ಚಾರ್ ಧಾಮ್ ಯಾತ್ರೆ: 39 ಯಾತ್ರಾರ್ಥಿಗಳು ಸಾವು
ಡೆಹ್ರಾಡೂನ್ ಮೇ 16: 'ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಸಾಮಾನ್ಯ ಖಾಯಿಲೆ'ಗಳಿಂದ ಇದುವರೆಗೆ ಚಾರ್ ಧಾಮ್ ಯಾತ್ರೆಯ ಮಾರ್ಗದಲ್ಲಿ ಕನಿಷ್ಠ 39 ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ಉತ್ತರಾಖಂಡದ ಮಹಾನಿರ್ದೇಶಕ ಡಾ. ಶೈಲ್ಜಾ ಭಟ್ ಸೋಮವಾರ ಮಾಹಿತಿ ನೀಡಿದ್ದಾರೆ. ಹೀಗಾಗಿ ವೈದ್ಯಕೀಯವಾಗಿ ಅನರ್ಹವಾಗಿರುವ ಮತ್ತು ಯಾವುದೇ ರೀತಿಯ ದೈಹಿಕ ಖಾಯಿಲೆ ಇರುವ ಯಾತ್ರಾರ್ಥಿಗಳು ಚಾರ್ಧಾಮ್ ಯಾತ್ರೆಗೆ ಪ್ರಯಾಣಿಸದಂತೆ ಸಲಹೆ ನೀಡಿದರು.
ಕಳೆದ ವಾರ ಉತ್ತರಾಖಂಡ ಸರ್ಕಾರ ಚಾರ್ ಧಾಮ್ ಯಾತ್ರಾರ್ಥಿಗಳಿಗೆ ಅವರು ಹಿಮಾಲಯ ದೇವಾಲಯಗಳಿಗೆ ಪ್ರಯಾಸಕರ ಚಾರಣವನ್ನು ಪ್ರಾರಂಭಿಸುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ಸಲಹೆಯನ್ನು ನೀಡಿತು. ಯಾವುದೇ ಸಾಂಕ್ರಾಮಿಕ ನಿರ್ಬಂಧಗಳಿಲ್ಲದ ಕಾರಣ ನಿರೀಕ್ಷೆಗೂ ಮೀರಿದ ಜನ ಚಾರ್ಧಾಮ್ ಯಾತ್ರೆಗೆ ಆಗಮಿಸುತ್ತಿದ್ದು, ಯಾತ್ರಾರ್ಥಿಗಳು ಯಾತ್ರೆಗೂ ಮುಂಚಿತವಾಗಿ ನೋಂದಾಯಿಸಿಕೊಳ್ಳುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ.

"ಹೃದಯ ಕಾಯಿಲೆಯಿಂದ ಬಳಲುತ್ತಿರುವವರು ಜಾಗರೂಕರಾಗಿರಬೇಕು ಮತ್ತು ಪ್ರಯಾಣವನ್ನು ಪ್ರಾರಂಭಿಸುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು. ಅಮರನಾಥ ಯಾತ್ರೆಯ ಮಾದರಿಯಲ್ಲಿ ವೈದ್ಯಕೀಯ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಬೇಕು, ಇದರಿಂದ ದೈಹಿಕವಾಗಿ ಸದೃಢರಾಗಿರುವವರು ಮಾತ್ರ ಯಾತ್ರೆಗೆ ತೆರಳುತ್ತಾರೆ" ಎಂದು ಹಿರಿಯ ಹೃದ್ರೋಗ ತಜ್ಞ ಯೋಗೇಂದ್ರ ಸಿಂಗ್ ತಿಳಿಸಿದ್ದಾರೆ.

ಯಾತ್ರಾರ್ಥಿಗಳು ಪ್ರಯಾಣವನ್ನು ಕೈಗೊಳ್ಳುವ ಮೊದಲು ಎತ್ತರದ ಪ್ರದೇಶಗಳಿಗೆ ಒಗ್ಗಿಕೊಳ್ಳಲು ಕನಿಷ್ಠ 24 ಗಂಟೆಗಳ ಸಮಯವನ್ನು ನೀಡುವಂತೆ ಸಲಹೆ ನೀಡಲಾಗಿದೆ. ಏಕೆಂದರೆ ಬಯಲು ಪ್ರದೇಶಗಳಿಂದ ಎತ್ತರದ ಚಳಿ ಗಾಳಿ ಪ್ರದೇಶಗಳಿಗೆ ಥಟ್ಟನೆ ಬರುವುದು ಅಪಾಯಕಾರಿ ಎಂದಿದ್ದಾರೆ.

ಪರಿಷ್ಕೃತ ಆದೇಶದ ಪ್ರಕಾರ ಪ್ರತಿದಿನ ಗಂಗೋತ್ರಿಗೆ 8 ಸಾವಿರ, ಯಮುನೋತ್ರಿಯಲ್ಲಿ 5 ಸಾವಿರ, ಕೇದಾರನಾಥದಲ್ಲಿ 13 ಸಾವಿರ ಮತ್ತು ಬದರಿನಾಥಕ್ಕೆ 16 ಸಾವಿರ ಯಾತ್ರಾರ್ಥಿಗಳು ಭೇಟಿ ನೀಡಬಹುದಾಗಿದೆ. ಆದರೆ, ಈ ಹಿಂದೆ ನೀಡಿದ ಸೂಚನೆಯಂತೆ ದರ್ಶನ ಆಗುತ್ತಿಲ್ಲ. ಧಾಮಗಳಲ್ಲಿ ಸೇರುವ ಜನಸಮೂಹದ ಪ್ರಕಾರ, ದರ್ಶನಕ್ಕೆ ಮಿತಿಯನ್ನು ನಿಗದಿಪಡಿಸುವುದು ಸುಲಭವಲ್ಲ. ಪೊಲೀಸರ ಪರವಾಗಿ ಸಂಖ್ಯೆ ಹೆಚ್ಚಾಗಿರುವುದರಿಂದ ನೋಂದಣಿ ಇಲ್ಲದೆ ಹೋಗುವ ಪ್ರಯಾಣಿಕರನ್ನು ಚೆಕ್ಪೋಸ್ಟ್ನಲ್ಲಿಯೇ ನಿಲ್ಲಿಸುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಜನಸಂದಣಿಯನ್ನು ಗಮನಿಸಿದರೆ, ಪ್ರಸ್ತುತ ಚಾರ್ಧಾಮ್ನಲ್ಲಿನ ಪ್ರಯಾಣವು ಆಡಳಿತ ಮತ್ತು ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂಬುದು ಸ್ಪಷ್ಟವಾಗಿದೆ.












Click it and Unblock the Notifications