Chandrayaan-3: ಭಾರತದ ಕನಸು ನನಸಾಗಲು ಇನ್ನೊಂದು ಹೆಜ್ಜೆ ಬಾಕಿ!
ಭಾರತದ ಹೆಮ್ಮೆಯ ಯೋಜನೆ ಬಹುತೇಕ ಅಂತಿಮ ಹಂತವನ್ನು ತಲುಪುತ್ತಿದೆ. ಅದ್ರಲ್ಲೂ 'ಚಂದ್ರಯಾನ-3' ಕ್ಷಣಕ್ಷಣಕ್ಕೂ ಚಂದ್ರನ ಸಮೀಪಕ್ಕೆ ಹೋಗುತ್ತಿದ್ದು, ನಮ್ಮ ಗುರಿಯನ್ನು ತಲುಪಲು ಇನ್ನೊಂದೆರಡು ಹೆಜ್ಜೆ ಮಾತ್ರ ಬಾಕಿ ಉಳಿದಿದೆ. ಕೆಲವೇ ದಿನಗಳಲ್ಲಿ ಚಂದ್ರನ ಮೇಲೆ ಭಾರತದ ಹೆಗ್ಗುರುತು ಮೂಡಲಿದ್ದು, ಇಸ್ರೋ ಸಂಸ್ಥೆ ತನ್ನ ಹಾದಿಯಲ್ಲಿ ಇದೀಗ ಮತ್ತೆ ದಿಗ್ವಿಜಯ ಸಾಧಿಸಿದೆ.
ಹೌದು, ಭೂಮಿಯ ಕಕ್ಷೆಯಲ್ಲಿ ಪರಿಭ್ರಮಿಸುತ್ತಿರುವ 'ಚಂದ್ರಯಾನ-3' ಬಾಹ್ಯಾಕಾಶ ನೌಕೆ ಕಕ್ಷೆ ಬದಲಾಗಿದೆ. ಹೀಗೆ ನೌಕೆ ಕಕ್ಷೆ ಬದಲಿಸುವ ನಾಲ್ಕನೇ ಹಂತದ ಪ್ರಕ್ರಿಯೆ ಸಕ್ಸಸ್ ಆಗಿದೆ. ಈ ಮೂಲಕ ಚಂದ್ರನ ಕಕ್ಷೆ ಪ್ರವೇಶಿಸಲು ಇನ್ನೊಂದು ಹಂತವಷ್ಟೇ ಬಾಕಿ ಉಳಿದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆ ಮಾಹಿತಿ ನೀಡಿದೆ. ಅಂದಹಾಗೆ ಇಸ್ರೋ ಸಂಸ್ಥೆಯ ಟೆಲಿಮೆಟ್ರಿ, ಟ್ರ್ಯಾಕಿಂಗ್ & ಕಮಾಂಡ್ ನೆಟ್ವರ್ಕ್ ಕೇಂದ್ರದಿಂದ ಚಂದ್ರಯಾನ-3 ಬಾಹ್ಯಾಕಾಶ ನೌಕೆಗೆ ಅಗತ್ಯವಿರುವ ನೂಕುಬಲ ನೀಡುವ ನಾಲ್ಕನೇ ಹಂತದ ಪ್ರಕ್ರಿಯೆ ಯಶಸ್ವಿಯಾಗಿದೆ.

ಮುಂದಿನ ಹಂತಗಳು ಹೇಗೆ ಇರಲಿವೆ?
ಬಾಹ್ಯಾಕಾಶ ಲೋಕದಲ್ಲಿ ಭಾರತದ ಹೆಸರು ರಾರಾಜಿಸುತ್ತಿದೆ. ಅದ್ರಲ್ಲೂ ಚಂದ್ರನ ಸೂಕ್ಷ್ಮ ಅಧ್ಯಯನಕ್ಕೆ ಭಾರತ ಹಲವು ಯೋಜನೆಗಳನ್ನ ಕೈಗೊಂಡಿದೆ. ಈ ಮಧ್ಯೆ ಚಂದ್ರನ ದಕ್ಷಿಣ ಧ್ರುವ ತಲುಪುವುದು ಭಾರತದ ಮೊದಲ ಗುರಿ, ಹೀಗಾಗಿ ಚಂದ್ರನ ದಕ್ಷಿಣ ಧ್ರುವ ತಲುಪಲು ಬಾಹ್ಯಾಕಾಶ ನೌಕೆಗೆ ಅಗತ್ಯವಿರುವ ನೂಕುಬಲ ನೀಡಲಾಗುತ್ತಿದೆ. ಹಾಗೇ ಈ ಪ್ರಕ್ರಿಯೆಗಳಲ್ಲಿ ಇಸ್ರೋ ಯಶಸ್ವಿಯಾಗಿದೆ. ಇನ್ನು ಐದನೇ ಹಂತದ ಪ್ರಕ್ರಿಯೆಯು ಜುಲೈ 25ರಂದು ಮಧ್ಯಾಹ್ನ 2ರಿಂದ 3ಗಂಟೆ ನಡುವೆ ನಡೆಯಲಿದ್ದು, ಅಲ್ಲಿಂದ ಮುಂದಕ್ಕೆ ಚಂದ್ರನಿಗೆ ಭಾರತ ಮತ್ತಷ್ಟು ಹತ್ತಿರವಾಗಲಿದೆ. ಜುಲೈ 31ರಂದು ನಡೆಯುವ ಆರನೇ ಹಂತದ ಪ್ರಕ್ರಿಯೆ ಮೂಲಕ ಚಂದ್ರನ ಕಕ್ಷೆಗೆ ಗಗನನೌಕೆಯನ್ನು ಸೇರಿಸುವ ಕಾರ್ಯ ಆರಂಭವಾಗಲಿದೆ ಎಂದು ಇಸ್ರೋ ತಿಳಿಸಿದೆ.
ಭಾರತದ ಯೋಜನೆ ಬಗ್ಗೆ ಹೆಮ್ಮೆ
ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ 'ಚಂದ್ರಯಾನ-3' ರಾಕೆಟ್ ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ ಮತ್ತು ರೋವರ್ ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿಯ ಕಡೆಗೆ ಪ್ರಯಾಣ ಬೆಳೆಸಿದೆ. ಭೂಮಿಯಿಂದ 3,84,000 ಕಿಮೀ ದೂರದಲ್ಲಿರುವ ಚಂದ್ರನತ್ತ ಭಾರತದ ಯಾತ್ರೆ ಹೊರಟಿದೆ. ಬಾಹ್ಯಾಕಾಶ ವಿಜ್ಞಾನಿಗಳ ಕುತೂಹಲದ ಕೇಂದ್ರ ಬಿಂದು, ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವುದೇ ಯೋಜನೆ ಟಾರ್ಗೆಟ್. ಹೀಗೆ ಇಡೀ ಜಗತ್ತೇ ಮೆಚ್ಚುವ ಕೆಲಸವನ್ನ ಭಾರತದ ಇಸ್ರೋ ಮಾಡಿದ್ದು, ಎಲ್ಲೆಲ್ಲೂ ಈ ಕುರಿತು ಚರ್ಚೆ ನಡೆಯುತ್ತಿದೆ.
ರೋವರ್ ಚಂದ್ರನ ಮೇಲೆ ಇಳಿಯುವುದು ಯಾವಾಗ?
ಚಂದ್ರನ ಮೇಲೆ ನೀರು ಹುಡುಕುವ ಕೆಲಸ ಸೇರಿ, ಸಾಕಷ್ಟು ಅಧ್ಯಯನವನ್ನ ನಡೆಸಲು ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಅಷ್ಟಕ್ಕೂ ಸಾವಿರಾರು ವರ್ಷದಿಂದ ಮಾನವನ ಕುತೂಹಲದ ಕೇಂದ್ರಬಿಂದು ಚಂದ್ರ. ಹೀಗಾಗಿ ಚಂದ್ರನ ಮೇಲೆ ಮನುಷ್ಯನಿಗೆ ಸಾಕಷ್ಟು ಸೆಳೆತ ಇದ್ದೇ ಇದೆ. ಇಸ್ರೋ ಈ ಎಲ್ಲಾ ಕುತೂಹಲಗಳಿಗೆ ಉತ್ತರವನ್ನು ಹುಡುಕಿ ಚಂದ್ರನತ್ತ ಹೊರಟಿದೆ. ಇನ್ನೇನು 'ಚಂದ್ರಯಾನ -3' ಕೆಲವೇ ದಿನದಲ್ಲಿ ತನ್ನ ಗುರಿ ತಲುಪಿ, ಆಗಸ್ಟ್ 23ರಂದು ಚಂದ್ರನ ಮೇಲೆ ರೋವರ್ ಇಳಿಸಲಿದೆ.
ಒಟ್ನಲ್ಲಿ ಭಾರತ ಬಾಹ್ಯಾಕಾಶ ಲೋಕದಲ್ಲಿ ಮಿಂಚುತ್ತಿದೆ. ಅದ್ರಲ್ಲೂ ಜಗತ್ತಿನಲ್ಲೇ ಮೊದಲ ಬಾರಿಗೆ 2008ರಲ್ಲಿ ಇಸ್ರೋ ಸಂಸ್ಥೆ ಚಂದ್ರನ ಮೇಲೆ ನೀರು ಪತ್ತೆ ಮಾಡಿತ್ತು. ಈಗ ಎಲ್ಲ ಪ್ರಶ್ನೆಗೂ ಚಂದ್ರನ ಮೇಲೆ ಇಳಿದು ಉತ್ತರ ಕಂಡುಕೊಳ್ಳಲಿದೆ. ಹೀಗಾಗಿ ಇನ್ನೇನು ಕೆಲವೇ ದಿನದಲ್ಲಿ ಈ ಯೋಜನೆಯ ಸಕ್ಸಸ್ ಕಣ್ತುಂಬಿಕೊಳ್ಳಲು ಶತಕೋಟಿ ಭಾರತೀಯರು ಕಾಯುತ್ತಿದ್ದಾರೆ. ಇಸ್ರೋ ಸಂಸ್ಥೆ ಕೂಡ ತನ್ನ ಹಾದಿಯಲ್ಲಿ ಗೆಲುವನ್ನ ಪಡೆಯುತ್ತಿದ್ದು ಭವಿಷ್ಯದಲ್ಲಿ ಚಂದ್ರ ಕೂಡ ಮನುಷ್ಯರಿಗೆ ಭೂಮಿಯಂತೆ ಜಾಗ ನೀಡಿದರೂ ಅಚ್ಚರಿ ಇಲ್ಲ.












Click it and Unblock the Notifications