ದೇಶೀಯ ವಿಮಾನ ಪ್ರಯಾಣಿಕರ ನಿಯಮದಲ್ಲಿ ಶೀಘ್ರದಲ್ಲೇ ಪ್ರಮುಖ ಬದಲಾವಣೆ ಸಾಧ್ಯತೆ
ನವದೆಹಲಿ ಜೂನ್ 7: ಕೊರೊನಾವೈರಸ್ನ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ಪ್ರಯಾಣದಲ್ಲಿ ಸಾಕಷ್ಟು ನಿರ್ಬಂಧಗಳನ್ನು ವಿಧಿಸಲಾಗಿದೆ. ಇದರಲ್ಲಿ ಶೀಘ್ರದಲ್ಲಿಯೇ ಪ್ರಮುಖ ಬದಲಾವಣೆಯೊಂದನ್ನು ಮಾಡಲು ಕೇಂದ್ರ ಸರ್ಕಾರ ಚಿಂತಿಸುತ್ತಿದೆ. ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡ ಪ್ರಯಾಣಿಕರಿಗೆ ಕೊರೊನಾ ನೆಗೆಟಿವ್ ವರದಿಯಿಲ್ಲದೆ ದೇಶೀಯ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈಗ ವಿಮಾನ ಪ್ರಯಾಣಕ್ಕೆ ಮುನ್ನ ಬಹುತೇಕ ರಾಜ್ಯಗಳಲ್ಲಿ ಪ್ರಯಾಣಿಕರು ಕೊರೊನಾ ವೈರಸ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಆದರೆ ಲಸಿಕೆಯನ್ನು ಹಾಕಿಸಿಕೊಂಡಿರುವ ಪ್ರಯಾಣಿಕರಿಗೆ ದೇಶೀಯ ವಿಮಾನದಲ್ಲಿ ಪ್ರಯಾಣಿಸಲು ಇದರಿಂದ ವಿನಾಯಿತಿ ದೊರೆಯುವ ಸಾಧ್ಯತೆಯಿದೆ.
ಕೇಂದ್ರ ವಿಮಾನಯಾನ ಸಚಿವರು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರು ಸೇರಿದಂತೆ ಕೇಂದ್ರದ ಕೆಲ ಸಚಿವರು ಈ ಬಗ್ಗೆ ಈಗಾಗಲೇ ಕೆಲ ವಿಮಾನಯಾನ ಸಂಸ್ಥೆಗಳ ಪಾಲುದಾರರೊಂದಿಗೆ ಚರ್ಚೆಯನ್ನು ನಡೆಸಿದ್ದಾರೆ. ಈ ಬಗ್ಗೆ ರಾಜ್ಯಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಶೀಘ್ರದಲ್ಲಿಯೇ ತೆಗೆದುಕೊಳ್ಳಲಿದೆ ಎನ್ನಲಾಗಿದೆ.

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ವಿಮಾನಯಾನ ಸಂಸ್ಥೆಗಳು ಈಗಾಗಲೇ ಭಾರೀ ನಷ್ಟವನ್ನು ಅನುಭವಿಸಿದೆ. ಈ ವಿಚಾರವಾಗಿ ವಿಮಾನಯಾನ ಸಚಿವಾಲಯಕ್ಕೆ ಸಂಸ್ಥೆಗಳು ಮನವಿಯನ್ನು ಮಾಡಿದೆ. ಈ ರೀತಿಯ ನಿರ್ಬಂಧಗಳಿಂದ ವಿಮಾನ ಪ್ರಯಾಣದ ಚೇತರಿಕೆಗೆ ಅಡ್ಡಿಯಾಗುತ್ತದೆ. ಹೀಗಾಗಿ ಸಂಪೂರ್ಣವಾಗಿ ಲಸಿಕೆಯನ್ನು ಹಾಕಿದ ಪ್ರಯಾಣಿಕರಿಗೆ ಕೊರೊನಾ ವೈರಸ್ನ ಪರೀಕ್ಷೆಯಿಲ್ಲದೆ ಪ್ರಯಾಣಕ್ಕೆ ಅವಕಾಶವನ್ನು ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಭಾರತದಲ್ಲಿ ದೇಶೀಯ ವಿಮಾನಗಳಲ್ಲಿ 3,00,000 ಜನರು ಫೆಬ್ರವರಿ ತಿಂಗಳಿನಲ್ಲಿ ನಿತ್ಯವೂ ಪ್ರಯಾಣಿಸುತ್ತಿದ್ದರು. ಆದರೆ ಆನಂತರ ಕೊರೊನಾ ವೈರಸ್ನ ಎರಡನೇ ಅಲೆಯ ಉಂಟಾದ ಕಾರಣ ಈ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡಿದೆ. ಈಗ ನಿತ್ಯ ಕೇವಲ 85,000 ದೇಶೀಯ ಪ್ರಯಾಣಿಕರು ನಿತ್ಯ ಪ್ರಯಾಣಿಸುತ್ತಿದ್ದಾರೆ.












Click it and Unblock the Notifications