ಟ್ರಿಪಲ್ ತಲಾಖ್ ರದ್ದಾದರೆ ಹೊಸ ಕಾನೂನು: ಸುಪ್ರೀಂಗೆ ಕೇಂದ್ರ
ಕೆಲ ದಿನಗಳಿಂದ ಸುಪ್ರೀಂ ಕೋರ್ಟ್ ನಲ್ಲಿ 'ಟ್ರಿಪಲ್ ತಲಾಖ್' ಅಸ್ತಿತ್ವದ ಔಚಿತ್ಯದ ಬಗ್ಗೆ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸೋಮವಾರ ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರವಾಗಿ, ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಸುಪ್ರೀಂ ಕೋರ್ಟ
ನವದೆಹಲಿ, ಮೇ 15: ಭಾರತೀಯ ಮುಸ್ಲಿಂ ಸಮುದಾಯದಲ್ಲಿ ಜಾರಿಯಲ್ಲಿರುವ ಸಾಂಪ್ರದಾಯಿಕ ವಿಚ್ಛೇದನ ಪದ್ಧತಿಯಾದ ಟ್ರಿಪಲ್ ತಲಾಖ್ ಅನ್ನು ರದ್ದುಗೊಳಿಸಿದರೆ, ಮುಸ್ಲಿಮರಿಗಾಗಿ ಹೊಸತೊಂದು ವಿಚ್ಛೇದನ ಕಾನೂನನ್ನು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಕೆಲ ದಿನಗಳಿಂದ ಸುಪ್ರೀಂ ಕೋರ್ಟ್ ನಲ್ಲಿ 'ಟ್ರಿಪಲ್ ತಲಾಖ್' ಅಸ್ತಿತ್ವದ ಔಚಿತ್ಯದ ಬಗ್ಗೆ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸೋಮವಾರ ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರವಾಗಿ, ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಸುಪ್ರೀಂ ಕೋರ್ಟ್ ಗೆ ತಿಳಿಸಿದರು.
ಇದೇ ವಿಚಾರಣೆಯಲ್ಲೇ ಮುಸ್ಲಿಂ ಸಮುದಾಯದ ಇನ್ನಿತರ ಪದ್ಧತಿಗಳಾದ ಬಹು ಪತ್ನಿತ್ವ,ನಿಖಾ ಹಲಾಲಾದ ಬಗ್ಗೆಯೂ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ರೋಹಟಗಿ ಮಾಡಿದ ಮನವಿಗೆ ಸುಪ್ರೀಂ ನ್ಯಾಯಪೀಠ ಸಮ್ಮತಿಸಲಿಲ್ಲ.
ಈ ಹಿಂದೆ, ಟ್ರಿಪಲ್ ತಲಾಖ್ ಬಗೆಗಿನ ನಿರ್ಧಾರವನ್ನು ಸುಪ್ರೀಂ ಕೋರ್ಟ್ ನ ಐವರು ಸದಸ್ಯರುಳ್ಳ ನ್ಯಾಯಪೀಠಕ್ಕೆ ವರ್ಗಾಯಿಸಿದ್ದ ಕೆಳ ಹಂತದ ನ್ಯಾಯಪೀಠ, ತಲಾಖ್ ವಿಷಯದ ಜತೆಯಲ್ಲೇ ಬಹುಪತ್ನಿತ್ವ ಹಾಗೂ ನಿಖಾ ಹಲಾಲದ ಬಗ್ಗೆಯೂ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದ್ದನ್ನು ರೋಹಟಗಿ ಸುಪ್ರೀಂ ಕೋರ್ಟ್ ನ ಗಮನಕ್ಕೆ ತಂದರು.
ಆದರೆ, ಈಗಿರುವ ಸಮಯ ಅಭಾವದಲ್ಲಿ ಈ ಮೂರೂ ವಿಚಾರಗಳ ಬಗ್ಗೆ ಸೂಕ್ತ ವಿಚಾರಣೆ ನಡೆಸಿ, ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಸದ್ಯಕ್ಕೆ ಟ್ರಿಪಲ್ ತಲಾಖ್ ಬಗ್ಗೆ ಮಾತ್ರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.