನೇ ಬಾರಿಗೆ ಸೆಕ್ಷನ್ 11 ಅನ್ನು ಜಾರಿಗೆ ತಂದಿದೆ.
2021ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ ಕೋಲ್ ಇಂಡಿಯಾ ಕಂಪನಿಯು 2021-22ನೇ ಹಣಕಾಸು ವರ್ಷದಲ್ಲಿ ದಾಖಲೆಯ 622.6 ಮಿಲಿಯನ್ ಟನ್ಗಳಷ್ಟು ಕಲ್ಲಿದ್ದಲು ಉತ್ಪಾದನೆಯನ್ನು ಮಾಡಿದ್ದು, ಶೇ. 4 ರಷ್ಟು ಏರಿಕೆ ಕಂಡಿದೆ
ಹೆಚ್ಚಿದ ಬೇಡಿಕೆ, ತಗ್ಗಿದ ಪೂರೈಕೆ
2021ನೇ ಹಣಕಾಸು ವರ್ಷದಲ್ಲಿ ಕಂಪನಿಯು 596.2 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ಮಾಡಿತ್ತು. ಹೀಗಿದ್ದರೂ, ಬಿಸಿಗಾಳಿಯಿಂದಾಗಿ ಹೆಚ್ಚಿದ ಬೇಡಿಕೆ, ಕೈಗಾರಿಕಾ ವಲಯದಲ್ಲಿನ ಹೆಚ್ಚಿದ ಬೇಡಿಕೆ ಹಾಗೂ ಆಮದು ಮಾಡಿಕೊಂಡ ಕಲ್ಲಿದ್ದಲನ್ನು ಬಳಸಲು ಸಾಧ್ಯವಾಗದ ಕಾರಣ ಕಲ್ಲಿದ್ದಲಿನ ಅಗತ್ಯ ಹೆಚ್ಚಾಗಿ ತಲೆದೋರಿದೆ. ಆದರೆ ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ.
ಅಷ್ಟೇ ಅಲ್ಲದೆ, ರೈಲು ರೇಕ್ಗಳ ಅಲಭ್ಯತೆಯಿಂದಾಗಿ ಸಾಗಣೆ ಸಮಸ್ಯೆಯು ಕೂಡ ತಲೆದೋರಿದೆ. ಇದರ ಪರಿಣಾಮವಾಗಿ, ಶೇ. 85ಕ್ಕಿಂತ ಅಧಿಕ ವಿದ್ಯುತ್ ಸ್ಥಾವರಗಳಲ್ಲಿ ಅತ್ಯಂತ ಕಡಿಮೆ ಕಲ್ಲಿದ್ದಲಿನ ದಾಸ್ತಾನು ಹೊಂದಿವೆ. ಸದ್ಯ, ಎಲ್ಲಾ ಸ್ಥಾವರಗಳಲ್ಲಿ ಕಲ್ಲಿದ್ದಲಿನ ದಾಸ್ತಾನು ಕೇವಲ 22,169 ಸಾವಿರ ಟನ್ಗಳಷ್ಟಿದೆ. ಆದರೆ, ದೈನಂದಿನ ಸರಾಸರಿ ಅವಶ್ಯಕತೆಯು 2747 ಸಾವಿರ ಟನ್ಗಳಷ್ಟಿದೆ. ಇದೇ ಮುಂದುವರಿದರೆ ಈ ದಾಸ್ತಾನು ಕೇವಲ 8 ರಿಂದ 9 ದಿನಗಳಿಗಷ್ಟೇ ಸಾಕಾಗುತ್ತದೆ.
Recommended Video
ದೇಶವನ್ನು ಕಾಡಲಿದೆ ವಿದ್ಯುತ್ ಸಮಸ್ಯೆ!
ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಅಗತ್ಯ ಪ್ರಮಾಣದ ಕಲ್ಲಿದ್ದಲಿನ ದಾಸ್ತಾನು ಇಲ್ಲದಿರುವುದು ಬರುವ ಜುಲೈ-ಆಗಸ್ಟ್ನಲ್ಲಿ ಮತ್ತೊಮ್ಮೆ ವಿದ್ಯುತ್ ಸಮಸ್ಯೆಗೆ ಕಾರಣವಾಗಬಹುದು ಎಂದು ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಆ್ಯಂಡ್ ಕ್ಲೀನ್ ಏರ್ಸ್ (ಸಿಆರ್ಇಎ) ಎಂಬ ಸಂಸ್ಥೆ ಹೇಳಿತ್ತು.
ಸಂಭಾವ್ಯ ಸಮಸ್ಯೆಯನ್ನು ಎದುರಿಸಲು ಕೂಡಲೇ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಅಗತ್ಯಪ್ರಮಾಣದ ಕಲ್ಲಿದ್ದಲನ್ನು ಪೂರೈಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ. ನೈರುತ್ಯ ಮುಂಗಾರಿನ ಆರಂಭವು ಕಲ್ಲಿದ್ದಲಿನ ಗಣಿಗಾರಿಕೆ ಹಾಗೂ ಸಾಗಣೆ ಮೇಲೆ ಪರಿಣಾಮ ಉಂಟುಮಾಡಲಿದೆ. ದೇಶದ ಸ್ಥಾವರಗಳಲ್ಲಿನ ದಾಸ್ತಾನು ಖಾಲಿಯಾಗುತ್ತಿರುವಂತೆಯೇ, ಕಲ್ಲಿದ್ದಲನ್ನು ಮರುಭರ್ತಿ ಮಾಡದೇ ಇದ್ದರೆ ದೇಶದಲ್ಲಿ ವಿದ್ಯುತ್ ಸಮಸ್ಯೆ ಕಾಡಲಿದೆ' ಎಂದೂ ಹೇಳಿದೆ.