ತಮ್ಮದೇ ಸ್ಟೈಲಲ್ಲಿ ಪಿಎಂ ಮೋದಿ ಹುಟ್ಟುಹಬ್ಬಕ್ಕೆ ಸಿದ್ದರಾಮಯ್ಯ ವಿಶ್
ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆ ಎಲ್ಲೆಡೆ ಶುಭಾಶಯಗಳ ಸುರಿಮಳೆ ಹರಿದಿದೆ. ವಿವಿಧ ಪಕ್ಷಗಳ ನಾಯಕರು ಪ್ರಧಾನಿ ಅವರ ಹುಟ್ಟುಹಬಕ್ಕೆ ಶುಭ ಕೋರಿದ್ದಾರೆ. ರಾಜಕೀಯವಾಗಿ ವಿರೋಧಿಗಳಾದರೂ ಇಂತಹ ಸಂದರ್ಭಗಳಲ್ಲಿ ಆತ್ಮೀಯತೆ ಸಾರುವುದು ರಾಜಕಾರಣದಲ್ಲಿನ ವಿಶೇಷ. ಅದರಂತೆ ಸಿಎಂ ಸಿದ್ದರಾಮಯ್ಯ ಅವರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ ಮಾಡಿದ್ದಾರೆ.
ಟ್ವಿಟರ್ನಲ್ಲಿ ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಸಿಎಂ ಸಿದ್ದರಾಮಯ್ಯ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಹಾರೈಸುತ್ತೇನೆ ಎಂದು ಪೋಸ್ಟ್ ಹಾಕಿದ್ದಾರೆ. ಮೋದಿ ಅವರಿಗೆ ಶೇಕ್ ಹ್ಯಾಂಡ್ ನೀಡುತ್ತಿರುವ ಫೋಟೋವನ್ನು ಸಿಎಂ ಹಂಚಿಕೊಂಡಿದ್ದಾರೆ.

ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ಸದಾ ಅನ್ಯಾಯ ಮಾಡುತ್ತಿದೆ ಎಂಬ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಮೋದಿ ಅವರೂ ಕರ್ನಾಟಕ ಸರ್ಕಾರವನ್ನು ಟೀಕಿಸುತ್ತಾರೆ. ಆದರೂ ಹುಟ್ಟುಹಬ್ಬಕ್ಕೆ ಪರಸ್ಪರ ಶುಭಾಶಯಗಳನ್ನು ಕೋರುವ ಮೂಲಕ ಗೌರವಿಸುವುದು ವಿಶೇಷ.
ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಪ್ರಧಾನಿ ಮೋದಿ ಅವರಿಗೆ ಶುಭಕೋರಿದ್ದಾರೆ. ವಿಶ್ವಮೆಚ್ಚಿದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರ ಜನ್ಮದಿನದ ಅಂಗವಾಗಿ ಶಿಕಾರಿಪುರದ ಆರಾಧ್ಯ ದೈವ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಪಕ್ಷದ ಮುಖಂಡರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿರುವುದಾಗಿ ವಿಜಯೇಂದ್ರ ತಿಳಿಸಿದ್ದಾರೆ.

ʼದೇಶದ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡು ಶ್ರಮಿಸುತ್ತಿರುವ ಸಂತ ಮನಸ್ಸಿನ ಶ್ರೇಷ್ಠ ಪ್ರಧಾನಿಗಳಿಗೆ ಉತ್ತಮ ಆಯುರಾರೋಗ್ಯ ಹಾಗೂ ದೇಶಸೇವೆಗೆ ಹೆಚ್ಚಿನ ಶಕ್ತಿಯನ್ನು ದೇವರುಗಳು ದಯಪಾಲಿಸಲಿʼ ಎಂದು ಪ್ರಾರ್ಥಿಸಿದ್ದಾರೆ. ಬಿಜೆಪಿ ಶಾಸಕ ಸಿ.ಎನ್.ಅಶ್ವತ್ಥ ನಾರಾಯಣ ಕೂಡ ಮಲ್ಲೇಶ್ವರ ಕ್ಷೇತ್ರದಾದ್ಯಂದ ಸಸಿಗಳನ್ನು ನೆಡುವ ಮೂಲಕ ಮೋದಿ ಅವರ ಹುಟ್ಟುಹಬ್ಬ ಆಚರಿಸಿದ್ದಾರೆ.

ಆರ್.ಅಶೋಕ್ ವ್ಯಂಗ್ಯ: ಇನ್ನು ಸಿದ್ದರಾಮಯ್ಯ ಅವರು ಶುಭಕೋರಿರುವ ಟ್ವೀಟ್ ಉಲ್ಲೇಖಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ. ʼಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೇಲೆ ಹೈಕಮಾಂಡ್ ನಾಯಕರಿಗಿರುವ ಅವಿಶ್ವಾಸ, ಅಪನಂಬಿಕೆ, ಅನುಮಾನಗಳಿಂದ ಅವರಿಗೆ ಎಷ್ಟು ಅಭದ್ರತೆ ಕಾಡುತ್ತಿದೆ ಎಂದರೆ ಪ್ರಧಾನಮಂತ್ರಿಗಳ ಹುಟ್ಟುಹಬ್ಬದ ದಿನದಂದು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಲೂ ಸಹ ಹಿಂಜರಿಯುತ್ತಿದ್ದಾರೆʼ ಎಂದು ವ್ಯಂಗ್ಯ ಮಾಡಿದ್ದಾರೆ.
ʼಕಾಂಗ್ರೆಸ್ ಹೈಕಮಾಂಡ್ ನಾಯಕಯರಿಗೆ ಎಲ್ಲಿಂದಲೋ ಬಂದ ಸಿದ್ದರಾಮಯ್ಯನವರ ಮೇಲೆ ಇರುವಷ್ಟು ನಂಬಿಕೆ, ವಿಶ್ವಾಸ, ಮನೆ ಮಗನ ರೀತಿ ದುಡಿಯುವ ಡಿ.ಕೆ.ಶಿವಕುಮಾರ್ ಅವರ ಮೇಲಿಲ್ಲ. ಇದು ಕಾಂಗ್ರೆಸ್ ಪಕ್ಷದ ವಿಪರ್ಯಾಸʼ ಎಂದು ಮಾತಿನ ಮೂಲಕ ತಿವಿದಿದ್ದಾರೆ. ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದ ನಿಷ್ಠ ಎಂದು ಹೇಳುವ ಮೂಲಕ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದ್ದಾರೆ.












Click it and Unblock the Notifications