ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್ ನೆರವು
ನವದೆಹಲಿ, ಮೇ 29: ಕೊರೊನಾ ಸೋಂಕಿನ ಕಾರಣವಾಗಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್ ಮೂಲಕ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಶನಿವಾರ ಘೋಷಣೆ ಮಾಡಿದೆ.
ಶನಿವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಅನಾಥರಾದ ಮಕ್ಕಳಿಗೆ 18 ವರ್ಷ ತುಂಬುತ್ತಲೇ ಪ್ರತಿ ತಿಂಗಳು ಸ್ಟೈಫಂಡ್ ನೀಡಲಾಗುವುದು. 23 ವರ್ಷ ತುಂಬಿದ ನಂತರ ಪಿಎಂ ಕೇರ್ಸ್ನಿಂದ 10 ಲಕ್ಷ ರೂಪಾಯಿ ನೆರವು ನೀಡಲಾಗುವುದು ಎಂದು ಹೇಳಿದೆ.

ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಉನ್ನತ ಶಿಕ್ಷಣ ಪಡೆಯಲು ಬಯಸುವ ಮಕ್ಕಳಿಗೆ ಶಿಕ್ಷಣ ಸಾಲ ನೀಡಲಾಗುವುದು. ಅದರ ಬಡ್ಡಿಯನ್ನು ಕೇಂದ್ರ ಸರ್ಕಾರ ಪಾವತಿ ಮಾಡಲಿದೆ ಎಂದು ವಿವರಿಸಲಾಗಿದೆ.
ಆಯುಷ್ಮಾನ್ ಭಾರತ್ ಅಡಿಯಲ್ಲಿ ಮಕ್ಕಳಿಗೆ 18 ವರ್ಷ ಆಗುವವರೆಗೆ ಐದು ಲಕ್ಷದ ಆರೋಗ್ಯ ವಿಮೆ ಸೌಲಭ್ಯ ನೀಡಲಾಗುವುದು. ಅದರ ಮೊತ್ತವನ್ನು ಪಿಎಂ ಕೇರ್ಸ್ ಒದಗಿಸಲಿದೆ.
ಕೊರೊನಾ ಸಾಂಕ್ರಾಮಿಕ ಕಾರಣವಾಗಿ ದೇಶದಲ್ಲಿ 577 ಮಕ್ಕಳು ಅನಾಥರಾಗಿದ್ದಾರೆ ಎಂದು ಈಚೆಗೆ ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದರು.
ಸುಪ್ರೀಂ ಕೋರ್ಟ್ ಕೂಡ ಶುಕ್ರವಾರ, ಕೊರೊನಾದಿಂದ ಅನಾಥರಾದ ಮಕ್ಕಳ ನೆರವಿಗೆ ನಿಲ್ಲಿ. ಅವರ ನೋವುಗಳನ್ನು ಅರ್ಥ ಮಾಡಿಕೊಂಡು ಸಹಾಯ ಮಾಡಿ. ಅವರ ಭವಿಷ್ಯವನ್ನು ಗಟ್ಟಿಗೊಳಿಸಿ ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು.
"ಮಕ್ಕಳು ನಮ್ಮ ದೇಶದ ಭವಿಷ್ಯ. ಮಕ್ಕಳಿಗೆ ಬೆಂಬಲ ನೀಡಲು ಹಾಗೂ ಅವರನ್ನು ರಕ್ಷಿಸಲು ಎಲ್ಲ ಪ್ರಯತ್ನವನ್ನೂ ಮಾಡಬೇಕು. ಅವರಿಗೆ ಉಜ್ವಲ ಭವಿಷ್ಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯ" ಎಂದು ಮೋದಿ ಸಭೆ ವೇಳೆ ತಿಳಿಸಿದರು.












Click it and Unblock the Notifications