ಭೂಪೇಶ್ ಬಘೇಲ್ ಛತ್ತೀಸ್ ಗಢದ ಮುಖ್ಯಮಂತ್ರಿ, ರೈತರ ಸಾಲ ಮನ್ನಾ ಮೊದಲ ಘೋಷಣೆ
ರಾಯ್ ಪುರ್, ಡಿಸೆಂಬರ್ 16: ಭೂಪೇಶ್ ಬಘೇಲ್ ಛತ್ತೀಸ್ ಗಢದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಐದು ರಾಜ್ಯಗಳ ಚುನಾವಣೆ ಫಲಿತಾಂಶ ಬಂದ ನಂತರ ಛತ್ತೀಸ್ ಗಢದಲ್ಲಿ ಮುಖ್ಯಮಂತ್ರಿಯ ಆಯ್ಕೆಯನ್ನು ಕಾಂಗ್ರೆಸ್ ಮಾಡಿದೆ.
ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ ಬಿಜೆಪಿಯಿಂದ ಅಧಿಕಾರದ ಹಿಡಿತ ಕಸಿಯುವಲ್ಲಿ ಕಾಂಗ್ರೆಸ್ ಸಫಲವಾಗಿತ್ತು. ಬಘೇಲ್ ಸೇರಿದಂತೆ ಇತರ ಮೂವರು ಆಕಾಂಕ್ಷಿಗಳು ಶನಿವಾರದಂದು ನವ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಆಗಿದ್ದರು.
ಟಿ.ಎಸ್.ಸಿಂಗ್ ದೇವ್, ತಾಮ್ರಧ್ವಜ್ ಸಾಹು, ಭೂಪೇಶ್ ಬಘೇಲ್ ಹಾಗೂ ಚರಣ್ ದಾಸ್ ಮಹಂತ್ ಈ ನಾಲ್ವರು ಆಕಾಂಕ್ಷಿಗಳ ಜತೆಗೆ ರಾಹುಲ್ ಗಾಂಧಿ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಬಘೇಲ್ ಮತ್ತಿತರ ನಾಯಕರ ಫೋಟೋಗಳನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ರಾಜಸ್ತಾನ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶದಲ್ಲಿ ಸೋಮವಾರದಂದು ಕಾಂಗ್ರೆಸ್ ನ ಮುಖ್ಯಮಂತ್ರಿಗಳು ಅಧಿಕಾರ ಸ್ವೀಕರಿಸಲಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಪಕ್ಷಗಳ ಬಲಪ್ರದರ್ಶನಕ್ಕೆ ವೇದಿಕೆ ಆಗಲಿದೆ. ರಾಹುಲ್ ಗಾಂಧಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಛತ್ತೀಸ್ ಗಢದ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲನೇ ಕೆಲಸ ರೈತರ ಸಾಲ ಮನ್ನಾ ಮಾಡುವುದು ಎಂದು ಹೇಳಲಾಗಿತ್ತು. ದೊಡ್ಡ ಮಟ್ಟದ ಗೆಲುವು ದೊರಕಿಸಿಕೊಟ್ಟಿದ್ದಕ್ಕೆ ಧನ್ಯವಾದ ಹೇಳುವ ದ್ಯೋತಕವಾಗಿ ಮೊದಲನೆಯದಾಗಿ ರೈತರ ಸಾಲ ಮನ್ನಾ ಘೋಷಣೆಗೆ ಸಹಿ ಮಾಡಲಾಗುತ್ತದೆ ಎನ್ನಲಾಗುತ್ತಿದೆ.












Click it and Unblock the Notifications