ಮೋದಿ ಮೌನ, ಸಚಿವರೂ ಮೌನ. ಬಾಯಿ ಬಿಟ್ಟಿದ್ದು ವಿಕೆ ಸಿಂಗ್ ಮಾತ್ರ
ನವದೆಹಲಿ, ಏಪ್ರಿಲ್ 13: ಜಮ್ಮು ಮತ್ತು ಕಾಶ್ಮೀರದ ಕತುವಾದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಮತ್ತು ಉತ್ತರ ಪ್ರದೇಶದ ಉನ್ನಾವೊ ಅತ್ಯಾಚಾರ ಪ್ರಕರಣಗಳು ಜಾಗತಿಕ ಸದ್ದು ಮಾಡುತ್ತಿವೆ. ಎರಡೂ ಕಡೆಗಳಲ್ಲಿ ಆಳುವ ಪಕ್ಷದ ವಿರುದ್ಧ ಸರಣಿ ಆಕ್ರೋಶ ವ್ಯಕ್ತವಾಗಿದೆ. ಅಂದ ಹಾಗೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಯೋಗಿ ಆದಿತ್ಯನಾಥ್ ಸರಕಾರವಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಅತ್ಯಾಚಾರ ಪ್ರಕರಣ ಸಂಬಂಧ ನಿಧಾನವಾಗಿಯಾದರೂ ಪ್ರತಿಕ್ರಿಯೆ ನೀಡಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿಯಾದಿಯಾಗಿ ಕೇಂದ್ರ ಸಚಿವರು ಸಂಸದರು ಉತ್ತರ ಮಾತ್ರ ಒಂದೇ.. ಮೌನ.. ಮೌನ.. ಮೌನ.
ಹಾಗೆ ನೋಡಿದರೆ 2014ರ ಚುನಾವಣೆಗೂ ಮುನ್ನ, "ಬಹುತ್ ಹುವಾ ನಾರಿ ಪರ್ ವಾರ್, ಆಬ್ಕಿ ಬಾರ್ ಮೋದಿ ಸರಕಾರ (ಮಹಿಳೆಯರ ಮೇಲಿನ ದಾಳಿ ಸಾಕು, ಈ ಬಾರಿ ಮೋದಿ ಸರಕಾರ)," ಎನ್ನುವ ಘೋಷಣೆಯನ್ನು ಬಿಜೆಪಿ ಮಾಡಿತ್ತು.

ಜತೆಗೆ ಪ್ರಧಾನಿ ನರೇಂದ್ರ ಮೋದಿ ಸರಕಾರದ ಪ್ರಮುಖ ಅಭಿಯಾನಗಳಲ್ಲಿ, 'ಬೇಟಿ ಬಚಾವೋ, ಬೇಟಿ ಪಡಾವೋ' ಕೂಡ ಒಂದು. ಆದರೆ ಸದಾ ನಾರಿ ನಾರಿ ಎನ್ನುವ ಪ್ರಧಾನಿ ಮಾತ್ರ ಈಗ ಪರಾರಿಯಾಗಿದ್ದಾರೆ. ಅವರು ಸಂಪುಟದ ಸಹೋದ್ಯೋಗಿಗಳೂ ಈ ಬಗ್ಗೆ ಬಾಯಿ ಬಿಡುತ್ತಿಲ್ಲ.
ಈ ಬಗ್ಗೆ ಮಾತನಾಡಿದವರು ವಿದೇಶಾಂಗ ಖಾತೆ ಸಹಾಯಕ ಸಚಿವರಾದ ವಿ.ಕೆ. ಸಿಂಗ್ ಮಾತ್ರ. "ಮನುಷ್ಯರಾಗಿ ನಾವು ವಿಫಲವಾಗಿದ್ದೇವೆ. ಆದರೆ ಆಕೆಗೆ ನ್ಯಾಯವನ್ನು ನಿರಾಕರಿಸುವುದಿಲ್ಲ," ಎಂದಿದ್ದಾರೆ.
ಆದರೆ ಸಮಾಜಿಕ ಜಾಲತಾಣಗಳಲ್ಲೆಲ್ಲಾ ಆಗಾಗ ಅಬ್ಬರಿಸುವ ಮೋದಿ ಸರಕಾರದ ಸಂಸದರೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಅವರ ಟ್ಟಿಟ್ಟರ್, ಫೇಸ್ಬುಕ್ ಖಾತೆಗಳಲ್ಲಿ ಏನೇನೋ ಸಂದೇಶಗಳಿವೆ. ಆದರೆ ಸಂತಾಪ ಸಂದೇಶ, ನ್ಯಾಯಕ್ಕಾಗಿ ಬೇಡಿಕೆ ಸಂದೇಶಗಳು ಮಾತ್ರ ಕಾಣಿಸುತ್ತಿಲ್ಲ.
ಹೀಗಾಗಿ ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲೆಲ್ಲೂ ಮೋದಿ ಮೌನದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ.












Click it and Unblock the Notifications