ಒಂದು ಕೆಲಸ ಸಿಕ್ಕರೆ ಸಾಕಪ್ಪ ಅಂತಾರೆ, ಆದ್ರೆ 23 ವರ್ಷದ ಈಕೆ ಪಡೆದಿದ್ದು 19 ಸರಕಾರಿ ನೌಕರಿ ಆಫರ್ಸ್
ಕೇವಲ ಒಂದೇ ಒಂದು ಸರ್ಕಾರಿ ಉದ್ಯೋಗ ದೊರೆತರೆ ಸಾಕಪ್ಪ ಎಂದು ಬೇಡಿಕೊಳ್ಳುತ್ತಿರುವ ಲಕ್ಷಾಂತರ ಯುವಕ-ಯುವತಿಯರ ನಡುವೆ ಈ ಯುವತಿಯ ಸಾಧನೆ ನಿಜಕ್ಕೂ ಅದ್ಭುತ. ದೇಶದಲ್ಲಿ ನಿರುದ್ಯೋಗ ತಾಂಡವ ಆಡುತ್ತಿರುವ ಈ ಸಂದರ್ಭದಲ್ಲಿ ಸಾಧಿಸುವ ಹಠವಿದ್ದರೆ ಮತ್ತು ಸಮಯದ ಸರಿಯಾಗಿ ಸದ್ಬಳಕೆ ಮಾಡಿಕೊಂಡರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶ ಬಂದ ನಂತರ ಹೆಚ್ಚಿನ ಅಭ್ಯರ್ಥಿಗಳು ಸುಮ್ಮನೆ ಕುಳಿತುಕೊಳ್ಳುತ್ತಾರೆ ಅಥವಾ ವಿಶ್ರಾಂತಿ ಪಡೆಯುತ್ತಾರೆ. ಆದರೆ, ಈ ಯುವತಿ ಮಾತ್ರ ಫಲಿತಾಂಶಕ್ಕಾಗಿ ಕಾಯುತ್ತಾ ಸಮಯ ವ್ಯರ್ಥ ಮಾಡದೆ, ಮುಂದಿನ ಅವಕಾಶಕ್ಕಾಗಿ ನಿರಂತರವಾಗಿ ಓದುತ್ತಲೇ ಇದ್ದರು.
ಹೌದು, ಈ ಯಶೋಗಾಥೆ ಛತ್ತೀಸ್ಗಢದ ರಾಯಪುರ ಸಮೀಪದ ತಿಲ್ಡಾ ನಿಯೋರಾ ಮೂಲದ 23 ವರ್ಷದ ಚಾರು ಪಾಂಡೆ ಅವರದ್ದು. ಅವರ ಈ ಸಾಧನೆ ಇಂದು ದೇಶದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಅತಿ ದೊಡ್ಡ ಪ್ರೇರಣೆಯಾಗಿ. ಸಾವಿರಾರು ಅಭ್ಯರ್ಥಿಗಳು ಪರೀಕ್ಷೆಯ ಫಲಿತಾಂಶದ ಪುಟಗಳನ್ನು ಆತಂಕದಿಂದ ರಿಫ್ರೆಶ್ ಮಾಡುತ್ತಾ ಕುಳಿತಿದ್ದಾಗ, ಚಾರು ಮಾತ್ರ ಈಗಾಗಲೇ ತನ್ನ ಮುಂದಿನ ಪರೀಕ್ಷೆಯ ತಯಾರಿಯಲ್ಲಿ ಮುಳುಗಿದ್ದರು. ಫಲಿತಾಂಶ ಏನೇ ಬರಲಿ, ಒಳ್ಳೆಯದಾಗಲಿ ಅಥವಾ ಕೆಟ್ಟದಾಗಲಿ, ಸಮಯವನ್ನು ವ್ಯರ್ಥ ಮಾಡುವುದು ತಪ್ಪು ಎಂದು ಅವರು ದೃಢವಾಗಿ ನಂಬಿದ್ದರು. ಚಾರು ಅವರ ಈ ಯೋಚನಾ ಲಹರಿಯೇ ಇಂದು ಅವರ ಇಡೀ ಜೀವನವನ್ನು ಬದಲಾಯಿಸಿದೆ.

ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಚಾರು, ಕೇವಲ ಒಂದು ಸ್ಥಿರವಾದ ಸರ್ಕಾರಿ ಉದ್ಯೋಗವನ್ನು ಪಡೆಯುವ ಏಕೈಕ ಗುರಿಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯನ್ನು ಪ್ರಾರಂಭಿಸಿದ್ದರು. ಆಕೆ ಶಿಕ್ಷಕಿಯಾಗಬೇಕೆಂಬುದು ಅವರ ಕುಟುಂಬದವರೆಲ್ಲರ ಆಸೆಯಾಗಿತ್ತು. ಆದರೆ ಚಾರು ಮಾತ್ರ ಅದಕ್ಕಿಂತ ಭಿನ್ನವಾದ ಹಾದಿಯನ್ನು ಆರಿಸಿಕೊಂಡರು ಮತ್ತು ಸವಾಲಿನಿಂದ ಕೂಡಿರುವ ಸರ್ಕಾರಿ ಪರೀಕ್ಷೆಗಳ ಜಗತ್ತಿಗೆ ತಮ್ಮನ್ನು ತಾವು ಸಂಪೂರ್ಣವಾಗಿ ಮುಡುಪಾಗಿಟ್ಟುಕೊಂಡರು.
ಅದರ ನಂತರ ನಡೆದದ್ದು ಮಾತ್ರ ನಿಜಕ್ಕೂ ಒಂದು ಅದ್ಭುತ ಇತಿಹಾಸ. ಚಾರು ಅವರಿಗೆ ಒಂದು ಪರೀಕ್ಷೆಯಲ್ಲಿ ಯಶಸ್ಸು ಸಿಗುತ್ತಿದ್ದಂತೆ ಅವರ ಸಿದ್ಧತೆ ನಿಲ್ಲಲಿಲ್ಲ. ಕೇವಲ ಕೆಲವು ವರ್ಷಗಳ ಅವಧಿಯಲ್ಲಿ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ 19 ವಿವಿಧ ಸರ್ಕಾರಿ ನೇಮಕಾತಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪಾಸ್ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ.
ಇವುಗಳಲ್ಲಿ ದೇಶದ ಪ್ರಮುಖ ಪರೀಕ್ಷೆಗಳಾದ ಎಸ್ಎಸ್ಸಿ ಸಿಜಿಎಲ್, ಎಸ್ಎಸ್ಸಿ ಸಿಎಚ್ಎಸ್ಎಲ್ , ಎಸ್ಎಸ್ಸಿ ಎಂಟಿಎಸ್, ಎಸ್ಎಸ್ಸಿ ಜಿಡಿ, ಎಸ್ಎಸ್ಸಿ ಸಿಪಿಒ, ಎಸ್ಬಿಐ ಪಿಒ, ಎಸ್ಬಿಐ ಕ್ಲರ್ಕ್, ಐಬಿಪಿಎಸ್ ಪಿಒ, ಐಬಿಪಿಎಸ್ ಕ್ಲರ್ಕ್, ಆರ್ಆರ್ಬಿ ಎನ್ಟಿಪಿಸಿ, ಆರ್ಆರ್ಬಿ ಗ್ರೂಪ್ ಡಿ, ದೆಹಲಿ ಪೊಲೀಸ್, ಮತ್ತು ಛತ್ತೀಸ್ಗಢ ಎಸ್ಐ ಸೇರಿದಂತೆ ಹಲವಾರು ಪರೀಕ್ಷೆಗಳು ಸೇರಿವೆ.
ಈ ಸಾಧನೆ ಕುರಿತು ಚಾರು ಏನಂತಾರೆ?
"ನಾನು 19 ಪರೀಕ್ಷೆಗಳನ್ನು ಪಾಸ್ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಒಂದು ಒಳ್ಳೆಯ ಸರ್ಕಾರಿ ಕೆಲಸವನ್ನು ಪಡೆಯುವುದು ಮಾತ್ರ ನನ್ನ ಏಕೈಕ ಗುರಿಯಾಗಿತ್ತು. ನನ್ನ ಈ ಸಾಧನೆಗೆ ಅತ್ಯಂತ ಪ್ರಮುಖ ಕಾರಣವೆಂದರೆ ಅದು ಸಮಯ ನಿರ್ವಹಣೆ " ಎಂದು ಚಾರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಪ್ರಸ್ತುತ ಚಾರು ಪಾಂಡೆ ಅವರು ಭಾರತದ ಕಾಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಆಡಿಟ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಅಸಾಧಾರಣ ಸಾಧನೆಯನ್ನು ಗುರುತಿಸಿರುವ ಭಾರತ ಸರ್ಕಾರ, ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗುವ ಪ್ರತಿಷ್ಠಿತ 'ಅಟ್ ಹೋಮ್' ಸಮಾರಂಭದಲ್ಲಿ ಭಾಗವಹಿಸಿ ಗೌರವ ಸ್ವೀಕರಿಸಲು ಅವರಿಗೆ ವಿಶೇಷ ಆಹ್ವಾನವನ್ನು ನೀಡಿದೆ. ಕಠಿಣ ಪರಿಶ್ರಮಕ್ಕೆ ಯಾವುದೇ ಪರ್ಯಾಯವಿಲ್ಲ ಎಂಬುದನ್ನು ಚಾರು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.














Click it and Unblock the Notifications