ಕಂಡು ಕೇಳರಿಯದ ಹಾನಿ ಮಾಡುತ್ತೇವೆ: ಭಾರತಕ್ಕೆ ಚೀನಾ ಖಡಕ್ ಎಚ್ಚರಿಕೆ
ಶಾಂಘೈ, ಸೆ 2: ಲಡಾಖ್ ನಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿರುವ ಮಧ್ಯೆ, ಚೀನಾ, ಭಾರತಕ್ಕೆ ಖಡಕ್ ಎಚ್ಚರಿಕೆಯನ್ನು ನೀಡಿದೆ. ಕಳೆದ ಬಾರಿಯ ಯುದ್ದದಲ್ಲಿ ಆದ ಹಾನಿಗಿಂತಲೂ ಹೆಚ್ಚಿನ ನಷ್ಟವನ್ನು ಉಂಟು ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಪೂರ್ವ ಲಡಾಖ್ ಭಾಗದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳದ ಚೀನಾ ಪ್ರಚೋದನಾಕಾರಿ ಕ್ರಮದಲ್ಲಿ ತೊಡಗಿಸಿ ಕೊಂಡಿರುವುದನ್ನು ಭಾರತದ ವಿದೇಶಾಂಗ ಸಚಿವಾಲಯ ಸ್ಪಷ್ಟ ಪಡಿಸಿದೆ.
ಆದರೆ, ಭಾರತವೇ ಕಾಲುಕರೆದು ತಂಟೆಗೆ ಬರುತ್ತಿದೆ ಎಂದು ಆಪಾದಿಸುತ್ತಿರುವ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ, ಹಿಂದಿನ ಯುದ್ದದಲ್ಲಿ ಆದ ಹಾನಿಗಿಂತಲೂ ಹೆಚ್ಚು ಡ್ಯಾಮೇಜ್ ಮಾಡುತ್ತೇವೆ ಎಂದು ಹೇಳಿದೆ.
ಚೀನಾ ಸರಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ನಲ್ಲಿ ಭಾರತಕ್ಕೆ ಎಚ್ಚರಿಕೆಯ ಸಂಪಾದಕೀಯ ಬರೆಯಲಾಗಿದ್ದು, ಚೀನಾದ ಆರ್ಮಿ, ಭಾರತದ ಸೇನೆಗಿಂತ ಬಲಾಢ್ಯ ಎಂದು ಹೇಳಿಕೊಂಡಿದೆ.

ಕಳೆದ ಯುದ್ದದಲ್ಲಿ ಆದ ಹಾನಿಗಿಂತಲೂ ಹೆಚ್ಚು
"ಚೀನಾ ನೆರೆರಾಷ್ಟಗಳೊಂದಿಗೆ ಶಾಂತಿಯನ್ನು ಬಯಸುತ್ತದೆ. ಆದರೆ, ಭಾರತ ಗಡಿ ತಂಟೆಗೆ ಬಂದರೆ, ಕಳೆದ ಯುದ್ದದಲ್ಲಿ ಆದ ಹಾನಿಗಿಂತಲೂ ಹೆಚ್ಚಿನದನ್ನು ಮಾಡಲು ನಮ್ಮ ಮಿಲಿಟರಿ ಶಕ್ತವಾಗಿದೆ" ಎಂದು ಗ್ಲೋಬಲ್ ಟೈಮ್ಸ್ ಪತ್ರಿಕೆಯಲ್ಲಿ ಬರೆಯಲಾಗಿದೆ. ಗಡಿಯಲ್ಲಿ ಹೊಸ ಬೆಳವಣಿಗೆಯ ನಂತರ ಚೀನಾ ಈ ಎಚ್ಚರಿಕೆಯನ್ನು ನೀಡಿದೆ.

ವಾಷಿಂಗ್ಟನ್ ಮಧ್ಯಪ್ರವೇಶಕ್ಕೆ ಭಾರತ ಅವಕಾಶ ನೀಡಬಾರದು
ವಾಷಿಂಗ್ಟನ್ ಮಧ್ಯಪ್ರವೇಶಕ್ಕೆ ಭಾರತ ಅವಕಾಶ ನೀಡಬಾರದು. ಚೀನಾದ ವಿರುದ್ದ ಸ್ಪರ್ಧೆಗೆ ಇಳಿದರೆ, ಭಾರತಕ್ಕಿಂತ ಹೆಚ್ಚಿನ ಮಿಲಿಟರಿ ಶಕ್ತಿಯನ್ನು ನಾವು ಹೊಂದಿದ್ದೇವೆ. ಒಂದು ವೇಳೆ ಭಾರತ ಶಕ್ತಿ ಪ್ರದರ್ಶನಕ್ಕೆ ಇಳಿದರೆ, 1962ರಲ್ಲಿ ನಡೆದ ಯುದ್ದಕ್ಕಿಂತಲೂ ಹೆಚ್ಚಿನ ಹಾನಿಯನ್ನು ಭಾರತ ಎದುರಿಸಬೇಕಾಗುತ್ತದೆ"ಎಂದು ಬರೆಯಲಾಗಿದೆ.

ಚೀನಾ ಮತ್ತು ಭಾರತ ಮಿಲಿಟರಿ ಹಂತದಲ್ಲಿ ಮಾತುಕತೆ
ಆಗಸ್ಟ್ 29ರ ತಡರಾತ್ರಿ ಮತ್ತು ಆಗಸ್ಟ್ 30ರಂದು ಪ್ರಚೋದನಕಾರಿ ಮಿಲಿಟರಿ ತಂತ್ರಗಳಲ್ಲಿ ಚೀನಾ ತೊಡಗಿತ್ತು. ಚೀನಾ ಮತ್ತು ಭಾರತ ಮಿಲಿಟರಿ ಹಂತದಲ್ಲಿ ಮಾತುಕತೆ ನಡೆಸುತ್ತಿದ್ದರೂ ಚೀನಾ ಮತ್ತೆ ಪ್ರಚೋದನಕಾರಿ ಕ್ರಮದಲ್ಲಿ ತೊಡಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಆರೋಪಿಸಿತ್ತು.

ಅಮೆರಿಕಾ ಎಚ್ಚರಿಕೆ
ಚೀನಾವು ತನ್ನ ಯುದ್ಧ ಸ್ವರೂಪಿ ಬಾಂಬರ್ಗಳನ್ನು ಉನ್ನತೀಕರಣ ಮಾಡುವ ಪ್ರಕ್ರಿಯೆಯಲ್ಲಿ ಬೆಳವಣಿಗೆ ಸಾಧಿಸಿದೆ. ತನ್ನದೇ ವಿಭಿನ್ನ ವ್ಯವಸ್ಥೆಯಲ್ಲಿ ಪರಮಾಣು ಸಿಡಿತಲೆಗಳನ್ನು ಸಾಗಿಸುವ ತಂತ್ರಜ್ಞಾನವನ್ನು ಸಾಧಿಸಿದೆ ಎಂದು ಅಮೆರಿಕಾ ಎಚ್ಚರಿಕೆ ನೀಡಿದೆ.












Click it and Unblock the Notifications