'ಆಪರೇಷನ್ ಸ್ನೋ ಲೆಪಾರ್ಡ್': ಗಲ್ವಾನ್ ಕಣಿವೆ ಸಂಘರ್ಷದ ವಿವರ
ನವದೆಹಲಿ, ಜನವರಿ 26: ದೇಶದ 72ನೇ ಗಣರಾಜ್ಯೋತ್ಸವದ ಪ್ರಯುಕ್ತ ಭಾರತ ಸರ್ಕಾರವು 2020ರಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಗಲ್ವಾನ್ ಕಣಿವೆ ಸಂಘರ್ಷದ ವಿವರವನ್ನು ಬಹಿರಂಗಪಡಿಸಲಿದೆ. ಕಳೆದ ವರ್ಷ ಜೂನ್ 15ರಂದು ಲಡಾಖ್ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆ ಮತ್ತು ಚೀನಾ ಪಡೆಗಳು ದೈಹಿಕ ಸಂಘರ್ಷ ನಡೆಸಿದ್ದವು. ಅದರಲ್ಲಿ ಭಾರತ ತನ್ನ 20 ಯೋಧರನ್ನು ಕಳೆದುಕೊಂಡಿದ್ದರೆ, ಚೀನೀ ಸೈನಿಕರ ಸಾವು ನೋವಿನ ವಿವರ ಇದುವರೆಗೂ ಲಭ್ಯವಾಗಿಲ್ಲ.
16 ಬಿಹಾರ ಇನ್ಫೆಂಟ್ರಿ ಬಟಾಲಿಯನ್ನ ಕಮಾಂಡಿಂಗ್ ಅಧಿಕಾರಿ ಕರ್ನಲ್ ಸಂತೋಷ್ ಬಾಬು ಅವರಿಗೆ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಹಾವೀರ ಚಕ್ರ ನೀಡಲಿದ್ದಾರೆ. ಕೇಂದ್ರ ಸರ್ಕಾರ ಸೋಮವಾರ ನೀಡಿರುವ ಮಾಹಿತಿ ಪ್ರಕಾರ, ಗಲ್ವಾನ್ ಕಣಿವೆ ಹಿಂಸಾಚಾರದ ಮೊದಲ ವಿಸ್ತೃತ ವಿವರಗಳನ್ನು ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಲಿದೆ.
ಕರ್ನಲ್ ಸಂತೋಷ್ ಬಾಬು ಅವರನ್ನು 'ಆಪರೇಷನ್ ಸ್ನೋ ಲೆಪಾರ್ಡ್' ವೇಳೆ ಗಲ್ವಾನ್ ಕಣಿವೆಯಲ್ಲಿ ನಿಯೋಜಿಸಲಾಗಿತ್ತು. ಶತ್ರುವಿನ ಎದುರು 'ಅಬ್ಸರ್ವೇಷನ್ ಪೋಸ್ಟ್' ಸ್ಥಾಪಿಸುವ ಹೊಣೆ ಅವರಿಗೆ ನೀಡಲಾಗಿತ್ತು' ಎಂದು ಕೇಂದ್ರ ಸರ್ಕಾರದ ಹೇಳಿಕೆ ತಿಳಿಸಿದೆ. ಮುಂದೆ ಓದಿ.

ಪಡೆಗಳ ಸಂಘಟನೆ
'ಸೂಕ್ತ ಯೋಜನೆಯೊಂದಿಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ತಮ್ಮ ಪಡೆಗಳಿಗೆ ವಿವರ ನೀಡುವ ಹಾಗೂ ಅವುಗಳನ್ನು ಸಂಘಟಿಸುವ ಕಾರ್ಯವನ್ನು ಬಾಬು ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು. ಸಮನಾದ ಎತ್ತರದ ಪ್ರದೇಶಗಳಿಂದ ತೀವ್ರವಾದ ಕಲ್ಲು ತೂರಾಟದ ಜತೆಗೆ, ಮಾರಕ ಹಾಗೂ ಹರಿತವಾದ ಆಯುಧಗಳನ್ನು ಬಳಸಿ ದಾಳಿ ನಡೆಸಿದ ವೈರಿಗಳನ್ನು ಅಷ್ಟೇ ಕಠಿಣವಾಗಿ ಎದುರಿಸಿ ಪ್ರತಿರೋಧ ಪ್ರದರ್ಶಿಸಿದ್ದಾರೆ' ಎಂದು ಬಾಬು ಅವರನ್ನು ಶ್ಲಾಘಿಸಲಾಗಿದೆ.

ಶತ್ರುವಿನ ಪ್ರಯತ್ನಕ್ಕೆ ಪ್ರತಿರೋಧ
'ಶತ್ರು ಸೈನಿಕರ ಹೆಚ್ಚಿನ ಬಲದ ಹಿಂಸಾತ್ಮಕ ಮತ್ತು ಆಕ್ರಮಣಕಾರಿ ದಾಳಿಯಿಂದ ಕಂಗೆಡದೆ ಅಧಿಕಾರಿಯು ತಮ್ಮ ವೈಯಕ್ತಿಕ ಗಮನಕ್ಕಿಂತ ಸೇವೆಯ ನೈಜ ಉತ್ಸಾಹದೊಂದಿಗೆ ಭಾರತ ಸೇನೆಯನ್ನು ಹಿಮ್ಮೆಟ್ಟಿಸುವ ಶತ್ರುವಿನ ಪ್ರಯತ್ನಕ್ಕೆ ಪ್ರತಿರೋಧ ಒಡ್ಡುವುದನ್ನು ಮುಂದುವರಿಸಿದ್ದರು' ಎಂದು ಹೇಳಲಾಗಿದೆ.

ಗಾಯಗೊಂಡಿದ್ದರೂ ಮುನ್ನೆಡೆಸಿದರು
ಕರ್ನಲ್ ಬಾಬು ಅವರ ಕೆಚ್ಚೆದೆಯ ಪ್ರದರ್ಶನದ ಉದಾಹರಣೆಯನ್ನು ನೀಡಿರುವ ಕೇಂದ್ರ ಸರ್ಕಾರದ ಉಲ್ಲೇಖವು, 'ತೀವ್ರವಾಗಿ ಗಾಯಗೊಂಡಿದ್ದರೂ ಕರ್ನಲ್ ಬಿಕುಮಲ್ಲಾ ಸಂತೋಷ್ ಬಾಬು ಅವರು ತಮ್ಮ ನೆಲೆಯಲ್ಲಿ ಶತ್ರುಗಳ ಕ್ರೂರ ದಾಳಿಯನ್ನು ಎದುರಿಸಲು ಪ್ರತಿಕೂಲ ಸನ್ನಿವೇಶದ ನಡುವೆಯೂ ಅವರು ಸಂಪೂರ್ಣ ಹಿಡಿತ ಹಾಗೂ ಸಾಮರ್ಥ್ಯದೊಂದಿಗೆ ಸೇನೆಯನ್ನು ಮುನ್ನಡೆಸಿದ್ದಾರೆ' ಎಂದು ತಿಳಿಸಿದೆ.

ಕೊನೆಯುಸಿರಿನವರೆಗೂ ಹೋರಾಟ
'ಶತ್ರು ಸೈನಿಕರೊಂದಿಗೆ ಕೈ ಕೈ ಮಿಲಾಯಿಸುವಂತಹ ಕಾದಾಟವು ನಡೆದಾಗ ಅವರು ತಮ್ಮ ಕೊನೆಯ ಉಸಿರು ಇರುವವರೆಗೂ ವೈರಿಗಳ ದಾಳಿಗೆ ಅಷ್ಟೇ ಪ್ರಬಲವಾಗಿ ಪ್ರತಿರೋಧ ಒಡ್ಡಿದ್ದರು. ಈ ಮೂಲಕ ಸಮರ ರಂಗದಲ್ಲಿ ತಮ್ಮ ಪಡೆಗಳಿಗೆ ಸ್ಫೂರ್ತಿ ಹಾಗೂ ಉತ್ತೇಜನ ನೀಡಿದ್ದರು' ಎಂದು ವಿವರಿಸಿದೆ.












Click it and Unblock the Notifications